ದೇವಾಲಯದ ಅರ್ಚಕರಿಗೆ ಆಹಾರದ ಕಿಟ್‌ ವಿತರಣೆ

243

Get real time updates directly on you device, subscribe now.

ಕೊರಟಗೆರೆ: ವಿಶ್ವಕ್ಕೆ ಮಾರಕವಾದ ಕೊರೊನಾ ರೋಗ ನಿವಾರಣೆಗೆ ದೇವರ ಸಂಕಲ್ಪ ಮತ್ತು ಜನತೆಯ ಜಾಗೃತಿಯ ಜೊತೆ ಮನುಷ್ಯನ ಆತ್ಮಬಲ ಒಂದೇ ಪರಿಹಾರ ಎಂದು ಸಿದ್ದರಬೆಟ್ಟ ಶ್ರೀಕ್ಷೇತ್ರದ ಪೀಠಾಧ್ಯಕ್ಷ ವೀರಭದ್ರ ಶಿವಚಾರ್ಯ ಸ್ವಾಮೀಜಿ ತಿಳಿಸಿದರು.
ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ ಸಂಜೀವಿನಿ ತಾಣವಾದ ಸಿದ್ದರಬೇಟ್ಟ ಕ್ಷೇತ್ರದಲ್ಲಿ ಕಂದಾಯ ಇಲಾಖೆಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಅರ್ಚಕರಿಗೆ ಆಹಾರದ ಕಿಟ್‌ ವಿತರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಲೋಕ ಕಲ್ಯಾಣಕ್ಕಾಗಿ ಕೊರಟಗೆರೆ ಕ್ಷೇತ್ರದ ಎಲ್ಲಾ ದೇವಾಲಯದಲ್ಲಿ ಸೋಮವಾರ ಏಕಕಾಲದಲ್ಲಿ ಕೊರೊನಾ ರೋಗ ನಿವಾರಣೆಗೆ ದೇವರಲ್ಲಿ ಸಂಕಲ್ಪ ಮಾಡುವ ಕಾರ್ಯವಾಗಲಿದೆ. ದೇವರ ಆಧ್ಯಾತ್ಮಿಕ ಮತ್ತು ಮನುಷ್ಯನ ಆತ್ಮಬಲದಿಂದ ಮಾತ್ರ ಮನುಕುಲ ಉಳಿಯಲು ಸಾಧ್ಯ, ಭಕ್ತಾದಿಗಳು ಕೊರೊನಾ ರೋಗದ ಬಗ್ಗೆ ಜಾಗೃತಿ ವಹಿಸಬೇಕಿದೆ ಎಂದು ಹೇಳಿದರು.
ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಕೊರೊನಾ ರೋಗದ ಔಷಧಿಗಾಗಿ ವಿಶ್ವದ 180 ಲ್ಯಾಬ್ ನಲ್ಲಿ ರೀಸರ್ಚ್‌ ನಡೆಯುತ್ತಿದೆ. ಯಾವ ದೇಶದಲ್ಲಿಯು ಅಧಿಕೃತವಾಗಿ ಕೊರೊನಾ ರೋಗದ ಔಷಧಿ ಕಂಡು ಹಿಡಿದಿಲ್ಲ. ಕೊರೊನಾ ರೋಗದ ವಿರುದ್ಧ ಮನುಷ್ಯ ಹೋರಾಟ ನಡೆಸಲು ರೋಗ ನಿರೋಧಕ ಲಸಿಕೆ ಮಾತ್ರ ನೀಡಲಾಗಿದೆ. ಪ್ರತಿಯೊಬ್ಬರು ಕೊರೊನಾ ಲಸಿಕೆ ಹಾಕಿಕೊಳ್ಳಬೇಕಿದೆ ಎಂದು ತಿಳಿಸಿದರು.
ಕೊರಟಗೆರೆ ಕ್ಷೇತ್ರದ 36ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡ ಜನತೆಗೆ ಸೋಮವಾರ ಮತ್ತು ಮಂಗಳವಾರ 20 ಸಾವಿರಕ್ಕೂ ಅಧಿಕ ಆಹಾರದ ಕಿಟ್‌ ವಿತರಣೆ ಮಾಡುವ ಕೆಲಸಕ್ಕೆ ಚಾಲನೆ ನೀಡುತ್ತೇನೆ. ತುಮಕೂರು ನಗರದ ಸಿದ್ದಾರ್ಥ ಆಸ್ಪತ್ರೆಯು ಕೊರಟಗೆರೆ ಕ್ಷೇತ್ರದ ಜನರ ಆರೋಗ್ಯರಕ್ಷಣೆಗೆ ಈಗಾಗಲೇ ಪ್ರಮುಖ ಆದ್ಯತೆ ನೀಡಿದೆ. ದಿನದ 24 ಗಂಟೆಯು ಆಸ್ಪತ್ರೆಯ ಬಾಗಿಲು ತೆರೆದಿರುತ್ತದೆ. ಯಾರು ಹೆದರುವ ಅವಶ್ಯಕತೆ ಇಲ್ಲ ಎಂದು ಆತ್ಮವಿಶ್ವಾಸ ತುಂಬಿದರು.
ಕಾರ್ಯಕ್ರಮದಲ್ಲಿ ಕೊರಟಗೆರೆತಾಲೂಕಿನ 100ಕ್ಕೂ ಅಧಿಕ ದೇವಾಲಯದ ಅರ್ಚಕರಿಗೆ ಕಂದಾಯ ಇಲಾಖೆಯಿಂದ 20 ದಿನಕ್ಕೆ ಆಗುವಷ್ಟು ಆಹಾರದ ಕಿಟ್‌ಗಳನ್ನು ಸಿದ್ದರಬೆಟ್ಟ ಶ್ರೀ ಮತ್ತು ಶಾಸಕ ಡಾ.ಜಿ.ಪರಮೇಶ್ವರ್‌ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಧುಗಿರಿ ಎಸಿ ಸೋಮಪ್ಪ ಕಡಕೋಳ, ಕೊರಟಗೆರೆ ತಹಶೀಲ್ದಾರ್‌ ಗೋವಿಂದರಾಜು, ತಾಪಂ ಆಡಳಿತ ಅಧಿಕಾರಿ ಅಶೋಕ್‌, ಸರಿಗಮಪ ಖ್ಯಾತಿಯ ಕಂಬದರಂಗಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರಕೆರೆ ಶಂಕರ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!