ನಾಲಿಗೆ ಹರಿಬಿಟ್ಟು ಪೇಚಿಗೆ ಸಿಲುಕಿದ ನರಸಿಂಹರಾಜು!

ಮಹಿಳಾ ಶಿಕ್ಷಕಿಯರಿಗೆ ಏಕವಚನದಲ್ಲಿ ನಿಂದನೆ- ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷನ ವಿರುದ್ಧ ದೂರು

348

Get real time updates directly on you device, subscribe now.

ಈಶ್ವರ್‌ ಎಂ
ತುಮಕೂರು:
ರಾಜ್ಯ ಸರಕಾರಿ ನೌಕರರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಎನ್‌.ನರಸಿಂಹರಾಜು ಮಹಿಳಾ ಶಿಕ್ಷಕಿಯರ ವಿರುದ್ಧ ನಾಲಿಗೆ ಹರಿಬಿಟ್ಟು ಪೇಚಿಗೆ ಸಿಲುಕಿದ್ದಾರೆ, ಶಿಕ್ಷಕಿಯರಿಗೆ ಏಕ ವಚನದಲ್ಲಿ ಮಾತನಾಡಿಸುವ ಮೂಲಕ ತಮ್ಮ ಹುದ್ದೆಯ ಘನತೆಯನ್ನೇ ಹಾಳು ಮಾಡಿದ್ದಾರೆ, ಈ ಸಂಬಂಧ ಕೆಲ ಮಹಿಳಾ ಶಿಕ್ಷಕಿಯರು ನರಸಿಂಹರಾಜು ವಿರುದ್ಧ ಎಸ್‌ಪಿ ರಾಹುಲ್ ಕುಮಾರ್‌ ಶಹಪೂರ್‌ ವಾಡ್‌ ಅವರಿಗೆ ದೂರು ಸಲ್ಲಿಸಿದ್ದಾರೆ, ಆದರೆ ಈ ವರೆಗೂ ಎಫ್‌ಐಆರ್‌ ದಾಖಲಾಗದಿರುವುದು ಮಾತ್ರ ಹಲವು ಅನುಮಾನಕ್ಕೆ ಕಾರಣವಾಗಿದೆ.

ಏನಿದು ಪ್ರಕರಣ?
ಏನಿದು ಪ್ರಕರಣ ಅಂತಾ ಹುಡುಕುತ್ತಾ ಹೋದರೆ ಕಳೆದ ವಾರ ಆಗಸ್ಟ್ 12 ರಂದು ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತುಮಕೂರು ಜಿಲ್ಲಾ ಶಾಖೆವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ಸಭೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಬಹುತೇಕ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು, ಅಷ್ಟೇ ಅಲ್ಲದೆ ಸಂಘ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಕ್ಷರಿ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು, ಇಂಥ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ನರಸಿಂಹರಾಜು ಕೆಲ ಮಹಿಳಾ ಶಿಕ್ಷಕಿಯರನ್ನು ಬಾಯಿಗೆ ಬಂದಂತೆ ಬೈಯ್ದಿದ್ದಾರೆ, ಏಕ ವಚನದಲ್ಲಿ ಅವಾಚ್ಯ ಶಬ್ದ ಬಳಸಿ ನಾಲಿಗೆ ಹರಿಬಿಟ್ಟಿದ್ದಾರೆ, ಇದರಿಂದ ಆಕ್ರೋಶಗೊಂಡ ಶಿಕ್ಷಕಿಯರು ಜಿಲ್ಲಾಧ್ಯಕ್ಷನ ದರ್ಪವನ್ನು ಖಂಡಿಸಿದ್ದಾರೆ.
ಅಷ್ಟಕ್ಕು ಅಲ್ಲಿ ಆಗಿದ್ದು ಏನು ಅಂದ್ರೆ, ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕದಿಂದ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಕ್ಷರಿ ಅವರಿಗೆ ಮನವಿಯೊಂದನ್ನು ನೀಡಲು ಮುಂದಾಗಿದ್ದಾರೆ, ಶಿಕ್ಷಕರ ಸಂಘದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವುದು ಮತ್ತು ಒಂದಷ್ಟು ಸೌಲಭ್ಯ ಕೊಡುವುದು, ಸಮಸ್ಯೆ ನಿವಾರಿಸುವ ಬಗ್ಗೆ ಅವರ ಮನವಿ ಇತ್ತು, ಈ ವೇಳೆ ತಾಳ್ಮೆ ಕಳೆದುಕೊಂಡ ಜಿಲ್ಲಾಧ್ಯಕ್ಷ ಮಹಿಳಾ ಶಿಕ್ಷಕಿಯರನ್ನು ಏಕ ವಚನದಲ್ಲಿ ಮಾತನಾಡಿ ನಿಂದಿಸಿದ್ದಾರೆ, ಇದರಿಂದ ಕೆರಳಿದ ಶಿಕ್ಷಕಿಯರು ನರಸಿಂಹರಾಜುವಿನ ವರ್ತನೆಯನ್ನು ಖಂಡಿಸಿ ಪೊಲೀಸರಿಗೆ ದೂರು ನೀಡಲು ತೀರ್ಮಾನಿಸಿದ್ದಾರೆ, ಇದೆಲ್ಲವನ್ನೂ ಗಮನಿಸಿದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಕ್ಷರಿ ಪರಿಸ್ಥಿತಿ ವಿಕೋಪಕ್ಕೆ ಹೋಗಬಾರದು, ಶಿಕ್ಷಕರ ಸಂಘದ ಮಾನ ಹರಾಜಾಗಬಾರದು ಎಂದು ತೀರ್ಮಾನಿಸಿ ಅವಮಾನಕ್ಕೆ ಒಳಗಾದ ಶಿಕ್ಷಕಿಯರಲ್ಲಿ ಕ್ಷಮೆ ಕೇಳಿದ್ದಾರೆ, ನಿಮ್ಮ ಮನವಿ ಸ್ವೀಕರಿಸಿ ನಿಮ್ಮ ಜೊತೆ ಚರ್ಚೆ ನಡೆಸುತ್ತೇನೆ ಎಂದು ಹೇಳಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಇಷ್ಟಾದರೂ ನರಸಿಂಹರಾಜು ತಮ್ಮ ವರ್ತನೆಯನ್ನು ಬದಲಿಸಿಕೊಂಡು ಆಗಿರುವ ಲೋಪ ಸರಿಪಡಿಸಿಕೊಂಡಿಲ್ಲ, ಇದೆಲ್ಲದರ ಬೆಳವಣಿಗೆ ಮಧ್ಯೆ ಮನನೊಂದ ಶಿಕ್ಷಕಿಯರು ನರಸಿಂಹರಾಜು ವಿರುದ್ಧ ಎಸ್.ಪಿ ಕಚೇರಿಗೆ ತೆರಳಿ ರಾಹುಲ್‌ ಕುಮಾರ್‌ ಅವರಿಗೆ ದೂರು ಸಲ್ಲಿಸಿದ್ದಾರೆ, ಆ ದೂರನ್ನು ಎಸ್.ಪಿ ಅವರು ಮಹಿಳಾ ಠಾಣೆಗೆ ವರ್ಗಾಯಿಸಿದ್ದಾರೆ, ಆದರೆ ಈ ಘಟನೆ ನಡೆದು 8 ದಿನ ಕಳೆದರೂ ನರಸಿಂಹರಾಜು ವಿರುದ್ಧ ಎಫ್‌ಐಆರ್‌ ಮಾತ್ರ ದಾಖಲಾಗಿಲ್ಲ, ಇಲ್ಲಿ ರಾಜೀ ಸಂಧಾನ ನಾಟಕ ನಡೆಯುತ್ತಿದೆ, ಅಲ್ಲದೆ ತನ್ನ ಪ್ರಭಾವ ಬಳಸಿ ಎಫ್‌ಐಆರ್‌ ದಾಖಲಾಗದಂತೆ ನೋಡಿಕೊಳ್ಳಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಇದರ ಮಧ್ಯೆ ಹಲವರು ರಾಜಿ ಸಂಧಾನಕ್ಕೆ ಪ್ರಯತ್ನಿಸಿದರು ಅದು ಸಕ್ಸಸ್‌ ಆಗಿಲ್ಲ, ಇಂದು ಅಥವಾ ನಾಳೆ ರಾಜ್ಯಾಧ್ಯಕ್ಷ ಷಡಕ್ಷರಿ ಅವರೇ ಬಂದು ರಾಜಿ ಸಂಧಾನ ಮಾಡಲಿದ್ದಾರೆ ಎನ್ನಲಾಗಿದೆ.
ಅದೇನೆ ಇರಲಿ ಜಿಲ್ಲೆಯ ಸಾವಿರಾರು ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಜಿಲ್ಲಾಧ್ಯಕ್ಷ ನರಸಿಂಹರಾಜು ಒಂದು ತುಂಬಿದ ಸಭೆಯಲ್ಲಿ ಅನಾಗರೀಕರಂತೆ ವರ್ತಿಸುವುದು ತರವಲ್ಲ, ಅದರಲ್ಲೂ ಮಹಿಳಾ ಶಿಕ್ಷಕಿಯರನ್ನು ಏಕ ವಚನದಲ್ಲಿ ಮಾತನಾಡಿ ನಿಂದಿಸುವುದು ನಿಜಕ್ಕೂ ಅಕ್ಷಮ್ಯ, ಮಾತು ಆಡಿದರೆ ಹೋಯ್ತು, ಮುತ್ತು ಹೊಡೆದರೆ ಹೋಯ್ತು ಎಂಬುದನ್ನು ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ಅರ್ಥ ಮಾಡಿಕೊಂಡು ಮುಂದೆ ಎಚ್ಚರಿಕೆಯಿಂದ ನಡೆದುಕೊಂಡರೆ ಅವರಿಗೆ ಒಳಿತು ಎಂಬುದು ಶಿಕ್ಷಕ ವರ್ಗದ ಅಭಿಪ್ರಾಯ.

