ಡಾ.ಸಿದ್ದಲಿಂಗಯ್ಯರ ಆದರ್ಶ ಪಾಲಿಸಿ: ಕೆ.ಎನ್‌.ರಾಜಣ್ಣ

379

Get real time updates directly on you device, subscribe now.

ಮಧುಗಿರಿ: ನಾಡೋಜ ಸಿದ್ದಲಿಂಗಯ್ಯ ನವರು ವಿಧಾನ ಪರಿಷತ್‌ ಸದಸ್ಯರಾಗಿದ್ದ ಸಂದರ್ಭದಲ್ಲಿ ಕಲಾಪದಲ್ಲಿನ ಅವರ ಚರ್ಚೆಯ ನಡಾವಳಿಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಹೋರಾಟದ ಮನಸ್ಸನ್ನು ಬೆಳಸಬೇಕಾಗಿದೆ ಎಂದು ಮಾಜಿ ಶಾಸಕ ಕೆ.ಎನ್‌.ರಾಜಣ್ಣ ತಿಳಿಸಿದರು.
ಪಟ್ಟಣದ ಎಂ.ಎನ್.ಕೆ ಸಮುದಾಯ ಭವನದಲ್ಲಿ ಕೆ.ಎನ್.ಆರ್‌ ಹಾಗೂ ಆರ್.ಆರ್ ಅಭಿಮಾನಿ ಬಳಗದ ವತಿಯಿಂದ ದರೈಸ್ತ್ರೀ, ಕಲ್ಚರಲ್‌ ಟ್ರಸ್ಟ್ ದಲಿತ ಮತ್ತು ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಆಯೋಜಿಸಿದ್ದ ದಲಿತ ಕವಿ ಹಾಗೂ ಚಿಂತಕ ನಾಡೋಜ ಡಾ.ಸಿದ್ದಲಿಂಗಯ್ಯ ನವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸಿದ್ದಲಿಂಗಯ್ಯನವರ ಆಸಕ್ತಿ, ಅಭಿಪ್ರಾಯ, ಭಾವನೆ, ಧ್ಯೇಯ ಧೋರಣೆಗಳನ್ನು ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ನಡಾವಳಿಗಳನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ಉಚಿತವಾಗಿ ಮಕ್ಕಳಿಗೆ ವಿತರಿಸುವ ಕೆಲಸ ಮಾಡುತ್ತೇನೆ, ಅವರ ಆದರ್ಶ ಹೋರಾಟದ ಮನೋಭಾವ ಮಕ್ಕಳಲ್ಲಿ ಬರುವಂತೆ ಪ್ರೇರೇಪಿಸಬೇಕಿದೆ ಎಂದರು.
ಸಿದ್ದಲಿಂಗಯ್ಯ ನವರು ಯಾವುದೇ ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ, ಶೋಷಣೆ ವಿರುದ್ಧ ಹೋರಾಡಿ ಅಸಹಾಯಕರನ್ನು ಸಂಘಟಿಸಿ ಅವರಲ್ಲಿ ಧೈರ್ಯ ತುಂಬಿ ಬದುಕು ಕಟ್ಟಿಕೊಟ್ಟವರು ಎಂದರು.
ಪ್ರಗತಿ ಪರ ಚಿಂತಕ ಕೊಟ್ಟ ಶಂಕರ್‌ ಮಾತನಾಡಿ, ಸಿದ್ದಲಿಂಗಯ್ಯ ನವರು ಹಟ್ಟಿಯ ಭಾಷೆಗೆ ಸಾಹಿತ್ಯದ ರೂಪ ಕೊಟ್ಟ ಕ್ರಾಂತಿಕಾರಿ ಕವಿಯಾಗಿದ್ದು ಬುದ್ದನ ತತ್ವ, ಬಸವಣ್ಣ ನವರ ಆದರ್ಶ ಹಾಗೂ ಅಂಬೇಡ್ಕರ್‌ ರವರ ಸಿದ್ಧಾಂತ ಅಳವಡಿಸಿಕೊಂಡು ಬೇರೆ ಬೇರೆ ಆಯಾಮಗಳಲ್ಲಿ ದುಡಿದ ಜನ ಮನದ ಕವಿ ಎಂದರು.
