ಸಿನಿಮಾ ಪ್ರದರ್ಶನ ಇಲ್ಲದೆ ಬದುಕು ಕಷ್ಟ- ನೆರವಿನ ನಿರೀಕ್ಷೆಯಲ್ಲಿ ಕೆಲಸಗಾರರು

ಚಿತ್ರ ಮಂದಿರ ಕಾರ್ಮಿಕರ ಕಷ್ಟ ಕೇಳೋರಿಲ್ಲ

268

Get real time updates directly on you device, subscribe now.

ತುಮಕೂರು: ಕೊರೊನಾ ಮಹಾಮಾರಿ ಬಡವರ ಬದುಕಿಗೆ ಕೊಳ್ಳಿ ಇಟ್ಟಿದೆ, ರೈತರ ಬದುಕನ್ನೆ ದಿಕ್ಕು ತಪ್ಪಿಸಿದೆ, ಕಾರ್ಮಿಕರ ಜೀವನವನ್ನು ಕಂಗಾಲಾಗಿಸಿದೆ, ಬೀದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಂದಿದೆ, ಇದ್ದ ಕೆಲಸಕ್ಕೂ ಕಲ್ಲು ಹಾಕಿರುವ ಕೊರೊನಾ ಎಲ್ಲಾ ವರ್ಗದವರಿಗೂ ಒಂದಲ್ಲಾ ಒಂದು ರೀತಿ ಸಂಕಷ್ಟ ತಂದೊಡ್ಡಿದೆ, ಇದಕ್ಕೆ ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹೊರತಾಗಿಲ್ಲ.
ಹೌದು… ಜನರಿಗೆ ಮನರಂಜನೆ ಒದಗಿಸುವ ಚಿತ್ರಮಂದಿರುಗಳಲ್ಲಿ ಚಿತ್ರ ಪ್ರದರ್ಶನ ಇಲ್ಲದೆ ಜನರಿಗೆ ಮನರಂಜನೆ ಇಲ್ಲವಾಗಿದೆ, ಕೊರೊನಾ 2ನೇ ಅಲೆ ತಡೆಗೆ ಸರ್ಕಾರ ಲಾಕ್ ಡೌನ್ ವಿಧಿಸಿದ ಪರಿಣಾಮ ಎಲ್ಲಾ ವಲಯಗಳು ಬಂದ್ ಆದವು, ಅದರಲ್ಲೂ ಚಿತ್ರಮಂದಿರಗಳಿಗೆ ಸಿನಿಮಾ ನೋಡಲು ನೂರಾರು ಮಂದಿ ಬರುತ್ತಾರೆ, ಇದರಿಂದ ಕೊರೊನಾ ಸೋಂಕು ಹೆಚ್ಚಲಿದೆ ಎಂದು ಸರ್ಕಾರ ಚಿತ್ರ ಮಂದಿರಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಿದೆ, ಇದರ ಪರಿಣಾಮ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಬದುಕಿನ ಮೇಲೆ ಪರಿಣಾಮ ಬೀರಿದೆ.
ತುಮಕೂರಿನಲ್ಲಿ ಎಲ್ಲಾ ಚಿತ್ರ ಮಂದಿರಗಳು ಬಂದ್ ಆಗಿರುವುದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ, ನಗರದಲ್ಲಿರುವ ಆರೇಳು ಚಿತ್ರಮಂದಿರಗಳಲ್ಲಿ ಸುಮಾರು 60 ಕ್ಕೂ ಕೆಲಸಗಾರರಿದ್ದು, ಚಿತ್ರ ಪ್ರದರ್ಶನ ಇಲ್ಲದ ಕಾರಣ ಅವರ ದುಡಿಮೆ ಇಲ್ಲವಾಗಿದೆ, ಚಿತ್ರ ಪ್ರದರ್ಶನವಿದ್ದರೆ ಚಿತ್ರ ಮಂದಿರಗಳ ಮಾಲೀಕರು ಸಂಬಳ ಕೊಡುತ್ತಿದ್ದರು, ಈಗ ಚಿತ್ರ ಪ್ರದರ್ಶನವೇ ಇಲ್ಲವಾಗಿರುವ ಕಾರಣ ಸಂಬಳ ಕೊಡುವುದಕ್ಕೂ ಕಷ್ಟವಾಗಿದೆ. ಈ ಎಲ್ಲದರ ಪರಿಣಾಮ ಚಿತ್ರ ಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಬದುಕು ನಡೆಸುವುದು ದುಸ್ಥರ ಎಂಬಂತಾಗಿದೆ.
