ಕಾಲುಬಾಯಿ ರೋಗಕ್ಕೆ ಹಸು, ಕರು ಬಲಿ

94

Get real time updates directly on you device, subscribe now.

ಕುಣಿಗಲ್‌: ತಾಲೂಕಿನ ಕೊತ್ತಗೆರೆ ಹೋಬಳಿಯ ಶೆಟ್ಟಿಕೆರೆ ಗ್ರಾಮದಲ್ಲಿ ಕಳೆದೊಂದು ವಾರದಿಂದ ಕಾಲುಬಾಯಿ ರೋಗಕ್ಕೆ ಏಳಕ್ಕೂ ಹೆಚ್ಚು ಹಸು, ಕರುಗಳು ಮೃತಪಟ್ಟಿದ್ದು ಹೈನುಗಾರರು ಹೈರಾಣಾಗಿದ್ದಾರೆ.
ಶೆಟ್ಟಿಕೆರೆ ಗ್ರಾಮದಲ್ಲಿ ಬಹುತೇಕ ರೈತರು ಕೃಷಿ ಹೊರತಾಗಿ ಹೈನುಗಾರಿಕೆ ಉದ್ಯಮವನ್ನೆ ನಂಬಿಕೊಂಡಿದ್ದಾರೆ, ಗ್ರಾಮದ ಕಾಲೋನಿಯಲ್ಲಿ ಕಳೆದ ಏಳು ದಿನದಲ್ಲಿ ನಾಲ್ಕು ಹಸುಗಳ ಈ ಪೈಕಿ ಎರಡು ನೆಲ ಕಚ್ಚಿದ್ದವು ಎನ್ನಲಾಗಿದೆ. ಮೂರು ಕರುಗಳು ಕಾಲುಬಾಯಿ ರೋಗಕ್ಕೆ ಬಲಿಯಾಗಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂ. ನಷ್ಟವಾಗುವ ಜೊತೆಯಲ್ಲಿ ಹೈನುಗಾರಿಕೆ ನಂಬಿಕೊಂಡು ಆರ್ಥಿಕತೆ ಸುಧಾರಿಸಿಕೊಳ್ಳುತ್ತಿರುವ ಕುಟುಂಬಗಳಿಗೆ ಬರಸಿಡಿಲು ಬಡಿದಂತಾಗಿದೆ. ಗ್ರಾಮದ ಸೀತಮ್ಮ, ಲಕ್ಷ್ಮಮ್ಮ, ಚಿಕ್ಕಮಲ್ಲಯ್ಯ, ನಾಗರಾಜ, ಗಂಗಾಧರ, ಕುಮಾರ, ಹನುಮಯ್ಯ ಇವರಿಗೆ ಸೇರಿದ ಜಾನುವಾರುಗಳು ರೋಗಕ್ಕೆ ಬಲಿಯಾಗಿವೆ. ಇದಕ್ಕೆ ಸಂಬಂಧಪಟ್ಟಂತೆ ಪಶುಸಂಗೋಪನ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಗ್ರಾಮದ ಇತರೆ ಪ್ರದೇಶಗಳಿಗೂ ಸೋಂಕು ಹರಡದಂತೆ ಕ್ರಮ ವಹಿಸುವ ಅಗತ್ಯತೆ ಹೆಚ್ಚಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪಶುಸಂಗೋಪನ ಇಲಾಖಾಧಿಕಾರಿಗಳು ಕಾಲುಬಾಯಿ ಲಸಿಕೆ ಹಾಕುವ ನಿಟ್ಟಿನಲ್ಲಿ ಮೈಕ್ರೋ ಪ್ಲಾನಿಂಗ್‌ ಮಾಡಲಾಗುತ್ತಿದೆ, ಶೀಘ್ರದಲ್ಲಿ ಲಸಿಕೆ ಹಾಕಲು ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!