ಜಿಡಿಪಿ ಮೈನಸ್ ಗೆ ಇಳಿಸಿದ್ದೇ ಬಿಜೆಪಿ ಸಾಧನೆ: ಜಯಚಂದ್ರ ವ್ಯಂಗ್ಯ

ಕೇಂದ್ರ ಸರ್ಕಾರ ಜನರ ಪಿಕ್ ಪಾಕೆಟ್‌ ಮಾಡಿದೆ: ಡಿಕೆಶಿ

478

Get real time updates directly on you device, subscribe now.

ಶಿರಾ: ಕೇಂದ್ರ ಸರ್ಕಾರ ಜನರ ಪಿಕ್ ಪಾಕೆಟ್‌ ಮಾಡಿದೆ, ಅದನ್ನು ಜನರಿಗೆ ಮರಳಿಸುವಂತೆ ನಮ್ಮ ಹೋರಾಟ, ಬೆಲೆ ಕಡಿಮೆ ಆಗುವವರೆಗೆ ಜಿಲ್ಲಾ ಕೇಂದ್ರದಿಂದ ಗ್ರಾಮ ಪಂಚಾಯಿತಿವರೆಗೆ ಹಂತಹಂತಗಳಲ್ಲಿ ಪ್ರತಿಭಟನೆ ನಡೆಸಲಾಗುವುದು, ಜನರಲ್ಲಿ ಅರಿವು ಮೂಡಿಸಲಾಗುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು.
ನಗರದ ಬುಕ್ಕಾಪಟ್ಟಣ ಕ್ರಾಸ್‌ ಬಳಿಯ ಖಾಸಗಿ ಪೆಟ್ರೋಲ್‌ ಬಂಕ್ ಮುಂಭಾಗ ಶನಿವಾರ ಕೇಂದ್ರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿದೆ, ಇಂಥ ಸರ್ಕಾರಕ್ಕೆ ಜನರು ಪಾಠ ಕಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ವಿಶ್ವದ ಐದು ಪ್ರಮುಖ ಆರ್ಥಿಕ ಸಾಧನೆ ಮಾಡಿದ ದೇಶಗಳಲ್ಲಿ ಒಂದಾಗಿದ್ದ ಭಾರತ ದೇಶದ ಇಂದಿನ ಪರಿಸ್ಥಿತಿ ನೋಡಿದರೆ ಜಿಡಿಪಿ ಮೈನಸ್‌ 7.4ಕ್ಕೆ ಇಳಿದಿದೆ, 65 ವರ್ಷಗಳ ಇತಿಹಾಸವನ್ನು ಈಗ ಮತ್ತೊಮ್ಮೆ ಹೇಳಬೇಕಿದೆ ಎಂದು ವ್ಯಂಗ್ಯವಾಡಿದರು.
35 ರೂ. ಪೆಟ್ರೋಲ್‌ ಬೆಲೆಗೆ 65 ರೂ. ಟ್ಯಾಕ್ಸ್, ಇದು ಭಾರತದ ಇಂದಿನ ಡಬಲ್‌ ಇಂಜಿನ್‌ ಸರ್ಕಾರದ ಪರಿಸ್ಥಿತಿ, ಭಾರತದ ಬಡವರ ಹೊಟ್ಟೆ ಮೇಲೆ ಹೊಡೆದು ಅವರ ಹಸಿವಿನ ದಾಹದ ಮೇಲೆ ಮಾಡಿರುವ ಸುಮಾರು 22 ಲಕ್ಷ ಕೋಟಿ ರೂ. ಗಳನ್ನು ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳಿಗೆ ತಲುಪಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ, ರೈತರ ಸಾಲ ಮನ್ನಾ ಮಾಡಲು ಹಣ ಇಲ್ಲ ಎನ್ನುವ ಕೇಂದ್ರ ಸರ್ಕಾರ ನಾಲ್ಕೈದು ಕೈಗಾರಿಕೋದ್ಯಮಿಗಳಿಗಾಗಿ 6.65 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಅದಾನಿ, ಅಂಬಾನಿ ಮತ್ತು ಕೆಲವೇ ಉದ್ಯಮಿಗಳ ಪರವಾನಗಿ ಕೇಂದ್ರ ಕೆಲಸ ಮಾಡುತ್ತಿದೆ, ಹಿಂದೆ ಕಾಂಗ್ರೆಸ್‌ ಸರ್ಕಾರ ಇದ್ದಾಗ ಸಬ್ಸಿಡಿ ಕೊಡುವ ಮೂಲಕ ಜನರಿಗೆ ಪೆಟ್ರೋಲ್‌ ಒದಗಿಸುವ ಕೆಲಸ ಮಾಡಿತ್ತು, ಅಚ್ಚೇ ದಿನ್‌ ಬಗ್ಗೆ ಭರವಸೆ ಮೂಡಿಸಿದ್ದ ಮೋದಿ ಸರ್ಕಾರ ಇಂದು ಪೆಟ್ರೋಲ್‌ ಬೆಲೆ ನೂರು ಮುಟ್ಟಿಸುವ ಮೂಲಕ ಅಚ್ಚೇದಿನ್‌ ಏನು ಎಂಬುದನ್ನು ತೋರಿಸಿದೆ. ಹಲವಾರು ಕುಟುಂಬಗಳು ಬಡತನದ ರೇಖೆಗಿಂತ ಕೆಳಕ್ಕೆ ಇಳಿದಿವೆ. ಹಸಿವಿನಿಂದ ಜನ ಸಾಯುವ ಪರಿಸ್ಥಿತಿ ಬರುವ ಮುನ್ನವೇ ಜನರು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. ಜನರನ್ನು ಎಚ್ಚರಿಸುವ ಕೆಲಸ ನಾವು ಮಾಡಲಿದ್ದೇವೆ. ಬೆಲೆ ನಿಯಂತ್ರಣ ಮಾಡಲು ಸಾಧ್ಯವಿಲ್ಲದೇ ಹೋದರೆ ಬಿಜೆಪಿಯವರು ರಾಜೀನಾಮೆ ಕೊಟ್ಟು ಹೋಗಲಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬರಗೂರು ನಟರಾಜ್‌, ಮುಖಂಡ ಸಂಜಯ್‌ ಜಯಚಂದ್ರ, ಅಬ್ದುಲ್ಲಾಖಾನ್‌, ಕಲ್ಕೆರೆ ರವಿಕುಮಾರ್‌, ಡಿ.ಸಿ.ಅಶೋಕ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ರೇಖಾ ರಾಘವೇಂದ್ರ, ಹಾರೋಗೆರೆ ಮಹೇಶ್‌, ಗೋಣಿಹಳ್ಳಿ ದೇವರಾಜ್‌ ಮೊದಲಾದವರು ಇದ್ದರು.

Get real time updates directly on you device, subscribe now.

Comments are closed.

error: Content is protected !!