ವಿದ್ಯಾರ್ಥಿಗಳು ಊಟ, ತಿಂಡಿ, ವಿಶ್ರಾಂತಿಗೆ ಪರದಾಡುವುದನ್ನು ತಪ್ಪಿಸಿ

ಕಾಲೇಜಿಗೆ ಹತ್ತಿರದಲ್ಲಿ ಹಾಸ್ಟೆಲ್‌ ನಿರ್ಮಿಸಲು ಒತ್ತಾಯ

427

Get real time updates directly on you device, subscribe now.

ತುಮಕೂರು: ಪಾವಗಡ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿಸುತ್ತಿರುವ ವಸತಿ ನಿಲಯಗಳು ಕಾಲೇಜಿನಿಂದ ಐದಾರು ಕಿ.ಮೀ ದೂರದಲ್ಲಿದ್ದು, ವಿದ್ಯಾರ್ಥಿಗಳು ಊಟ, ತಿಂಡಿ, ವಿಶ್ರಾಂತಿಗೆಂದು ಓಡಾಡಲು ಅನಾನುಕೂಲವಾಗುವ ಹಿನ್ನೆಲೆಯಲ್ಲಿ ನಿರ್ಮಾಣ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಕಾಲೇಜಿಗೆ ಹತ್ತಿರದಲ್ಲಿ ಹಾಸ್ಟೆಲ್‌ ನಿರ್ಮಾಣ ಮಾಡಬೇಕೆಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಮಯಪ್ಪ ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಸಿದ ಮುಖಂಡರು, ಪಾವಗಡ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 24 ಕೋಟಿ ರೂ. ವೆಚ್ಚದಲ್ಲಿ 5 ವಸತಿ ನಿಲಯಗಳನ್ನು ಕ್ರೈಸ್ಟ್ ಸಂಸ್ಥೆಯಿಂದ ನಿರ್ಮಿಸಲು ಮುಂದಾಗಿದ್ದಾರೆ. ಪಿಯುಸಿ, ಪದವಿ ಕಾಲೇಜುಗಳು ಚಳ್ಳಕೆರೆ, ಕಲ್ಯಾಣ ದುರ್ಗ ರಸ್ತೆಯಲ್ಲಿದ್ದರೆ, ಹಾಸ್ಟೆಲ್‌ಗಳನ್ನು ತುಮಕೂರು ರಸ್ತೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ, ಹಾಸ್ಟೆಲ್‌ಗೂ, ಕಾಲೇಜಿಗೂ ಕನಿಷ್ಠವೆಂದರೂ ಐದು ಕಿ.ಲೋ ಮೀಟರ್‌ ದೂರವಿದೆ, ಬೆಳಗ್ಗೆ ತಿಂಡಿ ತಿಂದು ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಮಧ್ಯಾಹ್ನದ ವೇಳೆ ಊಟಕ್ಕೆ ಮತ್ತೆ ಐದು ಕಿ.ಮೀ ನಡೆದು ಹೋಗಬೇಕು, ಅಲ್ಲಿಂದ ಪುನಃ ಕಾಲೇಜಿಗೆ ಬರಬೇಕು, ಹಾಗಾಗಿ ದಿನಕ್ಕೆ ಕನಿಷ್ಠವೆಂದರೂ 25 ಕಿ.ಮೀ ನಡೆದಾಡಬೇಕಾಗುತ್ತದೆ, ಅತಿ ಉಷ್ಣಾಂಶದಿಂದ ಕೂಡಿದ ಪಾವಗಡದಂತಹ ನೆಲದಲ್ಲಿ ಇದು ಸಾಧ್ಯವೇ ಎಂದು ತಿಮ್ಮರಾಯಪ್ಪ ಪ್ರಶ್ನಿಸಿದರು.
ಈ ಹಿಂದೆ ಸದರಿ ಜಾಗದಲ್ಲಿ ಹಾಸ್ಟೆಲ್‌ ನಿರ್ಮಾಣಕ್ಕೆ ಮುಂದಾದ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಕೆಲ ಕಾಲ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿದ್ದರು, ಆದರೆ ಏಕಾಏಕಿ ಕಳೆದ ಒಂದು ವಾರದಿಂದ ಪೌಂಡೇಷನ್ ಗೆ ಮಣ್ಣು ತೆಗೆಯುವ ಕೆಲಸ ನಡೆಯುತ್ತಿದೆ, ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕೆಂಬುದು ನಮ್ಮ ಆಗ್ರಹವಾಗಿದೆ. ಕಾಲೇಜಿಗೆ ಹತ್ತಿರದಲ್ಲಿಯೇ ಸರ್ವೆ ನಂಬರ್‌ 178ರಲ್ಲಿ 13 ಎಕರೆ ಸರಕಾರಿ ಜಾಗವಿದ್ದು, ಒಂದೇ ಜಾಗದಲ್ಲಿ ಇಷ್ಟು ಹಾಸ್ಟೆಲ್‌ಗಳನ್ನು ನಿರ್ಮಿಸಬಹುದಾಗಿದೆ. ಅಲ್ಲದೆ ಕಾಲೇಜಿನ ಬಳಿಯೇ ಸುಮಾರು 30 ಗುಂಟೆ ಸರಕಾರಿ ಜಾಗವಿದೆ, ಅಲ್ಲಿಯೂ ಒಂದು ಹಾಸ್ಟೆಲ್‌ ಕಟ್ಟಡ ನಿರ್ಮಿಸಬಹುದು, ಹೀಗಿದ್ದರೂ ತಾಲೂಕು ಆಡಳಿತ ಐದು ಕಿ.ಮೀ ದೂರದಲ್ಲಿ ಹಾಸ್ಟೆಲ್‌ ನಿರ್ಮಿಸಲು ಹೊರಟಿರುವುದು ಸರಿಯಲ್ಲ, ಜಿಲ್ಲಾಡಳಿತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜು ಹತ್ತಿರದಲ್ಲಿಯೇ ಹಾಸ್ಟೆಲ್‌ ನಿರ್ಮಾಣಕ್ಕೆ ಮುಂದಾಗಬೇಕು, ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ತಿಳಿಸಿದರು.
ಪಾವಗಡ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್‌ ಮಾತನಾಡಿ, ಪಟ್ಟಣದಲ್ಲಿ ಹಲವು ಕಟ್ಟಡಗಳು ಶಿಥಿಲಗೊಂಡಿದ್ದು, ಕಚೇರಿಗಳು ಬೇರೆಡೆಗೆ ಸ್ಥಳಾಂತರಗೊಂಡಿರುವ ಜಾಗಗಳು ಖಾಲಿ ಇವೆ, ಅಲ್ಲದೆ ಪಟ್ಟಣ ಪಂಚಾಯಿತಿ ಸುತ್ತಮುತ್ತ ಮೂರು ಎಕರೆಗೂ ಹೆಚ್ಚು ಜಾಗ ಖಾಲಿ ಇವೆ, ಅಲ್ಲಿ ಹಾಸ್ಟೆಲ್‌ ನಿರ್ಮಾಣ ಮಾಡಿದರೆ ಹೆಣ್ಣುಮಕ್ಕಳಿಗೆ ರಕ್ಷಣೆ ಇರುತ್ತದೆ, ಅದನ್ನು ಬಿಟ್ಟು ಐದು ಕಿ.ಮೀ ದೂರದಲ್ಲಿ ಬೆಟ್ಟ ಪ್ರದೇಶದಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಬಡವರ ಮಕ್ಕಳ ಜೀವಕ್ಕೆ ಯಾರು ಹೊಣೆ ಎಂಬುದು ಪ್ರಶ್ನೆಯಾಗಿದೆ, ಹಾಗಾಗಿ ಕಾಲೇಜಿಗೆ ಹತ್ತಿರದಲ್ಲಿಯೆ ಹಾಸ್ಟೆಲ್‌ ನಿರ್ಮಾಣ ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಮಾತನಾಡಿ, ನಾಳೆ ಸದರಿ ಜಾಗದ ಕುರಿತು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಸ್ಥಳ ಪರಿಶೀಲನೆ ನಡೆಸಿ ಮನವಿ ಸಲ್ಲಿಸಲಿದ್ದಾರೆ. ಅವರ ವರದಿಯ ನಂತರ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ, ಅವರಿಗೆ ಸಮಸ್ಯೆ ಮನವರಿಕೆ ಮಾಡಿಕೊಟ್ಟು, ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಈ ವೇಳೆ ಮುಖಂಡರಾದ ಹೆಚ್‌.ವಿ.ರಮೇಶ್‌, ಪದ್ದಣ್ಣ, ಸಿ.ಕೆ.ತಿಪ್ಪೇಸ್ವಾಮಿ, ನರಸಿಂಹಪ್ಪ, ಟಿ.ಎನ್‌.ಪೇಟೆ ರಮೇಶ್‌, ಗೋಪಾಲ್‌, ನಟರಾಜು ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!