ಕುಣಿಗಲ್: ಪಟ್ಟಣದ ಭಾವಸಾರ ಕ್ಷತ್ರೀಯ ಮಂಡಳಿ ವತಿಯಿಂದ ದೊಡ್ಡಪೇಟೆಯಲ್ಲಿರುವ ಶ್ರೀಪಾಂಡುರಂಗ ರುಕ್ಮಿಣಿ ದೇವಸ್ಥಾನದಲ್ಲಿ ಶ್ರೀಪಾಂಡುರಂಗ ರುಕುಮಾಯಿಯವರ 20ನೇ ವರ್ಷದ ದಿಂಡಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜ್ಯಭಾವ ಸಾರಕ್ಷತ್ರೀಯ ಮಂಡಳಿ ರಾಜ್ಯಾಧ್ಯಕ್ಷ ಶ್ರೀನಿವಾಸರಾವ್ ಪಿಸ್ಸೆ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಂಘಟನೆಗೆ ಹೆಚ್ಚು ಒತ್ತು ನೀಡುವ ಜೊತೆಯಲ್ಲಿ ಜನಾಂಗದವರು ಪರಸ್ಪರ ಸಹಕಾರದಿಂದ ಸಮಗ್ರವಾಗಿ ಮುಂದುವರೆಯಲು ಶ್ರಮಿಸಬೇಕಿದೆ, ಇಂತಹ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗಳಿಂದಾಗಿ ಸಮಾಜದಲ್ಲಿ ಶಾಂತಿ, ನೆಮ್ಮದಿ ಮೂಡುವ ಜೊತೆಯಲ್ಲಿ ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು.
ಪ್ರಮುಖ ಕೀರ್ತನಾಕಾರರಾಗಿ ಆಗಮಿಸಿದ ಹ.ಭ.ಪ ಧನಂಜಯ ಮಾತನಾಡಿ, ಭಗವನಾಮ್ಮ ಸಂಕೀರ್ತನೆಗಳ ಸ್ತುತಿ ಮಾಡುವ ಮೂಲಕ ಮನಸಿಗೆ ನೆಮ್ಮದಿ ಶಾಂತಿ ಮೂಡುತ್ತದೆ, ಇತ್ತೀಚಿನದಿನಗಳಲ್ಲಿ ದೈಹಿಕ ಆರೋಗ್ಯ ಇದ್ದರೂ ಮಾನಸಿಕ ಆರೋಗ್ಯ ಇಲ್ಲದೆ ಪರದಾಡುವಂತಹ ಸ್ಥಿತಿ ಹೆಚ್ಚಿದೆ, ಸಾಮೂಹಿಕ ಭಜನೆ, ಕೀರ್ತನೆಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜಪ ಮಾಡುವುದರಿಂದ ಬಲಿಷ್ಠ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ, ದಿಂಡಿ ಉತ್ಸವದ ಪ್ರಮುಖ ಆಕರ್ಷಣೆಗಳೆ ಕೀರ್ತನೆ ಪಾರಾಯಣ, ಭಜನೆ ಎಂದರು.
ಶ್ರೀಸ್ವಾಮಿಯವರ ಉತ್ಸವ ಮೂರ್ತಿಯನ್ನು ಬೆಳ್ಳಿಪಲ್ಲಕ್ಕಿಯಲ್ಲಿ ಕೂರಿಸಿ ಪ್ರಮುಖ ಬೀದಿಗಳಲ್ಲಿ ಕೀರ್ತನೆ, ಭಜನೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಮಂಡಳಿಯ ಬೆಂಗಳೂರು, ವಿಜಯನಗರ ಅಧ್ಯಕ್ಷ ಸತ್ಯನಾರಾಯಣ ಅಷ್ಟಕರ್, ತಾಲೂಕು ಅಧ್ಯಕ್ಷ ಗಿರೀಶ್ ಕುಮಾರ್ ಅಷ್ಟಕರ್, ಯುವಕ ಮಂಡಳಿ ಅಧ್ಯಕ್ಷ ಬಾಬುರಾವ್ ಅಷ್ಟಕರ್, ಪದಾಧಿಕಾರಿಗಳಾದ ಸುರೇಶ್ ಪುಟಾಣಿ, ಅಶ್ವಥ ನಾರಾಯಣ ಬಾಂಬೋರೆ, ನರಸಿಂಹಸ್ವಾಮಿ ಉತ್ತರಕರ್ ಇತರರು ಇದ್ದರು.
Comments are closed.