ಬಿಜೆಪಿ ಸರ್ಕಾರ ಬಂದ್ಮೇಲೆ ಕೊರೊನಾ ಬಂತು

ಸಮ್ಮಿಶ್ರ ಸರ್ಕಾರ ಇದ್ದಾಗ ರಾಜ್ಯದ ಜನ ನೆಮ್ಮದಿಯಾಗಿದ್ರು: ಜಮೀರ್

545

Get real time updates directly on you device, subscribe now.

ಕುಣಿಗಲ್‌: ಸಮ್ಮಿಶ್ರ ಸರ್ಕಾರ ಇದ್ದಾಗ ರಾಜ್ಯದ ಜನತೆ ನೆಮ್ಮದಿಯಿಂದ ಇದ್ದರು, ದರಿದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೆ ಕೊರೊನಾ ಬಂದಿತು ಎಂದು ಕಾಂಗ್ರೆಸ್‌ ಶಾಸಕ ಜಮೀರ್‌ಅಹಮದ್‌ ಆರೋಪಿಸಿದರು.
ಬುಧವಾರ ಪಟ್ಟಣದಲ್ಲಿ ಡಿಕೆಎಸ್‌ ಚಾರಿಟೇಲ್‌ ಟ್ರಸ್ಟ್ ವತಿಯಿಂದ ಬಡಜನತೆಗೆ ಫುಡ್ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಸ್ಲಿಂ ಬಡಾವಣೆಗಳಲ್ಲಿ ಅಸಹಾಯಕರಿಗೆ ಫುಡ್ ಕಿಟ್‌ ವಿತರಣೆಗೆ ಚಾಲನೆ ನೀಡಿ, ಬಿಜೆಪಿ ಸರ್ಕಾರ ಕೇಂದ್ರ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಜನತೆಗೆ ನೆಮ್ಮದಿ ಇಲ್ಲ, ಕೇಂದ್ರದಲ್ಲಿ ಅಚ್ಚೇದಿನ್‌ ಎನ್ನುತ್ತಾ 22 ಲಕ್ಷ ರೂ. ಬೆಲೆಯ ಸೂಟ್‌ ಧರಿಸಿದ ಪ್ರಧಾನಿ ಸೇರಿದಂತೆ ಉದ್ಯಮಿಗಳಿಗೆ ಅಚ್ಚೆದಿನ್‌ ಬಂದರೆ, ರಾಜ್ಯದಲ್ಲಿ ಕೊರೊನಾ ಮಹಾಮಾರಿ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷಿಸಿ ಜನ ಬೀದಿ ಬೀದಿಗಳಲ್ಲಿ ಸಾಯುವಂತಾದರು, ರಾಜ್ಯದಲ್ಲಿ 33 ಸಾವಿರಕ್ಕೂ ಹೆಚ್ಚು ಮಂದಿ ಸರ್ಕಾರ ಚಿಕಿತ್ಸೆ ನೀಡಲು ಆಗದ ಪರಿಣಾಮ ಮೃತಪಟ್ಟಿದ್ದು, ಇದೀಗ ಬಿಪಿಎಲ್‌ ಕುಂಟುಂದವರಿಗೆ ಒಂದು ಲಕ್ಷ ಪರಿಹಾರ ಎನ್ನುತ್ತಾರೆ. ಸಾಮಾನ್ಯ ಜನರ ಜೀವಕ್ಕೆ ಒಂದು ಲಕ್ಷ ಬೆಲೆ ಕಟ್ಟುತಾರೆ ಎಂದು ಕಿಡಿಕಾರಿದರು.
ಮೂರನೆ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿ, ಮಕ್ಕಳಿಗೆ ತೊಂದರೆ ಎಂದು ಎಚ್ಚರಿಸಿದ್ದಾರೆ. ಈಗಲಾದರೂ ರಾಜ್ಯದ ಬಿಜೆಪಿ ಸರ್ಕಾರ ತಮ್ಮೊಳಗಿನ ಬಿಕ್ಕಟ್ಟು ಬದಿಗಿಟ್ಟು ಮೂರನೆ ಅಲೆ ನಿಯಂತ್ರಿಸಲು ಅಗತ್ಯ ಕ್ರಮಕೈಗೊಳ್ಳಬೇಕು, 1,700 ಕೋಟಿ ರೂ. ಪ್ಯಾಕೇಜ್‌ ಅರ್ಹರಿಗೆ ತಲುಪಿಸಲು ಕ್ರಮಕೈಗೊಳ್ಳಬೇಕು ಎಂದರು.
ತಾಲೂಕಿನವನಾದ ನನ್ನನ್ನು ರಾಜ್ಯ, ದೇಶ ಮಟ್ಟಕ್ಕೆ ಬೆಳೆಸಿದ ಮುಸ್ಲಿಂ ಭಾಂದವರ ಯಾವುದೆ ಕಷ್ಟಗಳಿಗೆ ತಾವು ಸ್ಪಂದಿಸುತ್ತೇನೆ, 2023ರಲ್ಲಿ ಕಾಂಗ್ರೆಸ್‌ ಸರ್ಕಾರ ಬರುವುದು ಗ್ಯಾರಂಟಿ, ತಾವು ಸಚಿವರಾಗುವುದು ಸಹ ಗ್ಯಾರಂಟಿ, ಆಗ ತಾಲೂಕಿಗೆ ಉತ್ತಮ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದರು.
