ಗುಬ್ಬಿ: ಸಮರ್ಪಕ ವಿದ್ಯುತ್ ಒದಗಿಸಬೇಕೆಂದು ಒತ್ತಾಯಿಸಿ ನೂರಾರು ರೈತರು ತಾಲೂಕಿನ ನಿಟ್ಟೂರು ಬೆಸ್ಕಾಂ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಪಂಚಾಕ್ಷರಿ ಮಾತನಾಡಿ, ರಾಜ್ಯ ಸರ್ಕಾರ ರೈತರ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಕೃಷಿ ಮಾಡುವ ರೈತರಿಗೆ ಅನ್ಯಾಯ ಮಾಡುತ್ತಿದೆ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ರೈತರಿಗೆ ವಿದ್ಯುತ್ ನೀಡದೆ ಅನ್ಯಾಯ ವೆಸಗುತ್ತಿದ್ದಾರೆ, ಸೋಲಾರ್ ಕಂಪನಿಗಳೊಂದಿಗೆ ಡೀಲ್ ಮಾಡಿಕೊಂಡು ರೈತರಿಗೆ ಮರಣ ಶಾಸನ ಬರೆಯಲು ಮುಂದಾಗಿದ್ದಾರೆ ಎಂದು ಕಿಡಿ ಕಾರಿದರು.
ಮುಖಂಡ ಎಸ್.ಡಿ.ಡಿಲೀಪ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಗ್ಯಾರಂಟಿ ಎಂದು ರೈತರ, ಬಡವರ ಬದುಕನ್ನೇ ನಾಶ ಮಾಡಲು ಹೊರಟಿದೆ, ರೈತರ ಬದುಕಿನ ಜೊತೆ ಸರಕಾರ ಚೆಲ್ಲಾಟವಾಡುತ್ತಿದ್ದು ಅನ್ನ ಬೆಳೆಯುವ ರೈತನ ಬಾಳಿಗೆ ಮಣ್ಣು ಹಾಕಲು ಹೊರಟಿದೆ, ಸರಕಾರ ಹೇಳುವುದೇ ಒಂದು ಅಧಿಕಾರಿಗಳು ಮಾಡುತ್ತಿರುವುದು ಇನ್ನೊಂದು, ರೈತರಿಗೆ ಪ್ರತಿನಿತ್ಯ ಏಳು ಗಂಟೆಗಳ ಕಾಲ ತ್ರಿ ಫೇಸ್ ಹಾಗೂ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ವರೆಗೆ ಸಿಂಗಲ್ ಫೇಸ್ ನೀಡಬೇಕು, ಇಲ್ಲದೆ ಹೋದರೆ ದೊಡ್ಡ ಮಟ್ಟದ ಹೋರಾಟ ಮಾಡುವುದಂತೂ ಸತ್ಯ, ಅಧಿಕಾರಿಗಳು ಸರಿಯಾದ ರೀತಿಯಲ್ಲಿ ರೈತರಿಗೆ ಸ್ಪಂದನೆ ನೀಡದೆ ಹೋದರೆ ರಸ್ತೆ ತಡೆದು ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.
ಮುಖಂಡ ಬೈರಪ್ಪ ಸೇರಿದಂತೆ ಹಲವರು ಮಾತನಾಡಿದರು, ಬೆಸ್ಕಾಂ ಇಇ ಪ್ರಶಾಂತ್ ಕೊಡ್ಲಗಿ ಮಾತನಾಡಿ ರೈತರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಇನ್ನೂ ಮುಂದೆ ವಿದ್ಯುತ್ ನೀಡಲಾಗುತ್ತದೆ, ಪ್ರತಿ ದಿನ ಏಳು ಗಂಟೆ ತ್ರಿ ಫೇಸ್ ವಿದ್ಯುತ್ ನೀಡಲು ಮುಂದಾಗುತ್ತೇವೆ ಮತ್ತು ರಾತ್ರಿ ವೇಳೆಯಲ್ಲಿ ತೋಟದ ಮನೆಗಳಿಗೂ ಸಹ ಸಿಂಗಲ್ ಫೇಸ್ ನೀಡುತ್ತೇವೆ ಮತ್ತು ಹಳೆಯ ವಿದ್ಯುತ್ ತಂತಿಗಳನ್ನು ಬದಲಾವಣೆ ಮಾಡಲಾಗುತ್ತದೆ ಎಂದು ಆಶ್ವಾಸನೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಮುಖಂಡರಾದ ಗಿರೀಶ್, ಶಿವಶಂಕರ್ ಬಾಬು, ಪರಮೇಶ್, ಓಂಕಾರ್, ಕುಮಾರ್ ಸ್ವಾಮಿ ಸೇರಿದಂತೆ ನೂರಾರು ರೈತರು ಇದ್ದರು.
Comments are closed.