ಅತ್ಯಾಧುನಿಕ ಸೌಲಭ್ಯಗಳುಳ್ಳ ಕ್ರೀಡಾಂಗಣ ಕಾಮಗಾರಿ ಶೀಘ್ರ ಪೂರ್ಣ

ಶಾಸಕರಿಂದ ಎಂ.ಜಿ.ಸ್ಟೇಡಿಯಂ ಕಾಮಗಾರಿ ಪರಿಶೀಲನೆ

529

Get real time updates directly on you device, subscribe now.

ತುಮಕೂರು: ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗುತ್ತಿರುವ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದ ಕಾಮಗಾರಿಯನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ವಿವಿಧ ಕ್ರೀಡಾ ಸಂಘದ ಪದಾಧಿಕಾರಿಗಳೊಂದಿಗೆ ವೀಕ್ಷಿಸಿ ಸೆಪ್ಟೆಂಬರ್‌ ತಿಂಗಳೊಳಗೆ ಕಾಮಗಾರಿ ಮುಗಿಸಲು ಇಂಜಿನಿಯರ್ ಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ರೀಡಾ ಸಂಘಗಳ ಪದಾಧಿಕಾರಿಗಳೊಂದಿಗೆ ಮಾತನಾಡಿದ ಶಾಸಕರು, ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ 8 ಲೈನ್ ಗಳುಳ್ಳ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣವಾಗಲಿದೆ, ಅಲ್ಲದೆ ಕ್ರೀಡಾಂಗಣ ಸಮತಟ್ಟು ಸೇರಿದಂತೆ ವಿವಿಧ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ತುಮಕೂರು ನಗರದ ಎಂ.ಜಿ.ಕ್ರೀಡಾಂಗಣವು ಬೆಂಗಳೂರು ನಗರದಲ್ಲಿರುವ ಕ್ರೀಡಾಂಗಣಗಳಿಗೆ ಪರ್ಯಾಯವಾಗಿ ಅಭಿವೃದ್ಧಿಯಾಗಬೇಕು, ಇಲ್ಲಿನ ಪ್ರತಿಭೆಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸುವಂತೆ ಆಗಬೇಕು, ಇದಕ್ಕಾಗಿ ಎಲ್ಲಾ ರೀತಿಯಲ್ಲೂ ಕ್ರೀಡಾಂಗಣಕ್ಕೆ ಹೈಟೆಕ್‌ ಸ್ಪರ್ಷ ನೀಡಲಾಗುತ್ತಿದೆ ಎಂದು ಹೇಳಿದರು.
ಕ್ರೀಡಾಂಗಣದಲ್ಲಿ ಏನೆಲ್ಲಾ ಅವಶ್ಯಕತೆ ಇದೆ ಎಂಬುದನ್ನು ವಿವಿಧ ಕ್ರೀಡಾ ಸಂಘದವರಿಂದ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರೊಂದಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಕ್ರೀಡಾ ಸಂಘದ ಪದಾಧಿಕಾರಿಗಳು ಶಾಸಕರೊಂದಿಗೆ ಮಾತನಾಡಿ, ಕ್ರೀಡಾಂಗಣದಲ್ಲಿ ನಿರ್ಮಾಣವಾಗುತ್ತಿರುವ ಸಿಂಥೆಟಿಕ್‌ ಟ್ರ್ಯಾಕ್‌ ಪಕ್ಕ ಪಶ್ಚಿಮ ಭಾಗದಲ್ಲಿ ಎರಡು ಲಾಂಗ್‌ ಜಂಪ್‌ ಪಿಟ್ ಗಳು ನಿರ್ಮಾಣವಾಗುತ್ತಿದ್ದು, ಇದರ ಜೊತೆಗೆ ಪೂರ್ವ ಭಾಗದಲ್ಲೂ ಎರಡು ಲಾಂಗ್ ಜಂಪ್‌ ಪಿಟ್ ಗಳನ್ನು ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು.
ಕ್ರೀಡಾಂಗಣದ ಮೇಲ್ಬಾಗದಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಾಣವಾಗುತ್ತಿದ್ದು, ಇದಕ್ಕೆ ಗ್ರಿಲ್‌ ಅಳವಡಿಸಬೇಕಾಗಿದೆ. ಜೊತೆಗೆ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಮೀಡಿಯಾ ಸೆಂಟರ್‌ ನಿರ್ಮಿಸುವ ಅಗತ್ಯವಿದೆ. ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದ ಅಥ್ಲೆಟಿಕ್‌ ಸಿಂಥೆಟಿಕ್‌ ಟ್ರ್ಯಾಕ್ ಗೆ ಹೊಂದಿಕೊಂಡಂತೆ ಫೋಟೋ ಫಿನಿಷಿಂಗ್‌ ಸೆಂಟರ್‌ ಒದಗಿಸಬೇಕು, ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಕ್ರೀಡಾಪಟುಗಳ ತರಬೇತಿಗೆ ಮತ್ತು ಸ್ಪರ್ಧೆಗೆ ಅತ್ಯಾಧುನಿಕ ವೈಟ್ ಲಿಫ್ಟಿಂಗ್‌ ಸೆಂಟರ್‌ ಕಲ್ಪಿಸಬೇಕು, ಕ್ರೀಡಾಂಗಣದಲ್ಲಿ ರಿಯಬಿಲಿಟೇಷನ್‌ ಸೆಂಟರ್‌ ಪಾರಂಭಿಸುವುದು ಅಗತ್ಯವಾಗಿದೆ. ವಿವಿಐಪಿ ಸಭಾಂಗಣ, ಅಡುಗೆ ಕೋಣೆ ನಿರ್ಮಿಸಬೇಕು, ಯೋಗ ಮತ್ತು ಮೆಡಿಟೇಷನ್‌ ಸೆಂಟರ್‌ ಕೂಡ ನಿರ್ಮಿಸುವುದರಿಂದ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ ಎಂದು ಶಾಸಕರಿಗೆ ಮಾಹಿತಿ ನೀಡಿದರು.
ರೈಫಲ್‌ ಶೂಟಿಂಗ್‌ ಅಭ್ಯಾಸಕ್ಕೆ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನ ಮೂರನೇ ಮಹಡಿಯಲ್ಲಿ ಶೂಟಿಂಗ್‌ ಹಾಲ್‌ ನಿರ್ಮಿಸಿಕೊಡಲು ಶಾಸಕರನ್ನು ಕೋರಿದರು. ಟೇಬಲ್‌ ಟೆನ್ನಿಸ್‌ ಕೋರ್ಟ್‌ ನಿರ್ಮಾಣ ಮಾಡಿಕೊಡುವಂತೆಯೂ ಮನವಿ ಮಾಡಿದ್ದು, ಇದಕ್ಕೆ ಶಾಸಕರು ಸಮ್ಮತಿ ಸೂಚಿಸಿದ್ದಾರೆ ಎಂದು ಕ್ರೀಡಾ ಸಂಘದ ಪದಾಧಿಕಾರಿಗಳು ತಿಳಿಸಿದರು.
ಹೊರಾಂಗಣ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಫುಟ್‌ಬಾಲ್‌, ಒಳಾಂಗಣ ಕ್ರೀಡಾಂಗಣದಲ್ಲಿ ವಾಲಿಬಾಲ್‌, ಕಬಡ್ಡಿ, ಬಾಸ್ಕೆಟ್‌ ಬಾಲ್‌ ಜೊತೆಗೆ ಶೆಟಲ್‌ ಬ್ಯಾಡ್ಮಿಂಟನ್‌ ಮತ್ತು ಜಿಮ್ನಾಸ್ಟಿಕ್‌ ಮಾಡಬೇಕೆಂಬ ಪ್ರಸ್ತಾಪವೂ ಇದೆ, ಈ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ.
ಖೇಲೋ ಇಂಡಿಯಾ ಸೆಂಟರ್‌ ತುಮಕೂರಿಗೆ ಬಂದಿರುವುದರಿಂದ 80 ಮಂದಿ ಕ್ರೀಡಾಪಟುಗಳಾಗುತ್ತಾರೆ, ಹಾಗಾಗಿ ಯಾವುದಕ್ಕೂ ಕೊರತೆಯಾಗದಂತೆ ಪೂರ್ಣ ಪ್ರಮಾಣದಲ್ಲಿ ಮಾಡಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
500 ಮಂದಿ ಕ್ರೀಡಾಪಟುಗಳು ಮತ್ತು 100 ಮಂದಿ ತೀರ್ಪುಗಾರರು ಉಳಿದುಕೊಳ್ಳಲು ಕ್ರೀಡಾಂಗಣದಲ್ಲಿ ವಸತಿ ಸೌಕರ್ಯವೂ ಇರಲಿದೆ. ಜೊತೆಗೆ ಅಡುಗೆ ಕೋಣೆ, ದೈಹಿಕ ಅಂಗವಿಕಲತೆಯುಳ್ಳ ಕ್ರೀಡಾಪಟುಗಳಿಗೆ ಪ್ರತ್ಯೇಕ ಗ್ಯಾಲರಿ ನಿರ್ಮಾಣವಾಗಲಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದರು.
ಸರ್ಕಾರಿ ಕಾಲೇಜು ಮೈದಾನದಲ್ಲಿ ಖೋ ಖೋ, ಕಬಡ್ಡಿ, ವಾಲಿಬಾಲ್‌, ಬಾಲ್‌ ಬ್ಯಾಡ್ಮಿಂಟನ್‌, ಕ್ರಿಕೆಟ್‌ ಆಡುವವರಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಬಗ್ಗೆ ಮತ್ತೊಂದು ಸಲ ಚರ್ಚೆ ನಡೆಸುವುದಾಗಿ ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್‌, ಅಥ್ಲೆಟಿಕ್‌ ಕೋಚ್‌ ಶಿವಪ್ರಸಾದ್‌, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು, ರಾಕ್‌ಲೈನ್‌ ರವಿಕುಮಾರ್‌, ಪ್ರದೀಪ್‌, ಗುರುಪ್ರಸಾದ್‌, ಪ್ರಭಾಕರ್‌, ಅನಿಲ್‌, ಚೇತನ್‌ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!