ಸಾಹಿತಿ ಮ.ಲ.ನ.ಮೂರ್ತಿ ಮಾತನಾಡಿ, ಸಿದ್ದಾಪುರ ಸಿದ್ಧಲಿಂಗಯ್ಯನವರು ಕನ್ನಡ ಸಾಹಿತ್ಯದ ಜನಮನದ ಕವಿ, ಸಮ ಸಮಾಜದ ಘೋಷಣೆಗಳಲ್ಲಿ ಗುಡುಗು ಸಿಡಿಲಿನ ಶಕ್ತಿಯಿದೆ, ಅವರ ಕವಿತೆಗಳಲ್ಲೂ ಭೂಕಂಪನದ ತಾಕತ್ತಿದ್ದು, ಪ್ರಾಚೀನ ಸಾಮಾಜಿಕ ಧಾರ್ಮಿಕ ವ್ಯವಸ್ಥೆ ಬುಡಮೇಲು ಮಾಡುವ ಪ್ರಯತ್ನ ಇವರ ಬರಹದಲ್ಲಿ ಕಾಣಬಹುದು ಎಂದರು.
ಭಾಷೆಯನ್ನು ಕಠೋರವಾಗಿ ಬಳಸಿದರೂ ಸಿದ್ದಲಿಂಗಯ್ಯ ನವರ ಮನಸ್ಸು ಮೃದುವಾಗಿತ್ತು, ಸಮ ಸಮಾಜ ನಿರ್ಮಾಣದ ಗುರಿ ಹೊಂದಿದ್ದ ಅವರು ಸಮಾಜದಲ್ಲಿನ ತಾರತಮ್ಯ ತೊಲಗಿಸಲು ಹೋರಾಡಿದರು ಎಂದರು.
ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ನಾಮಾಲಿಂಗೇಶ್‌ ಮಾತನಾಡಿ, ಗರ್ಭ ಗುಡಿ ಸಂಸ್ಕೃತಿ ಇಂದ ಹಿಂದುಳಿದ ವರ್ಗಗಳಲ್ಲಿ ಮೀಸಲಾತಿ ಹೋರಾಟ ತಂದಿಟ್ಟು, ಬಿರುಕು ಉಂಟಾಗಿ ಸಂಘಟನೆಯೊಳಗೆ ಧಕ್ಕೆ ಉಂಟಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮಧುಗಿರಿ ನಂಟು: ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಬಳಿಯಿರುವ ದರ್ಗಾದ ಸ್ಥಳ ಐತಿಹ್ಯ ಕುರಿತಂತೆ ವಿಡಂಬನಾತ್ಮಕವಾಗಿ ಕತ್ತೆ ಮತ್ತು ಧರ್ಮ ಎಂಬ ಕವಿತೆ ರಚಿಸಿ ಸ್ಥಳೀಯ ಐತಿಹ್ಯ ಕುರಿತು ಮೌಢ್ಯ ವಿಡಂಬಿಸಿದ್ದಾರೆಂದು ಉಪನ್ಯಾಸಕ ಬಂದ್ರೆಹಳ್ಳಿ ಕುಮಾರ್‌ ತಿಳಿಸಿದರು.
ತಹಶೀಲ್ದಾರ್‌ ವೈ.ರವಿ, ರಾಜ್ಯ ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಎನ್‌.ಗಂಗಣ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಪೊ.ಸಿ.ಕೃಷ್ಣಪ್ಪ, ಜಿಪಂ ಮಾಜಿ ಸದಸ್ಯ ಎಸ್‌.ಡಿ. ಕೃಷ್ಣಪ್ಪ, ತಾಪಂ ಮಾಜಿ ಸದಸ್ಯರಾದ ಸೊಸೈಟಿ ರಾಮಣ್ಣ, ರಂಗನಾಥ್‌, ಸರ್ವಜ್ಞ ವೇದಿಕೆಯ ಅಧ್ಯಕ್ಷ ವೆಂಕಟರಮಣಪ್ಪ, ಉಪನ್ಯಾಸಕ ರಾಮಚಂದ್ರಪ್ಪ, ಕಸಾಪ ಮಹಿಳಾ ಅಧ್ಯಕ್ಷೆ ಬಿ.ಜಿ.ಶಾಂತಮ್ಮ, ಮುಖಂಡರಾದ ಕಣಿಮಯ್ಯ, ಚಿಕ್ಕಮ್ಮ, ಸಂಜೀವಯ್ಯ, ಜೀವಕ ಮಂಜುನಾಥ್‌, ಮಾದಿಗ ದಂಡೊರ ತಾಲೂಕು ಅಧ್ಯಕ್ಷ ಸಿದ್ದಾಪುರ ರಂಗಶ್ಯಾಮಯ್ಯ ಇದ್ದರು.

Get real time updates directly on you device, subscribe now.

Comments are closed.

error: Content is protected !!