ರೈತರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ: ಕೆ.ಎನ್.ರಾಜಣ್ಣ

101

Get real time updates directly on you device, subscribe now.

ನಿಟ್ಟೂರು: ರೈತರ ಅಭಿವೃದ್ಧಿ ಮತ್ತು ಅವರ ಅನುಕೂಲಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದು ನಮ್ಮ ಮೊದಲ ಆದ್ಯತೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.
ಗುಬ್ಬಿ ತಾಲೂಕಿನ ನಿಟ್ಟೂರಿನಲ್ಲಿ ಕೊರೊನಾ ಹಿನ್ನಲೆಯಲ್ಲಿ ಸರಳವಾಗಿ ನೂತನವಾದ ಡಿಸಿಸಿ ಬ್ಯಾಂಕ್ನ 39ನೇ ಶಾಖೆ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಕೊರೊನಾ ಅಬ್ಬರ ಅಧಿಕವಾಗಿದ್ದು ಸಾರ್ವಜನಿಕರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಕಳೆದ ಬಾರಿ ಮೊದಲ ಅಲೆ ಬಂದಾಗ ನಮ್ಮ ಬ್ಯಾಂಕ್ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಸಾಕಷ್ಟು ಅನುಕೂಲ ಮಾಡಲಾಗಿತ್ತು, ಇದರಿಂದ ಅವರ ಜೀವನ ಒಂದು ಹಂತಕ್ಕೆ ಬಂದಿತ್ತು, ಮತ್ತೆ ಈಗ ಎರಡನೇ ಅಲೆ ಹೆಚ್ಚುತ್ತಿದ್ದು ಮತ್ತೆ ವ್ಯಾಪಾರ ವಹಿವಾಟು ಮಾಡಲು ಅನಾನುಕೂಲವಾಗಿದೆ, ಸರಕಾರ ಮೊದಲು ಆರ್ಥಿಕವಾಗಿ ಹಿಂದುಳಿದವರ ಬಗ್ಗೆ ಯೋಚಿಸಿ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಪ್ರತಿ ಹೋಬಳಿಗಳಲ್ಲೂ ಶಾಖೆಗಳನ್ನು ತೆರೆದು ರೈತರಿಗೆ ಅನುಕೂಲವಾಗುವ ಅವರ ಅಭಿವೃದ್ಧಿಗೆ ಬೇಕಾದ ಎಲ್ಲಾ ಸೌಲಭ್ಯ ನೀಡಲು ನಮ್ಮ ಬ್ಯಾಂಕ್ ಸಶಕ್ತವಾಗಿದೆ, ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ವಿಶೇಷ ಯೋಜನೆಗಳನ್ನು ಜಾರಿಗೆ ತಂದು ರೈತಾಪಿ ವರ್ಗದವರಿಗೆ ಅನುಕೂಲ ಮಾಡಲಾಗುತ್ತದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ನ ಗುಬ್ಬಿ ತಾಲೂಕು ನಿರ್ದೇಶಕ ಪ್ರಭಾಕರ್ ಮಾತನಾಡಿ, ಕೆ.ಎನ್.ರಾಜಣ್ಣ ಅವರ ಆಲೋಚನೆಗಳು ಹಾಗೂ ರೈತರ ಪರ ಅವರ ಕಾರ್ಯಕ್ರಮ ರಾಜ್ಯದಲ್ಲೇ ವಿಶೇಷ ಎನಿಸುತ್ತವೆ, ರೈತರ ಮಗನಾಗಿ ಹುಟ್ಟಿ ಬೆಳೆದ ರಾಜಣ್ಣನವರಿಗೆ ರೈತರ ಕಷ್ಟ ಸುಖಗಳು ಗೊತ್ತಿದೆ, ಹಾಗಾಗಿ ದೇಶದಲ್ಲೇ ಯಾರು ಮಾಡದಂತಹ ಸಾಲ ಮನ್ನಾದಂಥ ವಿಶೇಷ ಕಾರ್ಯ ಮಾಡಿ ರೈತರ ಹಿತ ಕಾಯುವ ಕೆಲಸ ಮಾಡಿದ್ದಾರೆ, ಹೋಬಳಿಗೊಂದು ಶಾಖೆ ತೆರೆಯುವುದರಿಂದ ಸ್ಥಳೀಯ ರೈತಾಪಿ ವರ್ಗಕ್ಕೆ ಸಾಲ ಪಡೆಯಲು ಹಾಗೂ ಹೆಚ್ಚಿನ ಅನುಕೂಲ ಪಡೆಯಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಡಾ.ನವ್ಯ ಚಂದ್ರಶೇಖರ್ ಬಾಬು, ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ, ತುಮಕೂರು ಗ್ರಾಮಾಂತರದ ಟಿಎಪಿಎಂಎಸ್ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ, ಡಿಸಿಸಿ ಬ್ಯಾಂಕ್ನ ನಿರ್ದೇಶಕರಾದ ನಾಗೇಶ್ ಬಾಬು, ಮೂರ್ತಿ, ಸಿದ್ದಲಿಂಗಪ್ಪ, ಲಕ್ಷ್ಮೀನಾರಾಯಣ, ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್, ಆರ್ಥಿಕ ಸಲಹೆಗಾರ ಜಂಗಮಪ್ಪ, ಟಿಎಪಿಎಂಎಸ್ ಅಧ್ಯಕ್ಷ ಕಿಡಿಗಣ್ಣಪ್ಪ, ತಾಲೂಕು ಮೇಲ್ವಿಚಾರಕ ನಿಜಾನಂದ ಮೂರ್ತಿ, ವಿಜಯ್ ಕುಮಾರ್, ನಿಟ್ಟೂರು ವಿಎಸ್ಎಸ್ಎನ್ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಹಾಗೂ ಎಲ್ಲಾ ನಿರ್ದೇಶಕರು ಇದ್ದರು.

Get real time updates directly on you device, subscribe now.

Comments are closed.

error: Content is protected !!