ಕೋವಿಡ್‌ ಜೀವಂತವಾಗಿರುವಾಗಲೇ ಕೇರ್‌ ಸೆಂಟರ್‌ ಸ್ಥಗಿತ

ಕೊರೊನಾ ಸೋಂಕಿತರಿಗೆ ಹೋಂ ಐಸೋಲೇಶನ್‌ಗೆ ಅವಕಾಶ ಎಷ್ಟು ಸರಿ?

347

Get real time updates directly on you device, subscribe now.

ಚೇತನ್
ಚಿಕ್ಕನಾಯಕನಹಳ್ಳಿ:
ಕಣ್ಣಿಗೆ ಕಾಣದ ಕೊರೊನಾ ವೈರಸ್‌ ಎರಡು ವರ್ಷಗಳಿಂದ ಜನರ ಜೀವ ಹಾಗೂ ಜೀವನದ ಮೇಲೆ ತೀವ್ರ ಕೆಟ್ಟ ಪರಿಣಾಮ ಉಂಟುಮಾಡಿದ್ದು, ಹಲವರಿಗೆ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ, ಆದರೆ ಜಿಲ್ಲೆ ಹಾಗೂ ತಾಲೂಕಿನಲ್ಲಿ ಪಾಸಿಟಿವ್‌ ಕೇಸ್‌ ಇರುವಾಗಲೇ ಕೋವಿಡ್‌ ಕೇರ್‌ ಸೆಂಟರ್‌ ಸ್ಥಗಿತಗೊಳಿಸಿ ಕೋವಿಡ್‌ ರೋಗಿಗಳಿಗೆ ಹೋಂ ಐಸೋಲೇಶನ್‌ಗೆ ಅವಕಾಶ ನೀಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.
ತಾಲೂಕಿನ ಮೇಲನಹಳ್ಳಿ ವಸತಿ ಶಾಲೆಯಲ್ಲಿ ಕಳೆದ ಕೆಲ ತಿಂಗಳಿಂದ ಕೋವಿಡ್‌ ಪಾಸಿಟಿವ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ರೋಗಿಗಳನ್ನು ಸಮುದಾಯದಿಂದ ಕೋವಿಡ್‌ ಗುಣಮುಖವಾಗುವವರೆಗೆ ದೂರವಿಡಲಾಗಿತ್ತು, ಇದರಿಂದ ಕೋವಿಡ್‌ ಹರಡುವ ಪ್ರಮಾಣ ಸಹ ಕಡಿಮೆಯಾಗಲು ಸಹಕಾರವಾಗಿತ್ತು, ಆದರೆ ತಾಲೂಕಿನಲ್ಲಿ ಸುಮಾರು 51 ಜನ ಕೋವಿಡ್‌ ಸೋಂಕಿತರಿದ್ದು ಇವರಿಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಲು ಆವಕಾಶ ನೀಡಿರುವುದರಿಂದ ಕೋವಿಡ್‌ ಹರಡುವ ಸಾಧ್ಯತೆ ಹೆಚ್ಚಾಗಬಹುದು. ಹೋಂ ಐಸೋಲೇಶನ್‌ನಲ್ಲಿರುವವರು ಗುಣಮುಖವಾಗುವ ವರೆಗೆ ಮನೆಯಲ್ಲಿ ಇರುವ ಸಾಧ್ಯತೆ ಅತ್ಯಂತ ಕಡಿಮೆಯಾಗಿರುತ್ತದೆ. ಇಲ್ಲಿಯ ವರೆಗೆ ಕೋವಿಡ್‌ ಸೋಂಕನ್ನು ತಡೆಗಟ್ಟಲು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮ ಹಾಕಿದ್ದು, ಕೋವಿಡ್‌ ಸಂಪೂರ್ಣವಾಗಿ ಕಡಿಮೆಯಾಗದೆ ಕೋವಿಡ್‌ ರೋಗಿಗಳಿಗೆ ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅನುಮತಿ ನೀಡಿರುವುದು ಇಷ್ಟು ದಿನ ಪಟ್ಟ ಶ್ರಮ ನೀರಲ್ಲಿ ಹೋಮವಾದಂತೆ ಆಗಬಹುದು.

