ಕೊರಟಗೆರೆ: ಸಸ್ಯ ಸಂಜೀವಿನ ಕ್ಷೇತ್ರ ಸಿದ್ಧರಬೆಟ್ಟ ಹಾಗೂ ಚೆನ್ನರಾಯನ ದುರ್ಗ ಬೆಟ್ಟ ರಾಜ್ಯದಲ್ಲಿಯೇ ತನ್ನದೇ ಆದ ವೈಶಿಷ್ಟ್ಯತೆ ಉಳಿಸಿಕೊಂಡಿವೆ, ಆದರೆ ಕೆಲ ದಿನಗಳಿಂದ ತಾಲ್ಲೂಕಿನಲ್ಲಿ ಬಿಸಿಲಿನ ತಾಪ ಹೆಚ್ಚಿದೆ, ಕಿಡಿಗೇಡಿಗಳ ಅವಾಂತರಕ್ಕೆ ತಾಲ್ಲೂಕಿನ ಬಹುತೇಕ ಬೆಟ್ಟ ಗುಡ್ಡಗಳು ರಾತ್ರಿಯಾದರೆ ಹೊತ್ತಿ ಉರಿಯುತ್ತಿವೆ, ಸಿದ್ಧರಬೆಟ್ಟದ ಕೋಳಿಕಲ್ ಅರಣ್ಯ ಪ್ರದೇಶ ಕೂಡ ಒಂದಾಗಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಚೆನ್ನರಾಯನದುರ್ಗ ಹೋಬಳಿಯಲ್ಲಿ ಬೆಟ್ಟ ಗುಡ್ಡಗಳ ಸಾಲು ಸಾಲು ಇದೆ, ಬೇಸಿಗೆ ಬಂದರೆ ಮಾತ್ರ ಇಲ್ಲಿನ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗುತ್ತಿದ್ದು, ಬೆಂಕಿಯಿಂದ ಸಾವಿರಾರು ಸಸ್ಯ ಪ್ರಭೇದ, ನೂರಾರು ಸಣ್ಣ ಪುಟ್ಟ ಜಾತಿಯ ಕಾಡು ಪ್ರಾಣಿಗಳು, ಸರಿಸೃಪಗಳು ಬೆಂಕಿಯಲ್ಲಿ ಬೆಂದು ಹೋಗುತ್ತಿವೆ, ಇನ್ನೂ ಬಾದೆ ಹುಲ್ಲುಗಾವಲು ಸಂಪೂರ್ಣ ಸುಟ್ಟು ಕರಕಲಾಗುತ್ತಿದೆ.
ಕೆಲವು ದಿನಗಳ ಹಿಂದೆ ಸಿದ್ದರಬೆಟ್ಟ (ಬೂದಗವಿ) ಸಮೀಪದ ಕೋಳಿಕಲ್ ಅರಣ್ಯ ಪ್ರದೇಶದಲ್ಲಿ ರಾತ್ರಿ 7 ಗಂಟೆಯ ಸುಮಾರಿಗೆ ಬೆಂಕಿಬಿದ್ದಿದ್ದು, ಬೆಂಕಿಗೆ ಸಾಕಷ್ಟು ಪ್ರಮಾಣದ ಅರಣ್ಯ ಪ್ರದೇಶ ಸಂಪತ್ತು ಸುಟ್ಟು ಕರಕಲಾಗಿದೆ, ಗುಡ್ಡಗಳಿಗೆ ಶಿಕಾರಿಗೆ ಹೋಗುವ ಬೇಟೆಗಾರರು, ಗುಡ್ಡಗಳ ಪಕ್ಕ ರಸ್ತೆಯಿದ್ದು ಜನರು ಸಂಚರಿಸುವ ವೇಳೆ ಬೀಡಿ ಅಥವಾ ಸಿಗರೇಟ್ ಸೇದಲು ಹಚ್ಚಿದ ಬೆಂಕಿಕಡ್ಡಿಯನ್ನು ಹಾಗೆಯೇ ಎಸೆಯುವುದರಿಂದ ಅವಘಡ ಸಂಭವಿಸುತ್ತಿವೆ, ಗುಡ್ಡಗಳ ಪಕ್ಕ ಕೃಷಿ ಭೂಮಿ ಹೊಂದಿರುವ ರೈತರು ಕಾಡು ಪ್ರಾಣಿಗಳು ಜಮೀನಿಗೆ ಬಾರದಂತೆ ಹಾಕುವ ಬೆಂಕಿಯಿಂದಲೂ ಗುಡ್ಡಗಳಿಗೆ ಬೆಂಕಿ ಬೀಳುತ್ತದೆ ಎನ್ನಲಾಗುತ್ತಿದೆ.
Comments are closed.