ಬಡ ರೋಗಿಗಳ ಪ್ರಾಣ ಉಳಿಸಲು ರೆಮ್‌ಡಿಸಿವಿರ್‌ ಕೊಡ್ರಿ: ಡಿ.ಕೆ.ಸುರೇಶ್

ನಾವು ಕಾಳಸಂತೆಯಲ್ಲಿ ಲಸಿಕೆ ಮಾರೋಲ್ಲ

448

Get real time updates directly on you device, subscribe now.

ಕುಣಿಗಲ್‌: ರೀ ಸ್ವಾಮಿ.. ನಾವು ರೆಮ್‌ಡಿಸಿವಿರ್ ನ್ನು ಕಾಳಸಂತೆಯಲ್ಲಿ ಮಾರೋಲ್ಲ, ತಾಲೂಕಿನ ಬಡರೋಗಿಗಳ ಪ್ರಾಣ ಉಳಿಸಲು ಕೂಡಲೆ ಬೇಕಾಗುವಷ್ಟು ಲಸಿಕೆ ನೀಡಿ ಎಂದು ಸಂಸದ ಡಿ.ಕೆ.ಸುರೇಶ್‌ ಜಿಲ್ಲಾಉಸ್ತುವಾರಿ ಸಚಿವರಿಗೆ ಆಗ್ರಹಿಸಿದರು.
ಗುರುವಾರ ತಾಪಂ ಸಭಾಂಗಣದಲ್ಲಿ ತಾಲೂಕಿನ ಕೊವಿಡ್‌ ಸ್ಥಿತಿಗತಿಗಳ ಪರಿಶೀಲನೆಗೆ ಜಿಲ್ಲಾಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಸದರು ಮಾತನಾಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಆಮ್ಲಜನಕ ಬೆಡ್‌ ಇವೆ, ಹೆಚ್ಚುವರಿ ರೋಗಿಗಳು ಬಂದ ಹಿನ್ನೆಲೆಯಲ್ಲಿ 20 ಕ್ಕೂ ಹೆಚ್ಚುವರಿ ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಸೂಚನೆಯಂತೆ ತುರ್ತುಸ್ಥಿತಿಯಲ್ಲಿರುವವರಿಗೆ ರೆಮ್‌ಡಿಸಿವಿರ್‌ ಲಸಿಕೆ ನೀಡಬೇಕು, ಸರ್ಕಾರ ಪೂರೈಕೆ ಮಾಡುತ್ತಿಲ್ಲ ಎಂದರು.
ಟಿಎಚ್‌ಒ ಜಗದೀಶ್‌ ಮಾತನಾಡಿ, 257 ಪೂರೈಕೆಯಾಗಿದ್ದು 30 ಲಸಿಕೆ ಇದೆ ಎಂದರು.
ಶಾಸಕ ಡಾ.ರಂಗನಾಥ ಮಾತನಾಡಿ, ಅಗತ್ಯ ಇರುವ ರೋಗಿಗಳಿಗೆ ನೀಡದೆ ವಂಚಿಸಿ ಬಲವಂತವಾಗಿ ಉಳಿಸಲಾಗಿದೆ, ತಾವು ವೈದ್ಯರಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ 70 ಕ್ಕೂ ಹೆಚ್ಚು ಮಂದಿಗೆ ರೆಮ್‌ಡಿಸಿವಿರ್‌ ಬೇಕಾಗಿದೆ ಎಂದರು.
ಸಂಸದರ ಆಗ್ರಹದ ಮೇರೆಗೆ ಅಗತ್ಯ ಲಸಿಕೆ ಪೂರೈಕೆ ಮಾಡಲು ಡಿ ಎಚ್ ಒ ಗೆ ಸಚಿವರು ಸೂಚಿಸಿದರು.
ಗ್ರಾಮಾಂತರ ಪ್ರದೇಶದಲ್ಲಿನ ಸೋಂಕಿತರ ಮನೆ ಭೇಟಿಗೆ ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳು ಸಮರ್ಪಕ ಕ್ರಮ ಕೈಗೊಂಡಿಲ್ಲ, ಯಾರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸಿಡಿಮಿಡಿಗೊಂಡ ಸಚಿವರು, ತಾಪಂ ಇಒ ಅವರನ್ನು ಕೆಲ ವಿವರ ಕೋರಿದ್ದು ಇಒ ನೀಡಿದ ಉತ್ತರಕ್ಕೆ ತೃಪ್ತರಾಗದೆ ಈ ಬಗ್ಗೆ ವರದಿ ನೀಡುವಂತೆ ಎಸಿ ಅಜಯ್‌ ಅವರಿಗೆ ಸೂಚಿಸಿದರು.
