ಬಡವರ ಸೇವೆಗೆ ನಿಂತ ಸೇನಾನಿ ಡಾ.ರಫಿಕ್‌ ಅಹಮದ್

ಊಟ, ದಿನಸಿ ಕಿಟ್‌ ವಿತರಿಸಿ ಹಸಿವು ನೀಗಿಸಿದ ನಾಯಕ- ಇದೇ ಅಲ್ಲವೇ ನಿಜವಾದ ಕಾಯಕ

352

Get real time updates directly on you device, subscribe now.

ತುಮಕೂರು: ಉಳ್ಳವರಿಗೆ ಉಪಕಾರ ಮಾಡುವ ಗುಣ ಇರಲ್ಲ, ಜನಪ್ರತಿನಿಧಿಗಳಿಗೆ ಜನರ ಸೇವೆ ಮಾಡಬೇಕು ಎಂಬ ಇಚ್ಚೆ ಇರಲ್ಲ, ಆದರೆ ಇದೆಲ್ಲಕೂ ಅಪವಾದ ಎಂಬಂತೆ ತುಮಕೂರಿನ ಮಾಜಿ ಶಾಸಕ ಡಾ.ರಫಿಕ್‌ ಅಹಮದ್‌ ಅವರು ಕೊರೊನಾ ಸಂಕಷ್ಟದಲ್ಲಿ ಜನರಿಗೆ ನೆರವಾಗಿ ಜನಾನುರಾಗಿ ನಾಯಕ ಎನಿಸಿದ್ದಾರೆ.
ಹೌದು.. ಕೊರೊನಾ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ, ಭಾರತದಲ್ಲೂ ಕೊರೊನಾ ಜನರ ಬದುಕಿಗೆ ಕೊಳ್ಳಿ ಇಟ್ಟು ಬಿಟ್ಟಿದೆ, ಇನ್ನು ತುಮಕೂರು ನಗರದಲ್ಲೂ ಕೊರೊನಾ ಅಟ್ಟಹಾಸಕ್ಕೆ ಸಿಲುಕಿ ಎಷ್ಟೋ ಜನರ ಬದುಕು ಮೂರಾಬಟ್ಟೆಯಾಗಿತ್ತು, ಸರ್ಕಾರ ಲಾಕ್ ಡೌನ್‌ ಮಾಡಿದ್ದರಿಂದ ಕಾರ್ಮಿಕರು ಉದ್ಯೋಗವಿಲ್ಲದೆ, ದುಡಿಮೆ ಇಲ್ಲದೆ ಬದುಕುವುದು ಕಷ್ಟವಾಯಿತು, ರೈತರು ಸಂಕಷ್ಟಕ್ಕೆ ಸಿಲುಕಿದರು, ನಿರ್ಗತಿಕರು, ದುರ್ಬಲರು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿತು.
ಇಂಥ ಸಂದರ್ಭದಲ್ಲಿ ಮಾಜಿ ಶಾಸಕ ಡಾ.ರಫಿಕ್‌ ಅಹಮದ್‌ ಎಲ್ಲಾ ವರ್ಗದವರ ನೆರವಿಗೆ ಮುಂದಾದರು, ಹಸಿವು ನೀಗಿಸುವ ಕಾರ್ಯಕ್ಕೆ ಮುಂದಾದರು, ರಾಜಕೀಯ ಬದಿಗಿಟ್ಟು ಜನರ ನೆರವಿಗೆ ನಿಂತರು, ಸಂಕಷ್ಟಕ್ಕೆ ಒಳಗಾದ ಶ್ರಮಿಕವರ್ಗಕ್ಕೆ ಸಹಾಯ ಹಸ್ತ ಚಾಚಿದರು.
2020ರ ಮಾರ್ಚ್‌ ತಿಂಗಳಲ್ಲಿ ಸರಕಾರ ಏಕಾಎಕಿ ಲಾಕ್ ಡೌನ್‌ ಘೋಷಣೆ ಮಾಡಿದ ಸಂದರ್ಭ ತುಮಕೂರು ಜಿಲ್ಲೆಯಲ್ಲಿ ಸಾವಿರಾರು ಜನರು ಅನ್ನ, ಆಹಾರವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು, ಎರಡು ಹೊತ್ತಿನ ಊಟಕ್ಕೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಮೊದಲು ಬಡವರಿಗೆ ಅವರು ಇರುವಲ್ಲಿಗೆ ಆಹಾರದ ಪೊಟ್ಟಣಗಳನ್ನು ತಲುಪಿಸುವ ವ್ಯವಸ್ಥೆಯನ್ನು ಡಾ.ರಫಿಕ್‌ ಅಹಮದ್‌ ಮಾಡಿದರು.
ಲಾಕ್ ಡೌನ್‌ ಘೋಷಣೆಯಾದ ದಿನದಿಂದ ಮುಗಿಯುವವರೆಗೂ ಪ್ರತಿದಿನ 1000 ಜನರಿಗೆ ಬೆಳಗಿನ ತಿಂಡಿ ಮತ್ತು ಮದ್ಯಾಹ್ನದ ಊಟವನ್ನು ಜನನಿಬೀಡ ಪ್ರದೇಶಗಳಿಗೆ ತೆಗೆದುಕೊಂಡು ಹೋಗಿ ಹಂಚುವ ಕೆಲಸ ಮಾಡಿದರು. ಅಲ್ಲದೆ ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ಆದೇಶದಂತೆ ನಗರ ಹಾಗೂ ಗ್ರಾಮೀಣ ಭಾಗದ ಜನರ ನೋವುಗಳಿಗೆ ಸ್ಪಂದಿಸಿ ನೆರವಾದರು, ಜೊತೆಗೆ ಸಾವಿರಾರು ಬಡ ಕುಟುಂಬಗಳಿಗೆ ಆಹಾರದ ಕಿಟ್‌ ವಿತರಿಸಿ ಮಾನವೀಯ ಕಾರ್ಯ ಮಾಡಿದರು.
ಇನ್ನು 2021 ರಲ್ಲಿ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡು ಸರಕಾರ ಲಾಕ್ ಡೌನ್‌ ಘೋಷಣೆ ಮಾಡಿದ ಸಂದರ್ಭದಲ್ಲಿಯೂ ಈ ಹಿಂದಿನ ವರ್ಷದಂತೆಯೇ ತಮ್ಮ ಸೇವಾ ಕಾರ್ಯ ಮುಂದುವರೆಸಿರುವ ಡಾ.ರಫಿಕ್‌ ಅಹಮದ್‌ ಬಡವರಿಗೆ ದಿನಸಿ ಕಿಟ್‌ ವಿತರಿಸುವ ಗುರಿ ಹಾಕಿಕೊಂಡು ಮಂಗಳಮುಖಿಯರು, ಅಂಧ ಮಕ್ಕಳು, ಅಂಗವಿಕಲರು, ಕೊಳಗೇರಿ ನಿವಾಸಿಗಳು, ಬೀದಿ ಬದಿ ವ್ಯಾಪಾರಿಗಳು, ಪೌರಕಾರ್ಮಿಕರು, ಛಾಯಾಗ್ರಾಕರು ಸೇರಿದಂತೆ ಹಲವು ವರ್ಗ ಹಾಗೂ ಹಲವು ಸಮುದಾಯ ಸಂಘಟನೆಗಳನ್ನು ಗುರುತಿಸಿ ಅವರಿಗೆ ದಿನಸಿ ಕಿಟ್‌ ವಿತರಿಸುವ ಮೂಲಕ ತಮ್ಮ ಸೇವೆ ಮುಂದುವರೆಸಿದ್ದಾರೆ. ಅಲ್ಲದೆ ಹಿಂದಿನ ವರ್ಷದಂತೆ ಈ ವರ್ಷವೂ ಪ್ರತಿದಿನ 500 ಜನರಿಗೆ ಊಟ ನೀಡಿದ್ದಾರೆ.
ಇದಿಷ್ಟೇ ಅಲ್ಲದೆ ಕೊರೊನ ವಾರಿಯರ್ಸ್ ಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು, ನರ್ಸ್ ಗಳು, ಕ್ಲಿನಿಂಗ್‌ ಸಿಬ್ಬಂದಿಗೆ ಅಗತ್ಯವಿರುವ ಪಿಪಿಇ ಕಿಟ್‌, ಸ್ಯಾನಿಟೈಜರ್‌, ಮಾಸ್ಕ್ ಸೇರಿದಂತೆ ಅಗತ್ಯ ಪರಿಕರ ವಿತರಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುವ ಮೂಲಕ ಮಾಜಿ ಶಾಸಕ ಡಾ.ರಫೀಕ್‌ ಅಹಮದ್‌ ಸೇವಾ ಮನೋಭಾವ ತೋರಿದ್ದಾರೆ. ಒಟ್ಟಾರೆ ಅಧಿಕಾರ ಇರಲಿ ಬಿಡಲಿ, ಕಷ್ಟದಲ್ಲಿರುವಾಗ ಜನರ ಸೇವೆ ಮಾಡಬೇಕು, ಕೈಲಾದ ಸಹಾಯ ಮಾಡಬೇಕು ಎಂಬ ಆಶಯವನ್ನಿಟ್ಟುಕೊಂಡು ಡಾ.ರಫಿಕ್‌ ಅಹಮದ್‌ ಉತ್ತಮ ಕಾರ್ಯ ಮಾಡಿದ್ದಾರೆ, ಅವರ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು, ಇನ್ನಷ್ಟು ಉತ್ತಮ ಕಾರ್ಯ ಮಾಜಿ ಶಾಸಕರಿಂದ ಆಗಲಿ ಎಂಬುದು ಎಲ್ಲರ ಆಶಯ.


ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ

ಶಿಕ್ಷಣದಿಂದ ಅಭಿವೃದ್ಧಿ ಮತ್ತು ಸಾಧನೆ ಸಾಧ್ಯ, ಆದರೆ ಕೊರೊನಾದಿಂದ ಎಷ್ಟೋ ಮಕ್ಕಳು ಪೋಷಕರನ್ನು ಕಳೆದುಕೊಂಡು ಶಿಕ್ಷಣ ಪಡೆಯುವುದು ಕಷ್ಟವಾಗಿದೆ, ಮಹಾಮಾರಿಯಿಂದ ಪೋಷಕರನ್ನು ಕಳೆದುಕೊಂಡು ಅನಾಥವಾಗಿರುವ ಮಕ್ಕಳಿಗೆ ಒಂದನೇ ತರಗತಿಯಿಂದ ಇಂಜಿನಿಯರಿಂಗ್‌ ಪದವಿವರಗೆ ಹೆಚ್ ಎಂ ಎಸ್‌ ವಿದ್ಯಾಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದ್ದು, ಅಗತ್ಯವಿರುವವರು ಸಂಸ್ಥೆ ಸಂಪರ್ಕಿಸಿದರೆ ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುವುದು.
-ಡಾ.ರಫಿಕ್‌ ಅಹಮದ್‌, ಮಾಜಿ ಶಾಸಕ

Get real time updates directly on you device, subscribe now.

Comments are closed.

error: Content is protected !!