ಮಧುಗಿರಿಯಲ್ಲಿ ಕೋವಿಡ್ ತಡೆಗೆ ಕಟ್ಟುನಿಟ್ಟಿನ ಕ್ರಮ

534

Get real time updates directly on you device, subscribe now.

ಮಧುಗಿರಿ: ತಾಲ್ಲೂಕಿನಲ್ಲಿ ಕೋವಿಡ್ ವೈರಸ್ ವ್ಯಾಪಕವಾಗಿ ಹಬ್ಬಿ ಯುಗಾದಿಯಿಂದ ಶ್ರೀರಾಮನವಮಿವರೆವಿಗೂ 443 ಸೋಂಕಿತರು ಪತ್ತೆಯಾಗಿದ್ದು ಏಪ್ರಿಲ್ 22 ರಂದು ಒಂದೇ ದಿನ 123 ಪ್ರಕರಣ ಪತ್ತೆಯಾಗಿ ಪ್ರಥಮ ಬಾರಿಗೆ ಸೋಂಕಿತರ ಸಂಖ್ಯೆ ಶತಕ ದಾಟಿದೆ.
ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆಗಳಾದ ಶ್ರೀರಾಘವೇಂದ್ರ ಆಸ್ಪತ್ರೆ ಮತ್ತು ಅನುಪಮ ಕ್ಲಿನಿಕ್ನಲ್ಲಿ ಜ್ವರ ಮತ್ತಿತರ ಕಾಯಿಲೆಗಳ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಕಳೆದ 3 ದಿನಗಳಿಂದ ಈ ಎರಡೂ ಆಸ್ಪತ್ರೆಗಳು ಚಿಕಿತ್ಸೆ ಕೊಡುವುದನ್ನು ನಿಲ್ಲಿಸಿದ ಪರಿಣಾಮ ಕೋವಿಡ್ ಪರೀಕ್ಷೆ ಹೆಚ್ಚಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗುವಂತಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚು ಪತ್ತೆಗೂ ಕಾರಣವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ತಾತ್ಕಾಲಿಕ ಚಿಕಿತ್ಸೆ ಪಡೆದು ಮನೆಯೊಳಗೆ ತಿರುಗುತ್ತಿದ್ದ ರೋಗಿಗಳು ಈ ಕೊರೊನ ವೈರಸ್ನ್ನು ಹೆಚ್ಚಾಗಿ ಸಮುದಾಯಕ್ಕೆ ಹರಡುವ ಸಾಧ್ಯತೆಯಿದ್ದು, ಈ 2 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿಲ್ಲಿಸಿದ್ದಕ್ಕೆ ಸಾರ್ವಜನಿಕ ವಲಯಗಳಲ್ಲಿ ನಾನಾ ತರಹದ ದೂರು ಸಹ ಕೇಳಿ ಬಂದಿತ್ತು.
ತಹಸೀಲ್ದಾರ್, ಸಿಪಿಐ, ಪಿಎಸೈ, ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಜೀಪ್ಗಳು ಒಮ್ಮೆಲೆ ಪಟ್ಟಣದ ಹೃದಯ ಭಾಗದಲ್ಲಿರುವ ಡೂಂಲೈಟ್ ವೃತ್ತಕ್ಕೆ ಬಂದು ನಿಂತು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುವ ಮೂಲಕ ಲಾಕ್ಡೌನ್ ಮಾದರಿಯಲ್ಲೆ ದಿಢೀರನೆ ಕ್ರಮ ಕೈಗೊಂಡ ಪರಿಣಾಮ ವ್ಯಾಪಾರಸ್ಥರಲ್ಲಿ ಆತಂಕ ಮನೆ ಮಾಡಿತು, ಮತ್ತೊಂದೆಡೆ ಸ್ವಯಂ ಪ್ರೇರಣೆಯಿಂದ ಲಾಕ್ಡೌನ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ವ್ಯಾಪಾರಸ್ಥರಿಗೆ ಈ ಕ್ರಮ ಸಹಕಾರಿಯಾಯಿತು.
