ತುಮಕೂರು ಜಿಲ್ಲೆಯಲ್ಲಿ ಜಿಮ್ನಾಸ್ಟಿಕ್‌ ಬೆಳೆಯಲಿ

ಜಿಮ್ನಾಸ್ಟಿಕ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದಿದೆ: ಶ್ರೀನಿವಾಸ್

212

Get real time updates directly on you device, subscribe now.

ತುಮಕೂರು: ಕ್ರೀಡೆ ಆರೋಗ್ಯ ಕಾಪಾಡುವ ಜೊತೆಗೆ ಶಿಸ್ತು ಕಲಿಸುತ್ತೆ, ಮಕ್ಕಳಲ್ಲಿ ಸ್ಫೂರ್ತಿ ತುಂಬುತ್ತೆ, ಶಾಲಾ ಹಂತದಲ್ಲೇ ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಬೇಕು ಎಂದು ತುಮಕೂರು ಜಿಲ್ಲಾ ಜಿಮ್ನಾಸ್ಟಿಕ್‌ ಅಸೋಷಿಯೇನ್‌ನ ಮಹಾ ಪೋಷಕ ಜಿ.ವಿ.ಶ್ರೀನಿವಾಸ್‌ ರಾವ್‌ ತಿಳಿಸಿದರು.
ನಗರದ ಸಿದ್ದಗಂಗಾ ಬಡಾವಣೆಯಲ್ಲಿರುವ ಮಾರುತಿ ಇಂಟರ್‌ ನ್ಯಾಷನಲ್‌ ಸ್ಕೂಲ್ ನಲ್ಲಿ ತುಮಕೂರು ಜಿಲ್ಲಾ ಜಿಮ್ನಾಸ್ಟಿಕ್‌ ಅಸೋಷಿಯೇನ್‌ ಉದ್ಘಾಟನೆ ನೆರವೇರಿಸಿ ಮಾತನಾಡಿ, ಇಂದು ಜಿಮ್ನಾಸ್ಟಿಕ್‌ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ, ಈ ಕ್ರೀಡೆ ಇದೀ ದೇಹವನ್ನು ಫ್ಲೆಕ್ಸಿಬಲ್‌ ಮಾಡುತ್ತೆ, ಇದರಿಂದ ಆರೋಗ್ಯ ವೃದ್ಧಿಯಾಗುತ್ತೆ ಎಂದು ತಿಳಿಸಿದರು.
ಖೇಲೋ ಇಂಡಿಯಾದಲ್ಲಿ ತುಮಕೂರಿಗೆ ಜಿಮ್ನಾಸ್ಟಿಕ್‌ ಅವಕಾಶ ಸಿಕ್ಕಿರುವುದು ಸಂತಸದ ವಿಚಾರ, ನಮ್ಮ ತುಮಕೂರಿನಲ್ಲಿ ಜಿಮ್ನಾಸ್ಟಿಕ್‌ ತರಬೇತಿ ಪಡೆಯುವ ಕ್ರೀಡಾಳುಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು, ಈ ನಿಟ್ಟಿನಲ್ಲಿ ನಾವೆಲ್ಲಾ ಶ್ರಮಿಸೋಣ ಎಂದರು.
ಯಾವುದೇ ಕ್ರೀಡೆ ಸಮಾನತೆ ಸಾರುತ್ತೆ, ಇಲ್ಲಿ ಶ್ರೀಮಂತ, ಬಡವ ಎಂಬ ಭೇದ ಭಾವವಿಲ್ಲ, ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಿ ಜಿಮ್ನಾಸ್ಟಿಕ್‌ ತರಬೇತಿ ನೀಡುವ ಮೂಲಕ ಸಾಧನೆಗೆ ಪ್ರೇರೇಪಿಸಬೇಕಿದೆ, ಸರ್ಕಾರದ ಸೌಲಭ್ಯ ಬಳಸಿಕೊಂಡು ಉತ್ತಮ ತರಬೇತಿ ನಿಡಬೇಕಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲಾ ಜಿಮ್ನಾಸ್ಟಿಕ್‌ ಅಸೋಷಿಯೇನ್‌ ಅಧ್ಯಕ್ಷ ರಾಮ್‌ ಪ್ರಸಾದ್‌ ಮಾತನಾಡಿ, ಒಂದು ಕಾಲದಲ್ಲಿ ಜಿಮ್ನಾಸ್ಟಿಕ್‌ ಎಂದರೆ ದೊಂಬರಾಟ ಎನ್ನುತ್ತಿದ್ದರು, ಪಲ್ಟಿ ಹೊಡೆಯುವುದು, ಹಗ್ಗದಲ್ಲಿ ನೇತಾಡುವ ಆಟ ಎಂದು ಆಡಿಕೊಳ್ಳುತ್ತಿದ್ದರು, ಆದರೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಮ್ನಾಸ್ಟಿಕ್‌ ತನ್ನದೇ ಸ್ಥಾನ ಆವರಿಸಿಕೊಂಡಿದೆ, ಇಂದು ಈ ಕ್ರೀಡೆಯಲ್ಲಿ ಸಾಧನೆ ಮಾಡಲು ಉತ್ತಮ ಅವಕಾಶಗಳಿವೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ಜಿಮ್ನಾಸ್ಟಿಕ್‌ ಬೆಳೆಯಬೇಕು, ಉತ್ತಮ ತರಬೇತಿ ನೀಡಿ ಯುವಕ, ಯುವತಿಯರನ್ನು ಆಕರ್ಷಿಸಬೇಕು, ಜೊತೆಗೆ ಸರ್ಕಾರದಿಂದ ಸಿಗುವ ಸೌಲತ್ತು ಬಳಸಿಕೊಂಡು ಈ ಕ್ರೀಡೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು, ತುಮಕೂರು ನಗರದಲ್ಲಿ ಎರಡುವರೆ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಜಿಮ್ನಾಸ್ಟಿಕ್‌ ಸ್ಟೇಡಿಯಂ ಸಿದ್ಧವಾಗಲಿದೆ, ಇದಕ್ಕಾಗಿ ನಗರದ ಶಾಸಕರು ಜಾಗ ಸಹ ಗುರ್ತಿಸಿದ್ದಾರೆ ಎಂದು ತಿಳಿಸಿದರು.
ತುಮಕೂರು ಜಿಲ್ಲಾ ಜಿಮ್ನಾಸ್ಟಿಕ್‌ ಅಸೋಷಿಯೇನ್‌ ಪೋಷಕ ಸುಜ್ಞಾನ್‌ ಹಿರೇಮಠ್‌ ಮಾತನಾಡಿ, ಇಂದು ಕ್ರೀಡೆಗೆ ತುಂಬಾ ಉತ್ತೇಜ ಸಿಗುತ್ತಿದೆ, ಯುವಕರು ಯಾವುದೇ ಅಳುಕು ಇಟ್ಟುಕೊಳ್ಳದೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು, ಕ್ರೀಡೆಗಳಲ್ಲಿ ಭಾಗವಹಿಸುವುದೇ ದೊಡ್ಡ ಪ್ರಶಸ್ತಿ ಪಡೆದಂತೆ ಎಂದು ಕ್ರೀಡಾಳುಗಳನ್ನು ಹುರಿದುಂಬಿಸಿದರು.
ಇದೇ ವೇಳೆ ಜಿಮ್ನಾಸ್ಟಿಕ್‌ ಕ್ರೀಡೆಯಲ್ಲಿ ಅತ್ಯುತ್ತನ ಸಾಧನೆ ಮಾಡಿದ ಸುಧೀರ್‌ ದೇವದಾಸ್‌ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ತುಮಕೂರು ಜಿಲ್ಲಾ ಜಿಮ್ನಾಸ್ಟಿಕ್‌ ಅಸೋಷಿಯೇನ್‌ನ ಉಪಾಧ್ಯಕ್ಷ ಓಂಶಿವಪ್ರಸಾದ್‌, ಕಾರ್ಯದರ್ಶಿ ಟಿ.ಎಲ್‌.ಲೋಕೇಶ್‌, ಜಂಟಿ ಕಾರ್ಯದರ್ಶಿ ಕೆ.ರಾಜೇಶ್‌, ಖಜಾಂಚಿ ಸುಧೀಂದ್ರ ಮತ್ತು ಗಿರೀಶ್‌, ಲೋಕೇಶ್‌ ಸೇರಿದಂತೆ ಜಿಮ್ನಾಸ್ಟಿಕ್‌ ಆಟಗಾರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!