ಟಿ ಎಚ್ ಒ ಜಗದೀಶ್‌, ತಾಲೂಕಿನಲ್ಲಿ ಏಪ್ರಿಲ್‌ 1 ರಿಂದ 11,831 ಸ್ವಾಬ್‌ ಪರೀಕ್ಷೆಗೆ ಸಂಗ್ರಹಿಸಿದ್ದು 390 ರ್ಯಾಟ್‌, 9927 ಆರ್ ಟಿ ಪಿ ಸಿ ಆರ್‌ ಮಾಡಲಾಗಿದೆ, 1299 ಪಾಸಿಟಿವ್‌ ಬಂದಿದೆ, ಹಾಲಿ 1083 ಸೋಂಕಿತರಿದ್ದು 194 ನಗರ, 889 ಗ್ರಾಮಾಂತರ ಪ್ರದೇಶದವರಾಗಿದ್ದಾರೆ. ಪಟ್ಟಣದ ಆಸ್ಪತ್ರೆಯಲ್ಲಿ 50 ಬೆಡ್‌ ಆಮ್ಲಜನಕ ವ್ಯವಸ್ಥೆ ಇದೆ. ಆಸ್ಪತ್ರೆಯಲ್ಲಿನ ಕೊರತೆ ಬಗ್ಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡದ ಕಾರಣ ಸಂಸದರು ಅಸಮಾಧಾನ ವ್ಯಕ್ತಪಡಿಸಿ ಇರುವ ನ್ಯೂನ್ಯತೆ ಹೇಳಿದರೆ ಪರಿಹಾರ ಕಂಡುಕೊಳ್ಳಬಹುದು, ಸಮಸ್ಯೆ ಹೇಳಿ ಎಂದರು.
ಶಾಸಕ ಡಾ.ರಂಗನಾಥ್‌ ಮಾತನಾಡಿ, ಸೋಂಕು ತಪಾಸಣೆ ವರದಿ ಬೇಗ ಬರುತ್ತಿಲ್ಲ, 10 ದಿನದ ನಂತರ ಬರುತ್ತಿದೆ, ಇದರಿಂದ ಸೋಂಕು ಹೆಚ್ಚಲು ಕಾರಣವಾಗಿದೆ, ಸೋಂಕು ತಪಾಸಣೆ ಕಡಿಮೆ ಮಾಡಿರುವುದರಿಂದಲೂ ಸೋಂಕು ಹೆಚ್ಚಳವಾಗಲು ಕಾರಣವಾಗಿದೆ, ಪಟ್ಟಣ ಆಸ್ಪತ್ರೆಯಲ್ಲಿ ಐದು ಐಸಿಯು ಬೆಡ್‌ ಇದ್ದರೂ ಬಳಕೆ ಆಗುತ್ತಿಲ್ಲ, 6 ವೆಂಟಿಲೇಟರ್‌ ಇದ್ದು ಮೂರು ದೆಹಲಿಯಿಂದ ಪೂರೈಕೆ ಮಾಡಿರುವುದು ಕೆಲಸಕ್ಕೆ ಬರೊಲ್ಲ, 3 ಇದ್ದರೂ ರೋಗಿಗಳಿಗೆ ಸಹಾಯವಾಗುತ್ತಿಲ್ಲ, ಇನ್ನು ಹೆಚ್ಚಿನ ಐಸಿಯು ಮಂಜೂರು ಮಾಡುವಂತೆ, ಅಮೃತೂರು ಸೇರಿದಂತೆ ಕುಣಿಗಲ್ ಗೆ ಹೆಚ್ಚುವರಿ ಆಮ್ಲಜನಕ ಹೊಂದಿದ ಬೆಡ್‌ ಪೂರೈಕೆ ಮಾಡಬೇಕು, ಇಲ್ಲವಾದಲ್ಲಿ ತಾವು ಉಪವಾಸ ಮುಷ್ಕರ ಮುಂದುವರೆಸುವುದಾಗಿ ಹೇಳಿದಾಗ ಸಚಿವರು, ವೈದ್ಯರಿದ್ದೀರಾ ಉಪವಾಸ ಆರೋಗ್ಯಕ್ಕೆ ಒಳ್ಳೆಯದು ಮಾಡಿ, ಆದರೆ ಪ್ರಚಾರ ಮಾಡಬೇಕೆಂದೆ ಮಾಡಿದರೆ ನಾವೇನು ಮಾಡಲಾಗದು ಎಂದರು.
