ಪಾರ್ಕ್ ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಅಕ್ರಮ ತಡೆಯಿರಿ

205

Get real time updates directly on you device, subscribe now.


ತುಮಕೂರು: ಹದಿನೈದನೇ ವಾರ್ಡ್ ನ ಎನ್ ಇ ಪಿ ಎಸ್‌ ಪೊಲೀಸ್‌ ಠಾಣೆ ಹಿಂಭಾಗದ ಪಾರ್ಕ್‌, ಸರಕಾರಿ ಜೂನಿಯರ್‌ ಕಾಲೇಜಿನ ಆಲದಮರದ ಪಾರ್ಕ್‌ ಸೇರಿದಂತೆ ನಗರದಲ್ಲಿರುವ ಪಾರ್ಕ್ ಗಳು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರ ಅಳವಡಿಸುವಂತೆ ವಾರ್ಡ್‌ನ ಸದಸ್ಯೆ ಗಿರಿಜಾ ಧನಿಯ ಕುಮಾರ್‌ ಪಾಲಿಕೆಯ ಆಯುಕ್ತರನ್ನು ಒತ್ತಾಯಿಸಿದ್ದಾರೆ.
ನಗರಪಾಲಿಕೆ ಆವರಣದಲ್ಲಿರುವ ಸಂಮೃದ್ಧಿ ಹಾಲ್ ನಲ್ಲಿ 15ನೇ ವಾರ್ಡ್‌ನ ಕುಂದುಕೊರತೆಗಳ ಕುರಿತು ಚರ್ಚಿಸಲು ಆಯುಕ್ತರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಂಬಂಧಪಟ್ಟ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ನಗರದ ಹೃದಯ ಭಾಗದಲ್ಲಿರುವ ಪಾರ್ಕ್‌ಗಳಲ್ಲಿ ರಾತ್ರಿ ವೇಳೆ, ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಅನೈತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಸಾರ್ವಜನಿಕರು ಪ್ರಶ್ನಿಸಿದರೆ ಧಮಕಿ ಹಾಕುವ ಪ್ರವೃತ್ತಿ ಬೆಳೆಸಿ ಕೊಂಡಿದ್ದಾರೆ. ಇದರ ಜೊತೆಗೆ ಪಾರ್ಕ್ ಗಳ ನಿರ್ವಹಣೆ ಸಹ ಸರಿಯಾಗಿ ಆಗುತ್ತಿಲ್ಲ, ಜೂನಿಯರ್‌ ಕಾಲೇಜಿನ ಆಲದಮರದ ಪಾರ್ಕನ್ನು ಯಾರು ನಿರ್ವಹಣೆ ಮಾಡಬೇಕು ಎಂಬ ಗೊಂದಲ ಕಾಡುತ್ತಿದೆ. ಮರದ ಎಲೆಗಳು ದಿನನಿತ್ಯ ಬೀಳುವುದರಿಂದ ಒಂದು ದಿನ ಕಸ ತೆಗೆಯದಿದ್ದರೂ ಗಲೀಜಾಗಿ ಕಾಣಲಿದೆ. ಹಾಗಾಗಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದರು.
ಮೆಗಾ ಗ್ಯಾಸ್‌ ಸಂಸ್ಥೆಯವರು ಗಾಂಧಿನಗರದ ಕೆಲ ಮನೆಗಳಿಗೆ ಇಂದಿಗೂ ಸಂಪರ್ಕ ಕಲ್ಪಿಸಿಲ್ಲ, ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ, ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ವಾರ್ಡ್‌ನಲ್ಲಿ ಸ್ವಚ್ಛತೆ ಹಾಗೂ ನೀರಿನ ಸಮರ್ಪಕ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ವಾರ್ಡ್‌ನಿಂದ ಕಸ ಸರಿಯಾಗಿ ಹೊರ ಹೋಗದ ಕಾರಣ, ಅಲ್ಲಲ್ಲಿ ಕಸದ ರಾಶಿ ಕಾಣುತ್ತಿದ್ದು, ಕಸವನ್ನು ಹೊರ ಸಾಗಿಸಲು ಸೂಕ್ತ ವ್ಯವಸ್ಥೆ ಮಾಡಬೇಕೆಂದು ಗಿರಿಜಾ ಧನಿಯಕುಮಾರ್‌ ಆಯುಕ್ತರಲ್ಲಿ ಮನವಿ ಮಾಡಿದರು.
