ಜಮೀನಿಗೆ ಸಾಗುವಳಿ ಪತ್ರ ನೀಡಲು ಮನವಿ

348

Get real time updates directly on you device, subscribe now.

ತುಮಕೂರು: ಭೂ ಮಂಜೂರಾತಿ ಸಮಿತಿಗಳಲ್ಲಿ ಮಂಜೂರಾಗಿರುವ ಜಮೀನಿಗೆ ಸಾಗುವಳಿ ಪತ್ರ ನೀಡುವಂತೆ ಹಾಗೂ ಬಗರ್ ಹುಕ್ಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ರಕ್ಷಣೆ ನೀಡುವಂತೆ ಕೋರಿ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಹೆಚ್‌.ಹುಚ್ಚಯ್ಯ ಹಾಗೂ ಕುಣಿಗಲ್‌ ತಾಲೂಕು ಅಹಿಂದ ವರ್ಗಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವೈ.ಹೆಚ್‌.ಹುಚ್ಚಯ್ಯ ಹಾಗೂ ಜಿ.ಕೆ.ನಾಗಣ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ನಿಯೋಗ ತೆರಳಿ ಮನವಿ ಸಲ್ಲಿಸಿದರು. ಕುಣಿಗಲ್‌ ತಾಲೂಕು ಸೇರಿದಂತೆ ಜಿಲ್ಲೆಯ ಸಾವಿರಾರು ಜನರು ಫಾರಂ ನಂ. 53 ಮತ್ತು 57 ರಲ್ಲಿ ತಾವು ಹಲವಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ಸರಕಾರಿ ಗೋಮಾಳದ ಜಮೀನು ಮಂಜೂರು ಮಾಡಿಕೊಡುವಂತೆ ಮನವಿ ಮಾಡುತ್ತಾ ಬಂದಿದ್ದರೂ ಹಲವರಿಗೆ ಇಂದಿಗೂ ಮಂಜೂರಾತಿ ಪತ್ರ ದೊರೆತ್ತಿಲ್ಲ, ಅಲ್ಲದೆ ಈ ಹಿಂದೆ ಬಗರ್‌ ಹುಕ್ಕುಂ ಸಮಿತಿಯಲ್ಲಿ ಮಂಜೂರಾದ ಜಮೀನಿಗೂ ಇದುವರೆಗೂ ಸಾಗುವಳಿ ಚೀಟಿ ನೀಡಿಲ್ಲ, ಇದಕ್ಕಾಗಿ ರೈತರು ದಿನ ನಿತ್ಯ ಸರಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ, ಹತ್ತಾರು ವರ್ಷಗಳಿಂದ ಭೂಮಿಯಲ್ಲಿ ಬೆಳೆ ಬೆಳೆದರೂ ಯಾವುದೇ ದಾಖಲೆಗಳಿಲ್ಲದ ಕಾರಣ ಬ್ಯಾಂಕಿನಿಂದ ಸಾಲ ಸೌಲಭ್ಯ, ಸರಕಾರದ ಸವಲತ್ತುಗಳಿಂದಲೂ ವಂಚಿತರಾಗುತ್ತಿದ್ದಾರೆ, ಅಲ್ಲದೆ ಬಲಾಢ್ಯರು ಬಡವರ ಜಮೀನುಗಳನ್ನು ಒತ್ತುವರಿ ಮಾಡಿ ದೌರ್ಜನ್ಯದಿಂದ ಒಕ್ಕಲೆಬ್ಬಿಸುತ್ತಿರುವ ಪ್ರಕರಣ ಹೆಚ್ಚಾಗುತ್ತಿವೆ, ಅದ್ದರಿಂದ ಈ ಹಿಂದೆ ಮಂಜೂರಾಗಿರುವ ಜಮೀನುಗಳಿಗೆ ಸಾಗುವಳಿ ಪತ್ರ ವಿತರಿಸಬೇಕು ಹಾಗೂ ಅರ್ಜಿ ಸಲ್ಲಿಸಿ ಕಾಯುತ್ತಿರುವವರಿಗೆ ರಕ್ಷಣೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ವರ್ಗದವರ ತೋಟಿ, ತಳವಾರ, ನೀರುಗಂಟಿ, ಇನಾಮ್‌ ಜಮೀನುಗಳು ಅವರ ಹೆಸರಿಗೆ ಮರು ಮಂಜೂರಾಗಿದ್ದರೂ ಅಲ್ಲದೆ, ಇವುಗಳನ್ನು ಕೊಳ್ಳುವುದು, ಮಾರುವುದು ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೆಲವರು ಕಾನೂನು ಬಾಹಿರವಾಗಿ ಪರಿಶಿಷ್ಟರ ಜಮೀನುಗಳನ್ನು ಖರೀದಿ ಮಾಡಿ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಈ ಬಗ್ಗೆ ಇರುವ ಪಿಟಿಸಿಎಲ್‌ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ನಿಯೋಗದಲ್ಲಿ ಕುಣಿಗಲ್‌ ತಾಲೂಕು ಅಹಿಂದ ವರ್ಗಗಳ ಒಕ್ಕೂಟದ ದೊಡ್ಡಯ್ಯ, ಎಸ್‌.ಆರ್‌.ಚಿಕ್ಕಣ್ಣ, ಧನಂಜಯ್ಯ, ಗಂಗಮ್ಮ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!