ಎಪಿಎಂಸಿ ಸದಸ್ಯ ಜಿ.ಆರ್.ಶ್ರೀನಾಥ್ ಮಾತನಾಡಿ, ಸ್ವಯಂ ಲಾಕ್ಡೌನ್ ಮಾಡುವ ಬಗ್ಗೆ ಮಧುಗಿರಿ ನಾಗರಿಕ ಹಿತರಕ್ಷಣಾ ವೇದಿಕೆಯವರೊಂದಿಗೆ ಮಾತಾನಾಡಿದ್ದೆವು, ಈ ಬಗ್ಗೆ ಅಲ್ಲಲ್ಲಿ ಚರ್ಚೆಗಳು ನಡೆದು ಸಭೆ ಸೇರಿ ವೀಕ್ ಎಂಡ್ ಕರ್ಫ್ಯೂ ನಂತರದಲ್ಲಿ ಮಧುಗಿರಿಯಲ್ಲಿ ಲಾಕ್ಡೌನ್ ಮಾಡುವ ಉದ್ದೇಶ ಹೊಂದಲಾಗಿತ್ತು, ಸರ್ಕಾರದ ಈ ಕ್ರಮ ಸ್ವಾಗತಿಸುತ್ತಿದ್ದೇವೆ, ಆದರೆ ಹೋಟೆಲ್ ಮತ್ತು ಬೇಕರಿಗಳಲ್ಲಿ ಆಹಾರ ಪದಾರ್ಥ ತಯಾರಿ ಮಾಡಿಕೊಂಡಿದ್ದು, ಬೀದಿಬದಿ ವ್ಯಾಪಾರಿಗಳಿಗೆ ಕಷ್ಟವೆನಿಸಿದರೂ ಜೀವವಿದ್ದರೆ ಜೀವನ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದು ಕಂಡು ಬಂತು.
ತಹಸಿಲ್ದಾರ್ ವೈ.ರವಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ರಾತ್ರಿ ಜೊತೆಗೆ ವೀಕೆಂಡ್ ಕರ್ಫ್ಯೂ ಈಗಾಗಲೇ ಘೋಷಣೆಯಾಗಿದ್ದು, ಸಾರ್ವಜನಿಕರಿಗೆ ಬೇಕಾಗುವ ಅಗತ್ಯ ವಸ್ತುಗಳು, ಶೇವಿಂಗ್ ಸಲೂನ್ಗಳು, ಬ್ಯೂಟಿ ಪಾರ್ಲರ್ಗಳು, ಹಣ್ಣು ತರಕಾರಿ ಹೂವು, ಮೆಡಿಕಲ್ ಸ್ಟೋರ್, ದಿನಸಿ ಅಂಗಡಿಗಳು ತೆರೆಯಬಹುದು, ಹೋಟೆಲ್ಗಳಲ್ಲಿ ಪಾರ್ಸಲ್ ವ್ಯವಸ್ಥೆ ಮಾಡಿಕೊಂಡು ತೆರೆಯಬಹುದೆಂಬ ಆದೇಶ ಬಂದಿದೆ ಎಂದು ತಿಳಿಸಿದರು.
ಪಟ್ಟಣದಲ್ಲಿ ಈಗಾಗಲೇ ಸಿನಿಮಾ ಮಂದಿರ, ದೇವಸ್ಥಾನ, ಚರ್ಚ್, ಮಸೀದಿಗಳು ಬಂದ್ ಆಗಿದ್ದು ಬ್ಯಾಂಕ್ ಎಟಿಎಂಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ಗಳ ಸಂಚಾರ ಇದ್ದರು ಪ್ರಯಾಣಿಕರ ಕೊರತೆ ಕಂಡುಬಂತು, ಬುಧವಾರ ರಾತ್ರಿ ಎಂ.ಎನ್.ಕೆ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮದಲ್ಲಿ ಹೆಚ್ಚು ಜನ ಜಮಾಯಿಸಿದ್ದರೆಂಬ ಸುಳ್ಳು ಮಾಹಿತಿಯನ್ನಾಧಾರಿಸಿ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಮಂಗಳ ಗೌರಮ್ಮ ಮತ್ತು ಪುರಸಭಾ ಮುಖ್ಯಾಧಿಕಾರಿ ಅಮರ್ನಾರಾಯಣ್ ಪರಿಶೀಲಿಸಿ ಕೇವಲ ವಧು ವರರು ಸೇರಿ ಹದಿನೈದು ಮಂದಿ ಇದ್ದದ್ದು ಕಂಡು ಹಿಂದಿರುಗಿದರು.
ಗ್ರಾಪಂ ವ್ಯಾಪ್ತಿಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕುರಿತು ತಾಪಂ ಇಒ ಮೂಲಕ ಪಿಡಿಒಗಳಿಗೆ ಸೂಚಿಸಲಾಗಿದೆ ಎಂದು ತಹಸಿಲ್ದಾರ್ ವೈ.ರವಿ ತಿಳಿಸಿದರು.
ಸಿಪಿಐ ಎಂ.ಎಸ್.ಸರ್ದಾರ್, ಪಿಎಸ್ಐ ಮಂಗಳಗೌರಮ್ಮ, ಟಿಎಚ್ಒ ರಮೇಶ್ ಬಾಬು, ಕಂದಾಯ ಇಲಾಖೆಯವರು ಪುರಸಭೆ ಇಲಾಖೆಯವರು ಲಾಕ್ಡೌನ್ ಮಾಡಿಸುವ ಸಂದರ್ಭದಲ್ಲಿ ಇದ್ದರು.

Get real time updates directly on you device, subscribe now.

Comments are closed.

error: Content is protected !!