ನನಗೆ ಯಾವುದೇ ಸಚಿವ ಸ್ಥಾನ ಬೇಡ- ಹಿರಿಯರನ್ನು ಮಂತ್ರಿ ಮಾಡಿ

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಜ್ಯೋತಿಗಣೇಶ್

386

Get real time updates directly on you device, subscribe now.

ತುಮಕೂರು: ಭಾರತೀಯ ಜನತಾ ಪಾರ್ಟಿಯಲ್ಲಿ ಮೂರ್ನಾಲ್ಕು ಬಾರಿ ಶಾಸಕರಾಗಿ ಇನ್ನು ಸಚಿವರಾಗದೆ ಇರುವವರು ಇದ್ದಾರೆ, ಹೀಗಿರುವಾಗ ನಾನು ಸಚಿವ ಸ್ಥಾನ ಕೇಳುವುದು ಸಮಂಜಸವಲ್ಲ ಎಂದು ಶಾಸಕ ಜ್ಯೋತಿಗಣೇಶ್‌ ತಿಳಿಸಿದರು.
ನಾನಿನ್ನೂ ಈಗ ತಾನೆ ಕಣ್ಣು ಬಿಡುತ್ತಿದ್ದೇನೆ, ನನಗೆ ಯಾವುದೇ ಸಚಿವ ಸ್ಥಾನ ಬೇಡ, ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯೂ ಅಲ್ಲ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತಿಪಟೂರು ಶಾಸಕ ಬಿ.ಸಿ.ನಾಗೇಶ್‌ ಅವರು ಹಿರಿಯರಿದ್ದಾರೆ. ಪಕ್ಷಕ್ಕಾಗಿ ಸಾಕ್ಷಷ್ಟು ದುಡಿದಿದ್ದಾರೆ, ಅವರಿಗೆ ಸಚಿವ ಸ್ಥಾನ ಕೊಟ್ಟರೆ ನಮ್ಮದೇನೂ ಅಭ್ಯಂತರವಿಲ್ಲ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಾಕಷ್ಟು ಶಾಸಕರು ಶ್ರಮಿಸಿದ್ದಾರೆ. ಇನ್ನೂ ಅಧಿಕಾರ ಅನುಭವಿಸದೇ ಇರುವವರು ತುಂಬಾ ಜನ ಇದ್ದಾರೆ. ಅವರೆಲ್ಲ ಹಾಗೆ ಇರುವಾಗ ನಾನು ಸಚಿವ ಸ್ಥಾನ ಕೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನ ಪಕ್ಷದ ಬಲವರ್ಧನೆ, ಜನಸೇವೆಗೆ ಪ್ರಾಮಾಣಿಕವಾಗಿ ಪಕ್ಷದ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ ಎಂದರು.
ಮುಂದಿನ 20 ತಿಂಗಳೊಳಗೆ ವಿಧಾನಸಭಾ ಚುನಾವಣೆ ನಡೆದು ಹೋಗುತ್ತದೆ. ಹಾಗಾಗಿ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕಷ್ಟ ಕಾಲದಲ್ಲಿ ರಾಜ್ಯದ ಅಭಿವೃದ್ಧಿಗೆ ನೂತನ ಮುಖ್ಯಮಂತ್ರಿ ಶ್ರಮ ವಹಿಸಬೇಕಾಗಿದೆ ಎಂದರು.
2018ರಲ್ಲಿ ನಡೆದ ಚುನಾವಣೆಯಲ್ಲಿ 105 ಜನ ಬಿಜೆಪಿ ಶಾಸಕರು ಗೆದ್ದು ಬಂದಿದ್ದೇವೆ. ಪಕ್ಷದಲ್ಲಿ 75 ವರ್ಷ ಮೀರಿದವರು ಯಾವುದೇ ಸ್ಥಾನಮಾನ ಅಲಂಕರಿಸುವಂತಿಲ್ಲ ಎಂಬ ಮಾನದಂಡವಿದೆ. ಆದರೂ ಯಡಿಯೂರಪ್ಪನವರಿಗೆ 2 ವರ್ಷ ಕಾಲ ವರಿಷ್ಠರು ಅವಕಾಶ ನೀಡಿದ್ದರು, ಇದೀಗ ಬಿಎಸ್‌ವೈ ರಾಜೀನಾಮೆ ಕೊಟ್ಟ 24 ಗಂಟೆಯಲ್ಲೇ ಉತ್ತಮ ಮುಖ್ಯಮಂತ್ರಿಯನ್ನಾಗಿ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಬೊಮ್ಮಾಯಿ ಅವರು ಯಡಿಯೂರಪ್ಪನವರ ಜಾಗ ತುಂಬುವ ಮೂಲಕ ಉತ್ತಮ ಆಡಳಿತ ನಡೆಸಲಿದ್ದಾರೆ ಎಂದ ವಿಶ್ವಾಸ ಇದೆ ಎಂದರು.

ಯತ್ನಾಳ್ ಗೆ ಬುದ್ಧಿ ಭ್ರಮಣೆಯಾಗಿದೆ
ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತರುವಲ್ಲಿ ಸದಾ ಶ್ರಮಿಸುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಪದೇ ಪದೆ ಹೇಳಿಕೆ ನೀಡುತ್ತಿರುವ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್‌ ಇಂದಿಲ್ಲಿ ಹೇಳಿದರು.
ಯತ್ನಾಳ್‌ ಅವರು ಪಕ್ಷಕ್ಕೆ ಗೌರವ ತರುವ ಕೆಲಸ ಮಾಡುತ್ತಿಲ್ಲ, ಅವರು ಹಿರಿಯರಿದ್ದಾರೆ, ಆದರೂ ಈ ರೀತಿ ಅಸಭ್ಯವಾಗಿ ಮಾತುಗಳನ್ನಾಡುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರ ಹೇಳಿಕೆಗೆ ಮಾಧ್ಯಮದವರು ಪದೇ ಪದೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ,ಯತ್ನಾಳ್‌ ಅವರು ಮಾತನಾಡುವ ದಾಟಿಯನ್ನು ಗಮನಿಸಿದರೆ ನಿಜಕ್ಕೂ ಅವರಿಗೆ ಬುದ್ಧಿ ಭ್ರಮಣೆಯಾಗಿರಬೇಕು ಎನಿಸುತ್ತದೆ ಎಂದು ಅವರು ತಿಳಿಸಿದರು.
ಈ ಹಿಂದೆ 2016ರ ಸಮಯದಲ್ಲಿ ಯತ್ನಾಳ್‌ ಅವರು ಯಡಿಯೂರಪ್ಪನವರ ಪರ ಮಾತನಾಡುತ್ತಿದ್ದರು, ಈಗ ಅವರ ವಿರುದ್ಧ ಪದೇ ಪದೆ ಹೇಳಿಕೆಗಳನ್ನು ನೀಡುತ್ತಾ ಓಡಾಡುತ್ತಿದ್ದಾರೆ. ಇದರಿಂದ ಜನರಲ್ಲಿ ಯತ್ನಾಳ್‌ ಅವರ ಬಗ್ಗೆ ಬೇರೆ ರೀತಿಯ ಅಭಿಪ್ರಾಯ ಬರಲಿದೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸುಮ್ಮನೆ ಕೂರುವ ಜಾಯಮಾನದವರಲ್ಲ, ಅವರೊಬ್ಬ ಮಾಸ್‌ ಲೀಡರ್‌, ಅವರನ್ನು ಸುಮ್ಮನೆ ಕೂರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

Get real time updates directly on you device, subscribe now.

Comments are closed.

error: Content is protected !!