ಜೋಕರ್ ಅಂತಿರುವ ಜಮೀರ್‌ ಹೆಚ್.ಡಿ.ಕೆ ಕ್ಷಮೆ ಕೇಳಲಿ

643

Get real time updates directly on you device, subscribe now.

ಕುಣಿಗಲ್‌: ಜೋಕರ್ ನಂತಿರುವ ಶಾಸಕ ಜಮೀರ್ ಅಹಮದ್‌ ಖಾನ್‌, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ಒಕ್ಕಲಿಗ ಧರ್ಮ ಮಹಾಸಭೆಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಧರ್ಮ ಮಹಾಸಭಾದ ಸಂಸ್ಥಾಪಕ, ಕಿತ್ತನಾಗಮಂಗಲ ಅರೆಶಂಕರ ಮಠದ ಸಿದ್ದರಾಮ ಚೈತನ್ಯಸ್ವಾಮೀಜಿ ಎಚ್ಚರಿಸಿದರು.
ಶುಕ್ರವಾರ ಕಿತ್ತನಾಗಮಂಗಲ ಗ್ರಾಮದ ಅರೆಶಂಕರ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಕ್ಕಲಿಗರಾಗಿದ್ದರೂ ಎಲ್ಲಾ ವರ್ಗದವರನ್ನು ಸಮಾನವಾಗಿ ಕಂಡು ಎಲ್ಲಾ ವರ್ಗದ ಜನರ ಸಮಸ್ಯೆ ಬಗೆಹರಿಸಲು ಹಗಲು ರಾತ್ರಿ ಶ್ರಮಿಸಿದ ಮಹಾನ್ ನಾಯಕರಾಗಿದ್ದರು, ಇಂದು ಕುಮಾರಸ್ವಾಮಿ ಇಲ್ಲ ಎಂದಿದ್ದರೆ ಜಮೀರ್‌ ಅಹಮದ್ ಖಾನ್‌ ಎಲ್ಲಿ ಇರುತ್ತಿದ್ದರು ಎಂಬುದು ಮನವರಿಕೆ ಮಾಡಿಕೊಳ್ಳಬೇಕು, ಕುಮಾರಸ್ವಾಮಿಯವರನ್ನು ಒಕ್ಕಲಿಗ ಸಮಾಜವು ಗೌರವಯುತವಾಗಿ ಕಾಣುತ್ತದೆ. ಸಂಸ್ಕಾರ ಇಲ್ಲದ ಕೀಳು ಮನಸ್ಸಿನ ಜಮೀರ್ ಅಹಮದ್‌ ಖಾನ್‌ ಕುಮಾರಸ್ವಾಮಿಯವರ ಬಗ್ಗೆ ಹಗುರುವಾಗಿ, ಏಕವಚನದಲ್ಲಿ ಮಾತನಾಡಿರುವುದು ಒಕ್ಕಲಿಗ ಧರ್ಮ ಮಹಾಸಭೆ ತೀವ್ರವಾಗಿ ಖಂಡಿಸುತ್ತದೆ. ಶಾಸಕನಾಗಿ, ಮಾಜಿ ಸಚಿವನಾಗಿ ಜವಾಬ್ದಾರಿ ಇರುವ ಜಮೀರ್‌ ಅಹಮದ್‌ ಜೋಕರ್‌ ಪ್ರವೃತ್ತಿಯವರು, ಮಾತನಾಡುವಾಗ ಮಾತಿನ ಮೇಲೆ ನಿಗಾ ಇರಬೇಕು, ಅವರು ಕುಮಾರಸ್ವಾಮಿಯವರ ಬಗ್ಗೆ ಬಳಸಿರುವ ಭಾಷೆ ನಿಜಕ್ಕೂ ಒಕ್ಕಲಿಗರಿಗೆ ಅಗೌರವ ತರುವಂತಾಗಿರುವುದರಿಂದ ಕೂಡಲೆ ಕುಮಾರಸ್ವಾಮಿಯವರ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ಮುಂದೆ ಆಗುವ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಒಕ್ಕಲಿಗ ಧರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಇಂದು ಜನರಲ್ಲಿ, ರಾಜಕೀಯವಾಗಿ ಜಮೀರ್‌ ಅಹಮದ್‌ ಏನಾದರೂ ಸಾಧನೆ ಮಾಡಿ ಗುರುತಿಸುವಂತಾಗಿದ್ದಾರೆ ಎಂದರೆ ಅದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿಯವರೆ ಕಾರಣ, ಕುಮಾರಸ್ವಾಮಿ ಯವರು ಒಕ್ಕಲಿಗ ಸಮುದಾಯದಲ್ಲಿ ಗೌರವದ ವ್ಯಕ್ತಿಯಾಗಿದ್ದಾರೆ. ಜಮೀರ್‌ ಅಹಮದ್‌ ವರ್ತನೆ ಇದು ಇಡೀ ಒಕ್ಕಲಿಗ ಸಮುದಾಯಕ್ಕೆ ಅಗೌರವ ತರುವಂತಾಗಿದೆ. ಕೂಡಲೆ ಅವರು ಕ್ಷಮೆಯಾಚಿಸಬೇಕು, ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಹಾ ಸಭಾದ ಪದಾಧಿಕಾರಿಗಳಾದ ರೇವಣ್ಣಗೌಡ, ವೆಂಕಟೇಶ್‌, ಲೋಕೇಶ್‌, ಕುಂಬಳಕಾಯಿ ರಾಜಣ್ಣ, ಶಶಿಕುಮಾರ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!