ನಾನು ಯಾರ ಬೆಂಬಲಕ್ಕೂ ಇಲ್ಲ..
ನಾನು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷನ ಪರವಾಗಿದ್ದೇನೆ ಎಂಬುದು ಸುಳ್ಳು, ಅವರ ಬೆಂಬಲಕ್ಕೆ ನಾನು ಇಲ್ಲ, ಅವರು ಸ್ನೇಹಿತರಿರಬಹುದು, ಅವರು ಮಹಿಳಾ ಶಿಕ್ಷಕಿಯರಿಗೆ ಬೈಯ್ದಿದ್ದರೆ ಅದು ತಪ್ಪು, ನಾನು ಶಿಕ್ಷಕಿಯೊಬ್ಬರನ್ನು ಕರೆದು ವಿಚಾರಿಸಿದ್ದು ನಿಜ, ಈ ವಿಚಾರವನ್ನು ನೀವೆ ಕುಳಿತು ಬಗೆಹರಿಸಿಕೊಳ್ಳಿ, ದೊಡ್ಡದು ಮಾಡಬೇಡಿ ಎಂದು ಹೇಳಿರುವೆ, ಇಲ್ಲಿ ಯಾರದೇ ತಪ್ಪಿದ್ದರು ಅವರ ವಿರುದ್ಧ ಕ್ರಮವಾಗಲಿ, ನಾನು ಯಾರ ಪರವಾಗಿ ನಿಂತಿಲ್ಲ, ಕಾನೂನು ರೀತಿ ಕ್ರಮ ಜರುಗಲಿ.
-ಮೋಹನ್‌ಕುಮಾರ್‌, ತುಮಕೂರು ತಹಶೀಲ್ದಾರ್

Get real time updates directly on you device, subscribe now.

Comments are closed.

error: Content is protected !!