ಟಿಕೆಟ್ ಕೊಡುವವರು, ಪ್ರಾಜೆಕ್ಟರ್ ನೋಡಿಕೊಳ್ಳುವವರು ಹೀಗೆ ಒಂದೊಂದು ಚಿತ್ರಮಂದಿರಲ್ಲಿ ಕನಿಷ್ಟ ಹತ್ತು ಮಂದಿ ಕೆಲಸ ಮಾಡುತ್ತಾರೆ, ಆದರೆ ಈಗ ಚಿತ್ರ ಪ್ರದರ್ಶನ ಇಲ್ಲದೆ ಇರುವುದು ಈ ಕೆಲಸಗಾರರ ಜೀವನ ಕಷ್ಟಕರವಾಗಿದೆ.
ಚಿತ್ರ ಪ್ರದರ್ಶನ ಇಲ್ಲದ ಕಾರಣ ನಮ್ಮ ಓನರ್ ಗಳು ಸಂಬಳ ಕೊಡಲು ಕಷ್ಟವಾಗುತ್ತಿದೆ, ಜೊತೆಗೆ ಅವರು ಅಲ್ಪಸ್ವಲ್ವ ಸಹಾಯ ಮಾಡಿದ್ದಾರೆ, ಆದರೂ ನಮ್ಮ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ, ಮೊದಲ ಲಾಕ್ ಡೌನ್ ವೇಳೆ ಸಂಘ ಸಂಸ್ಥೆಗಳವರು ನಮಗೆ ಆಹಾರ ಕಿಟ್ ನೀಡಿ ನೆರವಾಗಿದ್ದರು, ಆದರೆ ಈ ಬಾರಿ ಯಾರು ನಮ್ಮ ನೆರವಿಗೆ ಬಂದಿಲ್ಲ, ಸರ್ಕಾರ ಒಂದಷ್ಟು ನೆರವು ನೀಡಬೇಕು ಎಂದು ಚಿತ್ರ ಮಂದಿರವೊಂದರ ಕೆಲಸಗಾರ ತಮ್ಮ ಸಮಸ್ಯೆ ಹೇಳಿಕೊಂಡರು.
ಚಿತ್ರ ಮಂದಿರಕ್ಕೆ ಬರುವವರನ್ನು ಎಲ್ಲಾ ರೀತಿಯಲ್ಲೂ ನೋಡಿಕೊಳ್ಳುವ ಕಾರ್ಮಿಕರು ಈಗ ಸಂಕಷ್ಟ ಅನುಭವಿಸುವಂತಾಗಿ ಬದುಕು ನಡೆಸುವುದು ಹೇಗೆ ಎಂಬ ಚಿಂತೆಗೆ ಬಿದ್ದಿದ್ದಾರೆ, ಲಾಕ್ ಡೌನ್ ಸಡಿಲವಾದರೂ ಚಿತ್ರಮಂದಿರಗಳು ಓಪನ್ ಆಗುವುದು ಇನ್ನು ಎಷ್ಟು ದಿನ ಆಗುತ್ತೋ ಗೊತ್ತಿಲ್ಲ, ಚಿತ್ರಮಂದಿರದ ಕೆಲಸಗಾರರ ಕಷ್ಟಕ್ಕೆ ಸಂಘ ಸಂಸ್ಥೆಗಳು ನೆರವಾಗಬೇಕಿದೆ, ಧಾನಿಗಳು ಆಹಾರ ಕಿಟ್ ಹಾಗೂ ಅಗತ್ಯ ವಸ್ತುಗಳನ್ನು ನೀಡಿದರೆ ಇವರ ಬದುಕು ಚೇತರಿಕೆಯಾಗಿಲಿದೆ, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಮಾನವೀಯ ಕಾರ್ಯ ಆಗಬೇಕಿದೆ.

Get real time updates directly on you device, subscribe now.

Comments are closed.

error: Content is protected !!