ಶಾಲೆಗಳು ಆರಂಭಗೊಂಡಿವೆ: ಸೋಮವಾರದಿಂದ ತಾಲೂಕಿನಲ್ಲಿ 9 ಮತ್ತು 10ನೇ ತರಗತಿಯ ಶಾಲೆ ಆರಂಭಗೊಂಡಿದ್ದು ಸುಮಾರು 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾಲೂಕಿನಾದ್ಯಂತ ಶಾಲೆಗಳಿಗೆ ಬಂದು ಹೋಗುತ್ತಿದ್ದಾರೆ, ಆದರೆ ತಾಲೂಕಿನಲ್ಲಿ ಸುಮಾರು 51 ಕೋವಿಡ್‌ ಪಾಸಿಟಿವ್‌ ಕೇಸ್‌ಗಳಿದ್ದು, ರೋಗಿಗಳು ಸಮುದಾಯದ ಜೊತೆ ಇರುವಂತೆ ಮಾಡಲಾಗಿದೆ, ಇದರಿಂದ ಕೋವಿಡ್‌ ಹರಡುವ ಆತಂಕ ಉಂಟಾಗಿರುವ ಬಗ್ಗೆ ಸಾರ್ವಜನಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಎರಡನೇ ಅಲೆಯಲ್ಲಿ ಯಡವಟ್ಟು: ಕೋವಿಡ್‌ ಎರಡನೇ ಸಮಯದಲ್ಲಿ ಕೋವಿಡ್‌ ರೋಗಿಗಳಿಗೆ ಹೋಂ ಐಸೋಲೇಶನ್‌ಗೆ ಅವಕಾಶ ನೀಡಿ ಮನೆಯ ಸದಸ್ಯರಿಗೆ ಕೋವಿಡ್‌ ಹರಡುವಂತಾಗಿತ್ತು ಹಾಗೂ ಸಮುದಾಯದಲ್ಲಿ ಕೋವಿಡ್‌ ಹೆಚ್ಚಾಗಲು ಕಾರಣವಾಗಿ ಆಮ್ಲಜನಕ ಸೇರಿದಂತೆ ಆಸ್ಪತ್ರೆಗಳಲ್ಲಿ ಬೆಡ್‌ ಹಾಗೂ ತುರ್ತು ವಾಹನಗಳ ಸಮಸ್ಯೆ ಇನ್ನೂ ಕಣ್ಣಮುಂದೆ ಮಾಸಿಲ್ಲವಾಗಿದೆ, ಆದರೆ ಪುನಹ ಕೋವಿಡ್‌ ರೋಗಿಗಳಿಗೆ ಹೋಂ ಐಸೋಲೇಶನ್‌ ನೀಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗಿದೆ.
ತಾಲೂಕಿನಲ್ಲಿ ಹೆಚ್ಚಾಗಿ ಜಂಟಿ ಮನೆಗಳಿದ್ದು, ಯಾರಿಗೆ ಕೋವಿಡ್‌ ಬಂದಿದೆ ಬಂದಿಲ್ಲ ಎಂಬ ಮಾಹಿತಿ ಸಿಗುವುದಿಲ್ಲ, ಕೋವಿಡ್‌ ರೋಗಿಗಳಿಗೆ ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ನೀಡಿರುವುದರಿಂದ ಕೋವಿಡ್‌ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ತಾಲೂಕಿನಲ್ಲಿ ಸಂಪೂರ್ಣವಾಗಿ ಕೋವಿಡ್‌ ಗುಣಮುಖವಾಗುವವರೆಗೆ ಕೋವಿಡ್‌ ಸೆಂಟರ್‌ಗಳಲ್ಲಿ ಪಾಸಿಟಿವ್‌ ರೋಗಿಗಳಿಗೆ ಚಿಕಿತ್ಸೆ ನೀಡಬೇಕು, ಜಿಲ್ಲಾಧಿಕಾರಿಗಳು ಇದರ ಬಗ್ಗೆ ಮತ್ತೆ ಪರಿಶೀಲನೆ ನಡೆಸಿ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಅಗತ್ಯ ಕ್ರಮಕೈಗೊಳ್ಳಬೇಕು ಎಂದುಬುದು ಜನರ ಒತ್ತಾಯ.

Get real time updates directly on you device, subscribe now.

Comments are closed.

error: Content is protected !!