ಜನರ ಕಷ್ಟಗಳಿಗೆ ಸ್ಪಂದಿಸುವ ಪಕ್ಷ ಬಿಜೆಪಿ

107

Get real time updates directly on you device, subscribe now.

ತುಮಕೂರು: ನಗರದ ಸಿದ್ಧಗಂಗಾ ಮಠದ ರಸ್ತೆಯಲ್ಲಿರುವ ಅರ್ಬನ್‌ ರೆಸಾರ್ಟ್‌ನಲ್ಲಿ ಮಂಗಳವಾರ ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆಯು ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಅರಕೆರೆ ರವೀಶ್‌ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆ ಉದ್ಘಾಟಿಸಿದ ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್‌ಕುಮಾರ್‌ ಕೆ.ಸಿ. ಮಾತನಾಡಿ ಯುವಮೋರ್ಚಾ ಕೇವಲ ಸಂಘಟನೆ ಮತ್ತು ಹೋರಾಟಕ್ಕೆ ಸೀಮಿತವಾಗದೆ ಕೋವಿಡ್‌ ಸಂದರ್ಭದಲ್ಲಿ ಅನ್ನದಾನದಿಂದ ಅಂತ್ಯಕ್ರಿಯೆವರೆಗೂ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಕಾರ್ಯನಿರ್ವಹಿಸಿ ಸೇವಾ ಹೀ ಸಂಘಟನೆ ಎಂಬುದನ್ನು ಸಾಬೀತುಪಡಿಸಿದೆ ಎಂದು ತಿಳಿಸಿದರು.
ರಾಜ್ಯದುದ್ದಗಲಕ್ಕೂ ಕೊರೊನ ಮಹಾಮಾರಿ ಆವರಿಸಿದ ಸಂದರ್ಭದಲ್ಲಿ ಅತ್ಯಂತ ಜವಾಬ್ದಾರಿಯಿಂದ, ಮಾನವೀಯತೆ ದೃಷ್ಟಿಯಿಂದ, ಸಂವೇದನಾಶೀಲತೆಯಿಂದ ಜನರ ನೊಂದವರ ಅನಾರೋಗ್ಯಕ್ಕೆ ತುತ್ತಾದವರ ನೋವಿಗೆ ಸ್ಪಂದಿಸಿದ ಏಕೈಕ ಪಕ್ಷ ಬಿಜೆಪಿಯಾಗಿದೆ ಎಂದರು.
ನಮ್ಮ ಪಕ್ಷ ನಮಗೆ ಹಾಕಿಕೊಟ್ಟ ಮಾರ್ಗದರ್ಶನವನ್ನು ಸ್ವಂತಕ್ಕೆ ಬಳಸದೆ ಸಮಾಜಕ್ಕಾಗಿ ಮೀಸಲಿಟ್ಟು, ನಮ್ಮ ವ್ಯಕ್ತಿತ್ವ, ನಮ್ಮ ನಡತೆ, ನಮ್ಮ ಗುರಿ ಪಕ್ಷದ ತತ್ವ ಸಿದ್ಧಾಂತಗಳ ಆಧಾರದ ಮೇಲೆ ಹೆಚ್ಚೆಚ್ಚು ಬೆಳೆಸಿಕೊಂಡು ಹೋಗಬೇಕು ಎಂದರು.
ಕಾರ್ಯಕಾರಿಣಿ ಸಭೆಯ ಮುಖ್ಯ ಉದ್ಧೇಶವೆಂದರೆ ಯುವ ಮೋರ್ಚಾ ಕಾರ್ಯಕರ್ತರು 3 ತಿಂಗಳ ಹಿನ್ನೋಟ ಮತ್ತು 3 ತಿಂಗಳ ಮುನ್ನೋಟ ಪಕ್ಷ ಕೊಟ್ಟ ಜವಾಬ್ದಾರಿ ಯಾವ ರೀತಿ ನಿರ್ವಹಿಸುತ್ತಿದ್ದೇವೆ, ಜವಾಬ್ದಾರಿಯನ್ನು ಪರಿಪೂರ್ಣಗೊಳಿಸಿದ್ದೇವೆಯೇ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಭೆಯಾಗಿದೆ ಎಂದು ಹೇಳಿದರು.
ಯುವ ಮೋರ್ಚಾ ಕಾರ್ಯಕರ್ತರು ಸಮಾಜದಲ್ಲಿ ನೊಂದವರ, ಶೋಷಿತರ, ದೀನದಲಿತರ, ದ್ವನಿಯಿಲ್ಲದವರ ಧ್ವನಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಲ್ಲಿ ಯುವ ಘಟಕದ ಅಧ್ಯಕ್ಷರಾಗಿ ರಾಜಕೀಯ ಹಿನ್ನಲೆಯುಳ್ಳ ಕುಂಟುಂಬದವರೇ ಇದ್ದಾರೆ. ಆದರೆ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಹುದ್ದೆ ಸಿಗಲಿದೆ ಎಂಬುದಕ್ಕೆ ನಾನೇ ಸಾಕ್ಷಿ ಎಂದರು.
ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬರಬೇಕೆಂದು ಸಲಹೆ ನೀಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್‌ ಮಾತನಾಡಿ, ಭಾರತೀಯ ಜನತಾ ಪಾರ್ಟಿ ವಿಚಾರ ನಿಷ್ಟ ಪಾರ್ಟಿಯಾಗಿದ್ದು, ಭವಿಷ್ಯದ ಭಾರತಕ್ಕೆ ಯುವಮೋರ್ಚಾ ಕಾರ್ಯಕರ್ತರು ಕೆಲಸ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಮಟ್ಟದಲ್ಲಿ ಪ್ರಚಾರಪಡಿಸುವ ಸಮಾಜಮುಖಿ ಚಿಂತನೆ, ಅಭಿವೃದ್ಧಿ ಕಡೆ ಪಯಣ ಬಿಜೆಪಿಯ ಯುವ ಕಾರ್ಯಕರ್ತರದ್ದು, ಪಕ್ಷವು ಕಾರ್ಯಕರ್ತರಿಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕು ಎಂದು ಹೇಳಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್‌ ಕುಮಾರ್‌ ಬಿದರೆ ಮಾತನಾಡಿ, ಇಂದು ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದು, ರಾಜ್ಯದಲ್ಲಿಯೂ ಸಹ ಬಿಜೆಪಿ ಸರ್ಕಾರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಕಳೆದ 7 ವರ್ಷಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಸಮಗ್ರ ಮತ್ತು ಸುಸ್ಥಿರ ಅಭಿವೃದ್ದಿಯನ್ನು ಕಂಡಿದೆ ಎಂದರು.
ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ರವೀಶ್‌ ಅರಕೆರೆ, ಯುವಕರಲ್ಲಿ ದೇಶಪ್ರೇಮ ರಾಷ್ಟ್ರಭಕ್ತಿಯನ್ನು ಬಿಜೆಪಿ ಯುವ ಮೋರ್ಚಾ ಬೆಳೆಸುತ್ತದೆ ಅಲ್ಲದೇ ಅವರಲ್ಲಿ ಕ್ರೀಯಾಶಿಲತೆ ಮತ್ತು ಐಕ್ಯತೆಯನ್ನು ಮೂಡಿಸುತ್ತದೆ ಎಂದು ತಿಳಿಸಿದರು.
ರಾಷ್ಟ್ರದಲ್ಲಿ ಬಿಜೆಪಿ ಪಕ್ಷ ಪ್ರಭಲವಾಗಿ ಹೊರ ಹೊಮ್ಮುತ್ತಿರುವುದಕ್ಕೆ ಕ್ರಿಯಶೀಲರಾದ ಯುವಕರ ಪಾತ್ರ ದೊಡ್ಡದಿದೆ. ಯುವಕರೆ ಪಕ್ಷದ ಆಸ್ತಿಯಾಗಿದ್ದಾರೆ ಆದ್ದರಿಂದ ಪಕ್ಷದ ಸಂಘಟನೆಗಾಗಿ ಶ್ರಮಿಸಬೇಕಾಗಿದೆ ಇದರಿಂದ ಭಾರತ ದೇಶದ ಸೇವೆಯಲ್ಲಿ ತೊಡಗಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವಿಶಂಕರ್‌ ಹೆಬ್ಬಾಕ, ಸಂಪಿಗೆ ಶ್ರೀಧರ್‌, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಾಳೆಕಾಯಿ, ಕಾರ್ಯದರ್ಶಿ ಅರವಿಂದ್‌, ಪ್ರಶಾಂತ್‌, ರುದ್ರೇಶ್‌, ದಾವಣಗೆರೆ ವಿಭಾಗದ ಸಹ ಪ್ರಭಾರಿ ಲಕ್ಷ್ಮೀಶ, ಸಹ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ್‌, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್‌, ಪ್ರಧಾನ ಕಾರ್ಯದರ್ಶಿ ಯೇಶಸ್‌, ಶಿವಕುಮಾರ ಸ್ವಾಮಿ, ಟಿ ಡಿ ವಿನಯ್‌, ರಕ್ಷಿತ್‌, ಗುರು, ಶ್ರೀಧರ್‌, ನವಚೇತನ, ನವೀನ್‌ ಸೇರಿದಂತೆ ಜಿಲ್ಲೆಯ ಎಲ್ಲಾ ಮಂಡಲಗಳ ಯುವ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!