ಸಂಸದರು ಮಧ್ಯ ಪ್ರವೇಶಿಸಿ ಸರ್ಕಾರ ಹೀಗೆ ಹೇಳಿದರೆ ಹೇಗೆ, ಮುಂದೆ ಪರಿಸ್ಥಿತಿ ಗಂಭೀರವಾಗಲಿದೆ, ಏನಾದರೂ ಮಾಡಬೇಕು ಎಂದಾಗ ಸಚಿವರು, ಅಮೃತೂರಿನಲ್ಲಿ 30 ಬೆಡ್ ಗೆ ಆಮ್ಲಜನಕವನ್ನು ಸಂಸದರು ವ್ಯವಸ್ಥೆ ಮಾಡಿದರೆ ಉಳಿಕೆ ಸ್ಟಾಫ್‌ ನೀಡುವ ಭರವಸೆ ನೀಡಿ, ಇನ್ನು ಮುಂದೆ ಸೋಂಕಿತರನ್ನು ಕೊವಿಡ್‌ ಕೇರ್‌ ಸೆಂಟರ್‌ಗೆ ಸ್ಥಳಾಂತರಿಸಬೇಕು, ತೊಂದರೆ ಮಾಡುವರನ್ನು ಪೊಲೀಸರನ್ನು ಬಳಸಿ ಸ್ಥಳಾಂತರಿಸಬೇಕು ಎಂದರು.
ಗುರುವಾರ ನಡೆದ ಉಸ್ತುವಾರಿ ಸಚಿವರ ಸಭೆಯಿಂದ ತಾಲೂಕಿಗೆ ನಿಗದಿತ ಪ್ರಮಾಣದ ರೆಮ್‌ಡಿಸಿವಿರ್‌ ಲಸಿಕೆ ಪೂರೈಕೆ, ಸೋಂಕು ಪತ್ತೆಗೆ ಇದ್ದ ಮಿತಿ ರದ್ದುಗೊಳಿಸಿ ರೋಗ ಲಕ್ಷಣಗಳಿರುವವರಿಗೆಲ್ಲಾ ತಪಾಸಣೆ, ಅಮೃತೂರಿನಲ್ಲಿ 30 ಬೆಡ್‌ ವ್ಯವಸ್ಥೆ, ಮಲ್ಲನಾಯಕನಹಳ್ಳಿಯಲ್ಲಿ 120 ಬೆಡ್‌ ಕೊವಿಡ್‌ ಕೇರ್‌ ಸೆಂಟರ್‌, ಅಂಕನಹಳ್ಳಿಯಲ್ಲಿ 120 ಬೆಡ್‌ ಕೇರ್‌ ಸೆಂಟರ್‌, ಅಗತ್ಯ ಆಮ್ಲಜನಕ ವ್ಯವಸ್ಥೆ, ಕೊವಿಡ್‌ ಎರಡನೆ ಲಸಿಕೆ ಕೂಡಲೆ ಪೂರೈಕೆ, ಗಂಭೀರ ಸ್ಥಿತಿ ರೋಗಿಗಳನ್ನು ಐಸಿಯು ಚಿಕಿತ್ಸೆಗೆ ತುಮಕೂರು ನಗರಕ್ಕೆ ಕಳಿಸುವಂತೆ ಈ ನಿಟ್ಟಿನಲ್ಲಿ ಎಸಿ ಯವರಿಗೆ ಹೊಣೆಗಾರಿಕೆ, ಕೊವಿಡ್‌ನಿಂದ ಮೃತಪಟ್ಟವರ ಡೆತ್‌ ಆಡಿಟ್‌ ಮಾಡಲು ತೀರ್ಮಾನಿಸಲಾಯಿತು.
ಜಿಲ್ಲಾಧಿಕಾರಿ ವೈ.ಸಿ.ಪಾಟೀಲ್‌, ಜಿಪಂ ಸಿಇಒ ಡಾ.ವಿದ್ಯಾಕುಮಾರಿ, ಎಸ್ಪಿ ವಂಶಿಕೃಷ್ಣ, ಡಿವೈಎಸ್ಪಿ ರಮೇಶ್‌, ಎಸಿ ಅಜಯ್‌, ತಹಶೀಲ್ದಾರ್‌ ಕಲ್ಯಾಣಿ, ಡಿ ಎಚ್ ಒ ದೇವೆಂದ್ರಪ್ಪ, ಇಒ ಜೋಸೆಫ್‌, ಪುರಸಭಾಧ್ಯಕ್ಷ ನಾಗೇಂದ್ರ, ಪಿಕಾರ್ಡ್‌ ಬ್ಯಾಂಕ್‌ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!