ತಾವು ಹಿಂದೆ ಜೆಡಿಎಸ್ ನಲ್ಲಿದ್ದು ಆಗ ಇಲ್ಲಿನ ಶಾಸಕರಾದ ಡಿ.ನಾಗರಾಜಯ್ಯ ಜನಪರವಾಗಿ ಇರಲಿಲ್ಲ, ಜನತೆಗೆ ಮುಖಕೊಟ್ಟು ಮಾತನಾಡುತ್ತಿರಲಿಲ್ಲ, ಈಗ ಕಾಂಗ್ರೆಸ್‌ ಪಕ್ಷದಿಂದ ಡಾ.ರಂಗನಾಥ ಆಯ್ಕೆ ಆಗಿದ್ದಾರೆ. ಸದಾ ಜನರ ಮಧ್ಯೆ ಇದ್ದು ಕೊರೊನಾ ಕಷ್ಟ ಕಾಲದಲ್ಲಿ ಜನತೆಯ ನೆರವಿಗೆ ನಿಂತಿದ್ದಾರೆ. ಮೊದಲ ಬಾರಿಗೆ ಶಾಸಕರಾಗಿರುವ ಇವರ ಯಾವುದೇ ತಪ್ಪನ್ನು ಮನ್ನಿಸಿ, ಇಂತಹ ಶಾಸಕರನ್ನೆ ಮುಂದಿನ ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದರು.
ಮುಸ್ಲಿಂ ಭಾಂದವರು ಯಾವುದೇ ವದಂತಿಗೆ ಕಿವಿಗೊಡದೆ ಹೆಚ್ಚು ಲಸಿಕೆ ಹಾಕಿಸಿಕೊಳ್ಳಬೇಕು. ತಾವು ಲಸಿಕೆ ಹಾಕಿಸಿ ಕೊಂಡಿದ್ದರಿಂದಲೆ ಏರಡನೆ ಅಲೆಯಲ್ಲಿ ಸೋಂಕು ತಗುಲಿದರೂ ಪ್ರಾಣಾಂತಿಕವಾಗದೆ ಗುಣಮುಖರಾಗಿದ್ದೇನೆ, ಸಿದ್ದರಾಮಯ್ಯ ಸಾಹೇಬರು ಸಹ ಸೋಂಕಿಗೆ ಒಳಗಾದರೂ ಚೇತರಿಸಿಕೊಂಡಿದ್ದಾರೆ, ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಿಕೊಂಡು ಕೊರೊನದಿಂದ ರಕ್ಷಣೆ ಪಡೆಯಬೇಕೆಂದರು.
ಶಾಸಕ ಡಾ.ರಂಗನಾಥ್‌ ಮಾತನಾಡಿ, ಡಿಕೆಎಸ್‌ ಚಾರಿಟೇಬಲ್‌ ಟ್ರಸ್ಟ್ ವತಿಯಿಂದ 75 ಸಾವಿರ ಕಿಟ್‌ ವಿತರಣೆ ಮಾಡುತ್ತಿದ್ದು, ಪಟ್ಟಣದಲ್ಲಿ ಜಮೀರ್ ಅಹಮದ್‌ ಅವರಿಂದಲೇ ಚಾಲನೆ ನೀಡುವ ಕಾರಣದಿಂದ ತಡವಾಯಿತು. ಕೊರೊನಾ ಎರಡನೆ ಅಲೆಯ ಸಂದರ್ಭದಲ್ಲಿ ಯಾವುದೇ ಜಾತಿ, ಮತದ ಸೋಂಕಿತರೂ ಮೃತಪಟ್ಟರು ಮುಸ್ಲಿಂ ಬಾಂಧವರು ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಮಾದರಿಯಾದರೂ, ಒಂದು ಪಕ್ಷದವರು ಧರ್ಮದ ನಡುವೆ ದ್ವೇಷ ಬಿತ್ತುವ ಕೆಲಸ ಮಾಡಿದರೂ ಮುಸ್ಲಿಂ ಭಾಂದವರು ಕಷ್ಟದಲ್ಲಿದ್ದ ಮನುಷ್ಯರ ನೆರವಿಗೆ ನಿಲ್ಲುವ ಮೂಲಕ ಪ್ರಶಂಸೆಗೆ ಪಾತ್ರವಾಗಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಜಿ.ಎ.ಭಾವ, ಪುರಸಭೆ ಅಧ್ಯಕ್ಷ ನಾಗೇಂದ್ರ, ಪ್ರಮುಖರಾದ ಹಮೀದ್‌, ಅಜಂ, ರಹಮಾನ್‌ ಶರೀಫ್,
ಪುರಸಭೆ ಸದಸ್ಯರು ಇತರರು ಇದ್ದರು. ಪಟ್ಟಣದ ವಿವಿಧ ಮುಸ್ಲಿಂ ಬಡವಾಣೆಗಳಲ್ಲಿನ ಅಸಹಾಯಕರಿಗೆ ಫುಡ್‌ಕಿಟ್‌ ವಿತರಣೆಗೆ ಚಾಲನೆ ನೀಡಲಾಯಿತು. ಶಾಸಕ ಜಮೀರ್‌ ಅಹಮದ್‌ ಫುಡ್ ಕಿಟ್ ನೊಂದಿಗೆ ವೈಯಕ್ತಿಕವಾಗಿ ಒಂದು ಸಾವಿರ ನಗದು ನೀಡಿದರು.

Get real time updates directly on you device, subscribe now.

Comments are closed.

error: Content is protected !!