ಸಸ್ಯ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ: ಎಂ.ವಿ.ವೀರಭದ್ರಯ್ಯ

493

Get real time updates directly on you device, subscribe now.

ಮಧುಗಿರಿ: ತಾಲೂಕಿನ ಸಸ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಇಲಾಖೆ ಯಾವುದೇ ಕಾರ್ಯಕ್ರಮ ನೀಡಿದರೆ ಸರ್ಕಾರದಿಂದ ಅಗತ್ಯ ಅನುದಾನ ಕೊಡಿಸಿಕೊಡಲಾಗುವುದು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಸಿ ನೆಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ತಾಲೂಕಿನಲ್ಲಿ ಅಪಾರ ಗುಡ್ಡಗಾಡಿನ ಸಂಪತ್ತಿದ್ದು, ಅವುಗಳ ಒಡಲಲ್ಲಿ ಸಸ್ಯ ಬೆಳೆಸಿದರೆ ಸಮೃದ್ಧಿ ಅಂತರ್ಜಲ ಹಾಗೂ ಸುಸ್ಥಿರ ವಾತಾವರಣ ಸೃಷ್ಟಿಸಬಹುದು. ಈ ಗುಡ್ಡಗಾಡು ಪ್ರದೇಶದಲ್ಲಿ ನೀರನ್ನು ಹಿಡಿದಿಡುವ ಹಾಗೂ ಸೌಂದರ್ಯ ಹೆಚ್ಚಿಸುವ ಬಿದಿರನ್ನು ಹೆಚ್ಚಾಗಿ ಬೆಳಸಬೇಕು. ಅದಕ್ಕಾಗಿ ವಿಶೇಷ ಕಾರ್ಯ ಯೋಜನೆ ಸಿದ್ಧಪಡಿಸಿದರೆ ಸರ್ಕಾರದಿಂದ ಅಗತ್ಯ ಅನುದಾನ ಕೊಡಿಸುತ್ತೇನೆ. ಇಂದು ಭೂಮಿಯ ಭೌಗೋಳಿಕ ಕ್ಷೇತ್ರ ಕಡಿಮೆಯಾಗುತ್ತಿದ್ದು, ಜನಸಂಖ್ಯೆ ಹೆಚ್ಚಾಗುತ್ತಿದೆ. ನೀರಿಗಾಗಿ ಬವಣೆ ಹಿಂದಿನ ಮಾತಾಗಿದ್ದು, ಪ್ರಸ್ತುತ ಉತ್ತಮ ಗಾಳಿಗಾಗಿ ಬವಣೆ ಎಂಬಂತಾಗಿದೆ. ಮರಗಳ ವೃದ್ಧಿಯಾಗದೆ ಉತ್ತಮ ಗಾಳಿ ನಿರೀಕ್ಷಿಸಲು ಸಾಧ್ಯವಿಲ್ಲ. ಮರಗಳನ್ನು ಬೆಳೆಸಿ ಉಳಿಸುವುದು ಕೇವಲ ಸರ್ಕಾರ ಹಾಗೂ ಇಲಾಖೆಗಳ ಕರ್ತವ್ಯವಲ್ಲ. ಅದನ್ನು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕೆಲಸವಾಗಬೇಕು. ಈ ಅರಣ್ಯ ಅಭಿವೃದ್ಧಿಯಿಂದ ಉತ್ತಮ ಮಳೆಯಾಗಿ ರೈತರು ಸಮೃದ್ಧಿಯಾಗಿ ದೇಶದಲ್ಲಿ ಹಸಿವು ನೀಗುತ್ತದೆ. ಇಲ್ಲವಾದರೆ ಅಪಾಯ ಹೆಚ್ಚಾಗಲಿದೆ, ಇಲಾಖೆಯಿಂದ ಅನುಷ್ಠಾನವಾಗುವ ಕಾಮಗಾರಿಗಳಲ್ಲಿ ಕೆಲವು ದೂರು ಕೇಳಿಬಂದಿದ್ದು, ಈ ಬಗ್ಗೆ ಗುಣಮಟ್ಟ ಹಾಗೂ ಪ್ರಾಮಾಣಿಕತೆ ಕಾಪಾಡಿಕೊಂಡು ತಪ್ಪುಗಳನ್ನು ತಿದ್ದಿಕೊಂಡು ನಡೆಯಬೇಕು. ಪ್ರಸ್ತುತ ಕೊರೊನಾ 2ನೇ ಅಲೆ ಕಡಿಮೆಯಾಗಿಲ್ಲ, ಬದಲಿಗೆ ಜೀವಂತವಾಗಿದ್ದು, 3ನೇ ಅಲೆಗೆ ಸಹಕಾರ ನೀಡುವಂತಿದೆ. ಆದ್ದರಿಂಂದ ಜನತೆ ಪ್ರಜ್ಞಾವಂತಿಕೆ ಪ್ರದರ್ಶಿಸಿ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಲಸಿಕೆ ಪಡೆದು ಕೊರೊನಾ ನಿಯಂತ್ರಣಕ್ಕೆ ತಾಲೂಕು ಆಡಳಿತದೊಂದಿಗೆ ಸಹಕರಿಸಬೇಕು ಎಂದರು.
ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್‌ ಯರಡೋಣಿ ಮಾತನಾಡಿ, ವಿಶ್ವ ಸಂಸ್ಥೆಯ ನಿರ್ದೇಶನದಂತೆ 1972 ರಲ್ಲಿ ಸ್ವೀಡನ್‌ ದೇಶದಲ್ಲಿ ಈ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಲಾಗಿದ್ದು, ಪ್ರತಿ ಜೂನ್‌ 5 ರಂದು ಆಚರಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಅರಣ್ಯ ಅಭಿವೃದ್ಧಿ ಮಂತ್ರದೊಂದಿಗೆ ಕಾರ್ಯ ನಿರ್ವಹಣೆ ಮಾಡುತ್ತಿದೆ. ಅರಣ್ಯ ರಕ್ಷಣೆ ಹಾಗೂ ಅಭಿವೃದ್ಧಿ ಪಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂದು ಹಲವಾರು ಅಭಿವೃದ್ಧಿಗಾಗಿ ಅರಣ್ಯ ನಾಶವಾಗುತ್ತಿರುವುದು ದುರಂತ, ಇದು ಜನಗತ್ತಿನ ತಾಪಮಾನದ ಏರಿಳಿತಕ್ಕೆ ಕಾರಣವಾಗುತ್ತಿದ್ದು, ಮನುಕುಲವು ಅಪಾಯದ ಅಂಚಿನಲ್ಲಿದೆ. ಇಂದು ದೇಶದ ಅಭಿವೃದ್ಧಿಯು ಅರಣ್ಯ ನಾಶಕ್ಕೆ ಕಾರಣವಾಗಬಾರದು. ಸುಸ್ಥಿರ ಅಭಿವೃದ್ಧಿಯನ್ನು ಅರಣ್ಯದ ಜೊತೆಯಾಗಿಯೇ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ವಾಸುದೇವ ಮೂರ್ತಿ, ಉಪ ವಲಯ ಅರಣ್ಯಾಧಿಕಾರಿ ಮುತ್ತುರಾಜ್‌, ಪುರಸಭೆ ಸದಸ್ಯರಾದ ಜಗನ್ನಾಥ್‌, ಗಂಗರಾಜು, ನಾರಾಯಣ್‌, ನರಸಿಂಹಮೂರ್ತಿ, ನಿವೃತ್ತ ಪ್ರಾಂಶುಪಾಲ ಗೋವಿಂದರಾಜು, ಎಪಿಎಂಸಿ ಸದಸ್ಯ ಬಸವರಾಜು ಹಾಗೂ ಇಲಾಖೆಯ ಸಿಬ್ಬಂದಿ ಕರಿಯಣ್ಣ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!