ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

ಹಳ್ಳಿಗಳಲ್ಲಿ ಕೊರೊನಾ ತಡೆಗೆ ಮುಂದಾಗಿ

500

Get real time updates directly on you device, subscribe now.

ತುಮಕೂರು: ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡದಂತೆ ತಡೆಯಲು ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸೋಂಕು ಮತ್ತು ಸಂಪರ್ಕಿತರ ಪತ್ತೆ, ಕೋವಿಡ್‌ ಪರೀಕ್ಷೆ, ಕೋವಿಡ್‌ ಕೇರ್‌ ನಿರ್ವಹಣೆ ಮತ್ತು ಸೋಂಕಿತರನ್ನು ಕೇರ್ ಗೆ ಸ್ಥಳಾಂತರಿಸುವುದು, ತ್ವರಿತ ಚಿಕಿತ್ಸೆ, ಜನಜಾಗೃತಿ ಕಾರ್ಯವನ್ನು ಕಟ್ಟುನಿಟ್ಟಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಪ್ರತಿ ಗ್ರಾಮಗಳಲ್ಲೂ ಪರಿಣಾಮಕಾರಿಯಾಗಿ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವುದರೊಂದಿಗೆ ಸೋಂಕನ್ನು ನಿಯಂತ್ರಣಕ್ಕೆ ತರಬೇಕು ಎಂದು ನಿರ್ದೇಶಿಸಿದರು.
ಈವರೆಗೆ ಗ್ರಾಮ ಪಂಚಾಯತ್‌ ಗಳನ್ನು ಹಾಟ್‌ ಸ್ಪಾಟ್‌ ಎಂದು ಗುರುತಿಸಲಾಗುತ್ತಿತ್ತು, ಇನ್ನು ಮುಂದೆ ಗ್ರಾಮಗಳನ್ನೂ ಹಾಟ್‌ ಸ್ಪಾಟ್‌ ಪ್ರದೇಶಗಳೆಂದು ಗುರುತಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, 20ಕ್ಕಿಂತ ಹೆಚ್ಚು ಪ್ರಕರಣಗಳಿರುವ ಗ್ರಾಮವನ್ನು ರೆಡ್‌ ಝೋನ್‌, 10ಕ್ಕಿಂತ ಹೆಚ್ಚು ಪ್ರಕರಣಗಳಿರುವ ಹಳ್ಳಿಗಳನ್ನು ಹಾಟ್‌ ಸ್ಪಾಟ್‌ ಪ್ರದೇಶಗಳೆಂದು ಹಾಗೂ 10ಕ್ಕಿಂತ ಕಡಿಮೆ ಪ್ರಕರಣಗಳಿರುವ ಗ್ರಾಮವನ್ನು ಮೈಕ್ರೋ ಕಂಟೈನ್ಮೆಂಟ್‌ ಎಂದು ಗುರುತಿಸಿ ಹೆಚ್ಚಿನ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಅಂತೆಯೇ ಕಡಿಮೆ ಪ್ರಕರಣಗಳಿರುವ ಹಳ್ಳಿಹಳ ಮೇಲೂ ನಿಗಾವಹಿಸಿ ಪ್ರಕರಣ ಹೆಚ್ಚಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ತಾಲೂಕು ಸೇರಿದಂತೆ ಗ್ರಾಮಗಳಲ್ಲಿರುವ ಸ್ಥಳೀಯ ಮಟ್ಟದ ಅಧಿಕಾರಿಗಳೆಲ್ಲರೂ ಸಮನ್ವಯ ಸಾಧಿಸಿ ಸೋಂಕಿನ ಪ್ರಸರಣ ನಿಯಂತ್ರಿಸಬೇಕು. ಗ್ರಾಮ ಗ್ರಾಮಗಳಿಗೂ ತೆರಳಿ ಸೋಂಕಿತರನ್ನು ಪರಿಶೀಲನೆ ಮಾಡಬೇಕು. ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್‌ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಬೇಕು, ಒಟ್ಟಾರೆ ಗ್ರಾಮಗಳು ಸೋಂಕು ಮುಕ್ತವಾಗಲು ಎಲ್ಲರೂ ಶ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಪ್ರಕರಣಗಳು ಹೆಚ್ಚುತ್ತಿರುವ ಹಳ್ಳಿಗಳಲ್ಲಿ ರ್ಯಾಟ್‌ ಟೆಸ್ಟ್ ಮಾಡಬೇಕು, ಸೋಂಕು ಪತ್ತೆಯಾದ ತಕ್ಷಣವೆ ಅವರನ್ನು ಮನವೊಲಿಸಿ ಪೊಲೀಸರ ಸಹಕಾರದೊಂದಿಗೆ ಕೋವಿಡ್‌ ಕೇಂದ್ರಕ್ಕೆ ಸ್ಥಳಾಂತರಿಸಬೇಕು, ಕಡ್ಡಾಯವಾಗಿ ಟ್ರೆಯಾಜ್‌ ಮಾಡಬೇಕು, ಲಸಿಕೆ ಮತ್ತು ಕೋವಿಡ್‌ ಪರೀಕ್ಷೆ ಎರಡನ್ನೂ ಪ್ರತ್ಯೇಕವಾಗಿಯೇ ಮಾಡಬೇಕು ಎಂದು ನಿರ್ದೇಶಿಸಿದರು.
ಹೆಚ್ಚು ಪ್ರಕರಣಗಳಿರುವ ಪ್ರದೇಶಗಳಲ್ಲಿ ಸೋಂಕಿನ ನಿಯಂತ್ರಣಕ್ಕಾಗಿ ಉತ್ತಮ ಕಾರ್ಯ ನಿರ್ವಹಿಸಿದ ಕಾರ್ಯಪಡೆಯನ್ನು ತಾಲೂಕು ಆಡಳಿತ ಗುರುತಿಸಿ ಸನ್ಮಾನಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಮಾತನಾಡಿ, ಕೋವಿಡ್‌ ಕೇರ್‌ ಸೆಂಟರ್‌ ಗಳಲ್ಲಿ ಯಾವುದೇ ನ್ಯೂನತೆ ಇಲ್ಲದಂತೆ ಸೋಂಕಿತರನ್ನು ಆರೈಕೆ ಮಾಡಬೇಕು. ಸೋಂಕಿತರನ್ನು ನೋಡಲು ಬಂದವರನ್ನು ಕೋವಿಡ್‌ ಸೆಂಟರ್‌ ಒಳಗೆ ಬಿಡಬಾರದು ಎಂದು ಸೂಚಿಸಿದರು.
ಸಭೆಯಲ್ಲಿ ಜಿಪಂ ಸಿಇಓ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಸೇರಿದಂತೆ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!