ಪತ್ರಕರ್ತ ಜಿ.ಇಂದ್ರಕುಮಾರ್‌ ನಿಧನ

500

Get real time updates directly on you device, subscribe now.

ತುಮಕೂರು: ಅನಾರೋಗ್ಯದಿಂದ ಬಳಲುತ್ತಿದ್ದ ಸಂಯಕ್ತ ಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರ ಜಿ.ಇಂದ್ರಕುಮಾರ್ (54) ಮಂಗಳವಾರ ಮಧ್ಯಾಹ್ನ ನಗರದ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪತ್ರಕರ್ತ ಜಿ.ಇಂದ್ರಕುಮಾರ್‌ ಅವರು ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಶ್ರೀಯುತರು ಪತ್ನಿ ಜಯಶ್ರೀ, ಪುತ್ರಿ ಶಿಂಷಾ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕಳೆದ 30 ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದ ಇಂದ್ರಕುಮಾರ್‌ ಅವರು ನಗರದ ಹಲವು ಸ್ಥಳೀಯ ಪತ್ರಿಕೆಗಳಲ್ಲೂ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಸಂಯುಕ್ತ ಕರ್ನಾಟಕ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಪತ್ರಿಕಾ ವೃತ್ತಿ ಜತೆಗೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಇಂದ್ರಕುಮಾರ್‌ ಅವರು, ಹಲವು ವಿಮರ್ಶನಾತ್ಮಕ ಪುಸ್ತಕಗಳು, ಹನಿಗವನಗಳನ್ನು ಬರೆದಿದ್ದರು.
ಪತ್ರಕರ್ತ ಇಂದ್ರಕುಮಾರ್‌ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಪತ್ರಕರ್ತರು, ಸಾಹಿತಿಗಳು ಮೃತರ ನಿವಾಸಕ್ಕೆ ತೆರಳಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ತೀವ್ರ ಸಂತಾಪ ಸೂಚಿಸಿದರು.
ಮೃತರ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಸಾಹಿತಿಗಳು, ಸ್ನೇಹಿತರು ತೀವ್ರ ಕಂಬನಿ ಮಿಡಿದಿದ್ದಾರೆ.
ಮೃತರ ಅಂತ್ಯಕ್ರಿಯೆಯು ನಗರದ ಡಿ.ಎಂ.ಪಾಳ್ಯದಲ್ಲಿರುವ ಅವರ ಜಮೀನಿನಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Get real time updates directly on you device, subscribe now.

Comments are closed.

error: Content is protected !!