ಸಾರ್ವಜನಿಕ ಆಸ್ಪತ್ರೆಗೆ ಐಸಿಯೂ ಮಾನಿಟರ್‌, ಇಸಿಜಿ ಯಂತ್ರ ಕೊಡುಗೆ

ಜನತೆಯ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿ: ಶಾಸಕ

514

Get real time updates directly on you device, subscribe now.

ಶಿರಾ: ಶಿರಾ ಜನತೆಯ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದ್ದು, ಆಸ್ಪತ್ರೆಯಲ್ಲಿ ಯಾವುದೇ ಮೂಲಭೂತ ಸೌಲಭ್ಯದ ಕೊರತೆ ಬಾರದಂತೆ ಎಲ್ಲಾ ರೀತಿಯಲ್ಲೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಾ.ಸಿ.ಎಂ.ರಾಜೇಶ್‌ ಗೌಡ ಹೇಳಿದರು.
ಶಿರಾ ಸಾರ್ವಜನಿಕ ಆಸ್ಪತ್ರೆಯ ಐಸಿಯು ಘಟಕಕ್ಕೆ 1.50 ಲಕ್ಷ ವೆಚ್ಚದ ಐಸಿಯು ಮಾನಿಟರ್‌ ಹಾಗೂ ಇಸಿಜಿ ಯಂತ್ರವನ್ನು ತಮ್ಮ ಸ್ವಂತ ಹಣದಿಂದ ಕೊಡುಗೆ ನೀಡಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚುವರಿಯಾಗಿ ಇನ್ನೂ ಎರಡು ಮಾನಿಟರ್ ಗಳ ಅವಶ್ಯಕತೆ ಇದ್ದು, ಇದಕ್ಕಾಗಿ ಸಚಿವರಿಗೆ ಮನವಿ ಮಾಡಲಾಗಿದೆ, ಶೀಘ್ರದಲ್ಲಿಯೇ ಸರಬರಾಜು ಮಾಡುವ ಭರವಸೆ ನೀಡಿದ್ದಾರೆ, ಮುಂದಿನ ದಿನಗಳಲ್ಲಿ ಅವುಗಳನ್ನು ಅಳವಡಿಸಲಾಗುವುದು, ರೋಗಿಗಳ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳಲಾಗುವುದು ಎಂದರು.
ಕೊರೋನಾ 2ನೇ ಅಲೆಯು ತೀವ್ರತರದಲ್ಲಿ ರೋಗಿಯ ಜೀವಕ್ಕೆ ಹಾನಿ ಮಾಡುತ್ತಿದ್ದು, 45 ಒಳಗಡೆ ಇರುವ ಯುವಕರು ಮೃತ ಪಡುತ್ತಿರುವುದು ಕಳವಳಕಾರಿಯಾಗಿದೆ, ಆದ್ದರಿಂದ ಸಾರ್ವಜನಿಕರು ಸ್ವಲ್ಪ ರೋಗ ಲಕ್ಷಣ ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ಬಂದು ವೈದ್ಯರು ನೀಡುವ ಔಷಧಿ ಚಿಕಿತ್ಸೆ ಪಡೆಯಿರಿ, ಸೋಂಕು ತೀವ್ರಗೊಂಡು ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ನಂತರ ಆಸ್ಪತ್ರೆಗೆ ಬಂದರೆ ವೈದ್ಯರೂ ಏನು ಮಾಡಲಾಗುವುದಿಲ್ಲ ಎಂದರು.
ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಾಥ್‌ ಮಾತನಾಡಿ, ಶಿರಾ ತಾಲ್ಲೂಕಿನಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಅವರು ಪ್ರತಿ ಕ್ಷಣ ನಮ್ಮ ಜೊತೆಗಿದ್ದು ರೋಗಿಗಳ ಆರೋಗ್ಯ ವಿಚಾರಿಸುತ್ತಾರೆ, ಆಸ್ಪತ್ರೆಗೆ ಅವಶ್ಯಕವಿರುವ ಆಕ್ಸಿಜನ್ ಗೆ ಅಮೇಜಾನ್ ನಿಂದ ಆಕ್ಸಿಜನ್‌ ಸಾಂದ್ರಕ ಕೊಡಿಸಿದ್ದರು, ಅದರ ಜೊತೆಗೆ ಆಸ್ಪತ್ರೆ ಆವರಣದಲ್ಲಿಯೇ ಶಾಶ್ವತವಾಗಿ ಆಕ್ಸಿಜನ್‌ ಉತ್ಪಾದನಾ ಘಟಕ ಪ್ರಾರಂಭವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಆಕ್ಸಿಜನ್ ಗೆ ಯಾವುದೇ ತೋಂದರೆಯಾಗುವುದಿಲ್ಲ, ಕೊರೊನಾ ಸೋಂಕಿತರು ಮನೆಯಲ್ಲಿದ್ದರೆ ಮನೆಯ ಇತರರಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ, ಕಾಯಿಲೆ ಸೂಕ್ಷ್ಮವಾಗಿರುವುದರಿಂದ ನಿರ್ಲಕ್ಷ ವಹಿಸುವುದು ಒಳ್ಳೆಯದಲ್ಲ, ನಮ್ಮಲ್ಲಿ ಎಲ್ಲಾ ರೀತಿಯ ಚಿಕಿತ್ಸೆ ಇದೆ, ವೈದ್ಯರ ಕೊರತೆ ಇಲ್ಲ, ಯಾರು ಭಯ ಪಡಬೇಡಿ, ಜನರ ರಕ್ಷಣೆಗೆ ನಾವಿದ್ದೇವೆ, ರೋಗ ಲಕ್ಷಣ ಇದ್ದರೆ ತಕ್ಷಣ ಆಸ್ಪತ್ರೆಗೆ ಬನ್ನಿ, ವೈದ್ಯರು ಕೊಡುವ ಔಷಧಿ ತೆಗೆದುಕೊಂಡರೆ ಯಾವುದೇ ತೊಂದರೆ ಇಲ್ಲ ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ.ಡಿ.ಎಂ.ಗೌಡ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!