ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಸಿಗಬೇಕು: ಡಾ.ಲತಾ ಮಳ್ಳೂರ

506

Get real time updates directly on you device, subscribe now.

ತುಮಕೂರು: ದೆಹಲಿಯಲ್ಲಿ ಸರಕಾರಿ ಶಾಲೆಗಳಿಗೆ ದೊರೆತಿರುವ ಮೂಲಭೂತ ಸೌಕರ್ಯಗಳು ರಾಜ್ಯದ ಸರಕಾರಿ ಶಾಲೆಗಳಿಗೆ ಲಭ್ಯವಾಗುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷ ಡಾ.ಎಸ್‌.ಲತಾ ಮಳ್ಳೂರ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘದ ವತಿಯಿಂದ ಆಯೋಜಿಸಿದ್ದ ತುಮಕೂರು ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿ, ದೆಹಲಿಯಲ್ಲಿ ಶಿಕ್ಷಣದ ಕ್ರಾಂತಿ ನಡೆಯುತ್ತಿದೆ, ಆಧುನಿಕ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್‌, ಎಲ್ಲರೂ ಕುಳಿತು ಕೊಳ್ಳಲು ಆಸನ, ಸುಸಜ್ಜಿತ ಕಟ್ಟಡ ಇದ್ದು, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಿವೆ, ನಮ್ಮ ರಾಜ್ಯದಲ್ಲಿ ಇದು ಸಾಧ್ಯವಾಗಬೇಕು ಎಂಬುದು ನಮ್ಮ ಆಶಯ, ಈ ನಿಟ್ಟಿನಲ್ಲಿ ಪ್ರತಿ ಸಮಾರಂಭಗಳಲ್ಲಿಯೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವ ಕೆಲಸ ಮಾಡುತಿದ್ದೇವೆ ಎಂದರು.
ಕಳೆದ ಎರಡು ವರ್ಷಗಳಿಂದ ಶಿಕ್ಷಕಿಯರನ್ನು ಒಗ್ಗೂಡಿಸಿ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ ಅವರ ಹೆಸರಿನಲ್ಲಿ ಸಂಘಟನೆ ಕಟ್ಟಿದ ನಂತರ ಶಿಕ್ಷಕರ ಸಂಘದಲ್ಲಿ ಶೇ.33 ರಷ್ಟು ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ್ದರೂ ಬಹುತೇಕ ಹುದ್ದೆಗಳು ನಾಮಾಕಾವಸ್ಥೆಯಾಗಿವೆ, ಉಪಾಧ್ಯಕ್ಷೆ, ಸಂಘಟನಾ ಕಾರ್ಯದರ್ಶಿ ಇಂತಹ ಹುದ್ದೆಗಳಿಂದ ಪ್ರಯೋಜನವಿಲ್ಲ, ತಾಲೂಕು ಅಧ್ಯಕ್ಷರಂತಹ ಹುದ್ದೆಗಳು ದೊರೆಯಬೇಕು ಎಂಬುದು ನಮ್ಮ ಆಶಯ, ಈ ನಿಟ್ಟಿನಲ್ಲಿ ಹೋರಾಟ ಆರಂಭವಾಗಿದೆ, ಇದು ಶಿಕ್ಷಕ ವಿರೋಧಿ, ಪುರುಷ ವಿರೋಧಿ ಸಂಘವಲ್ಲ, ನಮ್ಮ ಮೇಲೆ ನಡೆಯುವ ಮಾನಸಿಕ, ಲೈಂಗಿಕ ಕಿರುಕುಳದ ವಿರುದ್ಧ ಧ್ವನಿ ಎತ್ತಲು ಕಟ್ಟಿಕೊಂಡ ಸಂಘ, ರಾಜ್ಯ ನೌಕರರ ಸಂಘದಲ್ಲಿಯೂ ಶೇ.33 ರಷ್ಟು ಮೀಸಲಾತಿ ಲಭಿಸಬೇಕೆಂಬುದು ನಮ್ಮ ಹೋರಾಟದ ಮುಖ್ಯ ಉದ್ದೇಶ ಎಂದು ಡಾ.ಲತಾ ಮಳ್ಳೂರ ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಬಾ.ಹ.ರಮಾಕುಮಾರಿ ಮಾತನಾಡಿ, ಸಾವಿತ್ರಿ ಬಾಯಿ ಪುಲೆ ಹೆಸರಿನಲ್ಲಿ ಶಿಕ್ಷಕಿಯರು ಸಂಘಟನೆ ಯಾಗಿರುವುದು ಅರ್ಥಪೂರ್ಣವಾಗಿದೆ, ಸಂಘಟನೆಯ ಹಿಂದಿನ ಉದ್ದೇಶ ಸೇವೆಯೇ ಆಗಿರಬೇಕು, 73/74 ನೇ ತಿದ್ದುಪಡಿಯ ಫಲವಾಗಿ ಶೇ.33 ರಷ್ಟು ಮೀಸಲಾತಿ ಸ್ಥಳೀಯ ಸಂಸ್ಥೆಗಳಲ್ಲಿ ಸಿಕ್ಕಿದೆ. ಇದು ವಿಧಾನಸಭೆ ಮತ್ತು ಲೋಕಸಭೆ ಯಲ್ಲಿಯೂ ಸಿಗುವಂತಾಗಬೇಕು. ಕುಟುಂಬದ ಹೊರಗೆ ಮತ್ತು ಒಳಗೆ ಸವಾಲುಗಳನ್ನು ಎದುರಿಸಲು ಜೋತಿ ಬಾಯಿಪುಲೆ ಅಂತಹವರ ಸಂಖ್ಯೆ ಹೆಚ್ಚಬೇಕೆಂದರು.
ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು ಮಾತನಾಡಿ, ಈಗಾಗಲೇ ರಾಜ್ಯ ಸರಕಾರಕ್ಕೆ ಮಹಿಳೆಯರಿಗೆ ಶೇ.33 ರಷ್ಟು ಮಿಸಲಾತಿ ನೀಡಬೇಕೆಂಬ ಕೋರಿಕೆಗಳು ಬರುತ್ತಿವೆ, ಜಿಲ್ಲಾ ಸಂಘಕ್ಕೂ ಬಂದ ಮನವಿಯನ್ನು ರಾಜ್ಯ ಸರಕಾರಕ್ಕೆ ಕಳುಹಿಸಲಾಗಿದೆ, ಆಗಸ್ಟ್ 23 ರಂದು ನಡೆಯುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿಯೂ ಈ ವಿಚಾರ ಪ್ರಸ್ತಾಪಿಸಲಾಗುವುದು, ಮಾತೃ ಸಂಘವಾದ ಸರಕಾರಿ ನೌಕರರ ಜೊತೆ ಜೊತೆಗೆಯಾಗಿ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ರೂಪಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಅನುಸೂಯದೇವಿ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಜಗದೀಶ್‌, ನಿರ್ದೇಶಕರಾದ ಪದ್ಮರಾಜು ಸೇರಿದಂತೆ ಸಾವಿತ್ರಿ ಬಾಯಿ ಪುಲೆ ಶಿಕ್ಷಕರಿಯರ ಸಂಘದ ವಿವಿಧ ತಾಲೂಕುಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!