ಮಾಜಿ ಸಿಎಂ ಹೆಚ್‌.ಡಿ.ಕುಮಾಸ್ವಾಮಿ ಮಾತಿಗೆ ಶಾಸಕ ಶ್ರೀನಿವಾಸ್‌ ಟಾಂಗ್

ರೇವಣ್ಣನವರೇ ಜೆಡಿಎಸ್‌ ಪಕ್ಷ ಬಿಡಬಹುದೇನೋ..!

476

Get real time updates directly on you device, subscribe now.

ಗುಬ್ಬಿ: ರೇವಣ್ಣನವರೇ ಪಕ್ಷ ಬಿಡಬಹುದೇನೋ ಅನಿಸುತ್ತೆ, ನಂಗೆ ಗೊತ್ತಿಲ್ಲ, ನಾವು ಎಂದು ಜೆಡಿಎಸ್‌ ತೊರೆಯುವ ಬಗ್ಗೆ ಎಲ್ಲಿಯು ಹೇಳಿಲ್ಲ, ಪಕ್ಷ ಬಿಡುವುದು ಇಲ್ಲ ಎಂದು ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಮಾಜಿ ಮುಖ್ಯಮಂತ್ರಿಯವರಿಗೆ ಟಾಂಗ್‌ ನೀಡಿದರು.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಸಾಕಸಂದ್ರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 4 ಕೋಟಿ ರೂ. ಗಳ ನಿಟ್ಟೂರು ಹೊಸಕೆರೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ತುರುವೇಕೆರೆಯಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಪಕ್ಷದಲ್ಲಿ ಇರುವವರು ಇರಲಿ, ಹೋಗುವವರು ಹೋಗಲಿ, ಬೆಮೆಲ್‌ ಕಾಂತರಾಜು ಯಾರು ಗೊತ್ತಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಪಕ್ಷ ಬಿಡುವುದಾಗಿ ಯಾರು ಹೇಳಿದ್ದಾರೆ ಎಂಬುದೇ ಅವರಿಗೆ ತಿಳಿಯುತ್ತಿಲ್ಲ, ಈ ಜೊತೆಗೆ ಬೆಮೆಲ್ ಕಾಂತರಾಜು ಯಾರು ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ ಅವರ ಬಳಿ ಸಾಕಷ್ಟು ಮಂದಿ ವಿಧಾನಪರಿಷತ್‌ ಸದಸ್ಯರಿದ್ದಾರೆ, ಹಾಗಾಗಿ ಕಾಂತರಾಜು ಬಗ್ಗೆ ಅರಿವಿಗೆ ಬಂದಿಲ್ಲ ಅನಿಸುತ್ತಿದೆ ಎಂದು ವ್ಯಂಗ್ಯವಾಗಿಯೇ ಪ್ರತ್ಯುತ್ತರ ನೀಡಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಲ್ಲಿ ಕೆಸರು ಗದ್ದೆಗಿಳಿದು ಪೈರು ನಾಟಿ ಮಾಡುವ ನಾಟಕವಾಡುತ್ತಾರೆ. ಅಲ್ಲಿ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ, ಈ ಜೊತೆಗೆ ವಿದ್ಯುತ್‌ ಕಾಯಿದೆ ತಿದ್ದುಪಡಿಗೆ ಮುಂದಾಗಿರುವ ಬಿಜೆಪಿ ಕೇಂದ್ರ ಸರ್ಕಾರ ಶವಪಟ್ಟಿಗೆಗೆ ಕೊನೆಯ ಮೊಳೆ ಹೊಡೆದುಕೊಳ್ಳಲಿದೆ. ಕಾಯಿದೆ ತಿದ್ದುಪಡಿ ಮಾಡಿ ರೈತರಿಗೆ ಮೀಟರ್‌ ಅಳವಡಿಸಿದಲ್ಲಿ ಬಿಜೆಪಿಯ ಅಂತ್ಯಕ್ಕೆ ನಾಂದಿಯಾಗಲಿದೆ, ಇಷ್ಟಾದರೂ ಅಧಿಕಾರದ ಮದ ಅವರ ನೆತ್ತಿಗೆ ಏರಿದೆ, ಅಗತ್ಯ ವಸ್ತುಗಳ ಜೊತೆಗೆ ಅಡುಗೆ ಅನಿಲ ಮತ್ತೊಮ್ಮೆ ಏರಿಕೆ ಮಾಡಿದ್ದಾರೆ, ಪೆಟ್ರೋಲ್‌, ಡಿಸೇಲ್‌ ಬೆಲೆ ಗಗನಕ್ಕೇರಿದೆ, ಇದಕ್ಕೆ ಸಾರ್ವಜನಿಕರೇ ಉತ್ತರ ನೀಡಬೇಕಿದೆ ಎಂದರು.
ಉಪ ಚುನಾವಣೆ ಸಂದರ್ಭದಲ್ಲಿ ಜಾತಿಗೊಂದು ನಿಗಮ ಮಂಡಳಿ ರಚಿಸಿ ಅದು ಅನುಷ್ಠಾನಕ್ಕೆ ತರಲೇ ಇಲ್ಲ, ಇಂದಿಗೂ ಅಧ್ಯಕ್ಷರ ನೇಮಕ ಮಾಡಿಲ್ಲ, ಅನುದಾನ ಬಿಡುಗಡೆ ಮಾಡಿಲ್ಲ. ಈ ಜೊತೆಗೆ ಮೊದಲೂರು ಕೆರೆಗೆ ನೀರು ಹರಿಸಲು ಅಂದು ಯಡಿಯೂರಪ್ಪ ಅವರೇ ನಿಯಮಬಾಹಿರ ಹೇಳಿಕೆ ನೀಡಿದ್ದರು, ಆದರೆ ಸಚಿವ ಮಾಧುಸ್ವಾಮಿ ಅವರ ಹೇಳಿಕೆ ಕಾನೂನಾತ್ಮಕವಾಗಿದೆ, ಹಾಗಲವಾಡಿ ಮತ್ತು ಬಿಕ್ಕೆಗುಡ್ಡ ಯೋಜನೆಗಳು ಪೂರ್ಣಗೊಳ್ಳದ ಹಿನ್ನಲೆ ಅಲ್ಲಿಗೆ ಹರಿಸಬೇಕಿದ್ದ ನಿಯಮಾನುಸಾರದ ನೀರು ಮೊದಲೂರಿಗೆ ನೀಡಲಾಗಿದೆ, ಹೇಮಾವತಿ ಯೋಜನೆಗಳು ಪೂರ್ಣಗೊಂಡಲ್ಲಿ ಮೊದಲೂರಿಗೆ ನೀರು ನೀಡಲಾಗದು ನಮ್ಮ ರೈತರು ನಮಗೆ ಮುಖ್ಯ ನಮ್ಮ ಪಾಲಿನ ನೀರು ನಮಗೆ ಬೀಡಬೇಕು, ಇಲ್ಲದೆ ಹೋದರೆ ನಾವು ಹೋರಾಟ ಮಾಡಲು ಬದ್ಧವಾಗಿದ್ದೇವೆ ಎಂದ ಅವರು ವಿದ್ಯುತ್‌ ತಂತಿ ಮತ್ತು ಕಂಬ ಇರುವ ತಾಲ್ಲೂಕಿನ 82 ಶಾಲೆಗಳ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜತೆ ಚರ್ಚಿಸಿ ಕ್ರಮಕ್ಕೆ ಸೂಚಿಸುತ್ತೇನೆ, ಹೈ ಟೆಂಕ್ಷನ್‌ ವೈರ್‌ ಕೆಳಗಿನ ಶಾಲೆಯ ಬಗ್ಗೆ ಈ ಹಿಂದೆ ಸದನದಲ್ಲಿ ಚರ್ಚಿಸಿದ್ದೆ, ಅಂದು ಸೂಕ್ತ ಉತ್ತರ ಸಿಗದ ಕಾರಣ ಮತ್ತೊಮ್ಮೆ ಆ ಖಾಸಗಿ ಶಾಲೆಯ ಕಡತ ಪರಿಶೀಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಶಂಕರಪ್ಪ, ಸದಸ್ಯರಾದ ಎಂ.ಡಿ.ದೊಡ್ಡಕೆಂಪಯ್ಯ, ಓಂಕಾರಮೂರ್ತಿ, ಮುಖಂಡರಾದ ರವಿಕುಮಾರ್‌, ಸಿದ್ದರಾಮೇಶ್‌, ಮಂಜಣ್ಣ, ಪರಮೇಶ್‌, ಲೋಕೋಪಯೋಗಿ ಇಲಾಖೆ ಎಇಇ ವಿಜಯ್ ಕುಮಾರ್‌, ಪಿಡಿಓ ಮಂಜುನಾಥ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!