ಪಾಲಿಕೆಯ ಸದಸ್ಯರ ಮನವಿಗೆ ಉತ್ತರಿಸಿದ ಆಯುಕ್ತರಾದ ರೇಣುಕಾ, ನಗರದಿಂದ ಕಸವನ್ನು ಹೊರಗೆ ಸಾಗಿಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. 15ನೇ ವಾರ್ಡ್‌ಗೆ ಪತ್ಯೇಕವಾಗಿ ಒಂದು ಟ್ಯಾಕ್ಟರ್‌ ನೀಡಲಾಗಿದೆ, ಮನೆಗಳಿಂದ ಕಸ ತರಲು 4 ಆಟೋಗಳನ್ನು ನಿಯೋಜಿಸಲಾಗಿದೆ, ಆದರೆ ಒಣ ಮತ್ತು ಹಸಿ ಕಸ ಬೇರ್ಪಡಿಸದ ಹಿನ್ನೆಲೆಯಲ್ಲಿ ಕೊಂಚ ವಿಳಂಬವಾಗುತ್ತಿದೆ ಎಂದು ವಾರ್ಡ್‌ನ ಹೆಲ್ತ್ ಇನ್ಸ್ಪೆಕ್ಟರ್‌, ದಫೇದಾರ್‌ ಮತ್ತು ಸೂಪರ್ ವೈಸರ್‌ ಸಬೂಬು ಹೇಳುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ, ಇಂದೇ ಅವರಿಗೆ ಕಟ್ಟುನಿಟ್ಟಿನ ಆದೇಶ ಮಾಡುತ್ತಿದ್ದು, ಅಂದಿನ ಕಸ ಅಂದೇ ಪ್ರತ್ಯೇಕಗೊಂಡು ಅಜ್ಜಗೊಂಡನಹಳ್ಳಿ ಕಸವಿಲೇವಾರಿ ಘಟಕಕ್ಕೆ ಹೋಗಬೇಕು, ಇಲ್ಲದಿದ್ದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಪಾರ್ಕ್ ಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಆಲದ ಮರದ ಪಾರ್ಕ ನ್ನು ಮುಂದಿನ ಐದು ವರ್ಷಗಳ ಕಾಲ ಗುತ್ತಿಗೆದಾರನೇ ನಿರ್ವಹಣೆ ಮಾಡಬೇಕಾಗಿದೆ, ಸ್ಮಾರ್ಟ್ ಸಿಟಿಯ ಪ್ರತಿಯೊಂದು ಯೋಜನೆಗೂ ನಿರ್ವಹಣೆಯ ಜವಾಬ್ದಾರಿಯನ್ನು ಗುತ್ತಿಗೆದಾರನಿಗೆ ವಹಿಸಲಾಗಿದೆ. ಕೆಲವು ಸರಕಾರಿ ಕಚೇರಿಗಳು, ಶಾಲಾ ಕಾಲೇಜುಗಳಿಂದ ಆವರಣದಲ್ಲಿರುವ ಗಿಡಗೆಂಟೆಗಳನ್ನು ತೆಗೆದುಕೊಂಡುವಂತೆ ಪಾಲಿಕೆಗೆ ಒತ್ತಡ ತರುತ್ತಿದ್ದಾರೆ. ಇದು ಪಾಲಿಕೆಯ ಕೆಲಸವಲ್ಲ, ಶಾಲಾ, ಕಾಲೇಜುಗಳು, ಸರಕಾರಿ ಕಚೇರಿಗಳ ಸ್ವಚ್ಚತೆಯನ್ನು ಇಲಾಖೆಯವರೆ ಮಾಡಿಸಿಕೊಳ್ಳಬೇಕು, ಇದು ಪಾಲಿಕೆ ಜವಾಬ್ದಾರಿಯಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ಗೌರಿ, ಗಣೇಶ ಹಬ್ಬದ ಆಚರಣೆ, ಗಣೇಶ ಪ್ರತಿಷ್ಠಾಪನೆ ಕುರಿತಂತೆ ಇನ್ನೂ ಪಾಲಿಕೆಗೆ ಸರಕಾರದ ಮಾರ್ಗಸೂಚಿ ಬಂದಿಲ್ಲ, ಅದು ಬಂದ ತಕ್ಷಣವೇ ಪ್ರಚುರ ಪಡಿಸುವ ಕೆಲಸ ಮಾಡಲಾಗುವುದು. ಮನೆಗಳಲ್ಲಿ ಕೂರಿಸುವ ಗಣೇಶನ ವಿಸರ್ಜನೆಗೆ ಈ ಹಿಂದಿನ ವರ್ಷಗಳಂತೆ ಹಬ್ಬ ಮತ್ತು ಮುಂದಿನ ಎರಡು ದಿನಗಳ ಕಾಲ, ಪ್ರತಿವಾರ್ಡ್ ನ ಸರ್ಕಲ್ ಗಳಲ್ಲಿ ಟ್ಯಾಂಕರ್ ಗಳನ್ನು ನಿಲ್ಲಿಸಲಾಗುವುದು, ಅದರಲ್ಲಿ ಸಾರ್ವಜನಿಕರು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳನ್ನು ವಿಸರ್ಜಿಸಬಹುದಾಗಿದೆ, ಹಬ್ಬಕ್ಕೆ ನೀರಿನ ತೊಂದರೆಯಿಲ್ಲದಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆ ನೀಡಿದರು.
ಬೀದಿ ದೀಪಗಳ ನಿರ್ವಹಣೆ ಕುರಿತಂತೆ ಈಗಾಗಲೇ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ, ಸಮಸ್ಯೆ ಗಮನಕ್ಕೆ ಬಂದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಪರಿಹರಿಸುವಂತೆ ಸೂಚನೆ ನೀಡಲಾಗಿದೆ. ಗಾಂಧಿನಗರ ಭಾಗದಲ್ಲಿ ಸುಮಾರು 30 ಮನೆಗಳಿಗೆ ಗ್ಯಾಸ್‌ ಸಂಪರ್ಕ ಕಲ್ಪಿಸುವುದು ಬಾಕಿ ಇದೆ, ಸೋಮವಾರದೊಳಗೆ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಒಪ್ಪಿಕೊಂಡಿದ್ದಾರೆ, ಕೆಲವರು ಪೈಪ್ ಲೈನ್‌ ಮೂಲಕ ಗ್ಯಾಸ್‌ ಪಡೆಯಲು ಹಿಂದೇಟು ಹಾಕುತ್ತಿರುವುದರಿಂದ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸಲು ಸಮಸ್ಯೆಯಾಗಿದೆ, ಸಾರ್ವಜನಿಕರು ಯಾವುದೇ ಅಂಜಿಕೆಯಿಲ್ಲದೆ ತಮ್ಮ ಮನೆಗಳಿಗೆ ಗ್ಯಾಸ್‌ ಸಂಪರ್ಕ ಪಡೆಯುವಂತೆ ಆಯುಕ್ತರು ಮನವಿ ಮಾಡಿದರು.
ಈ ವೇಳೆ ವಾರ್ಡ್ ನ ಇಂಜಿನಿಯರ್‌, ಆರೋಗ್ಯ ನಿರೀಕ್ಷಕರು, ಪೌರಕಾರ್ಮಿಕರ ಮುಖ್ಯಸ್ಥರು, ನೀರುಗಂಟಿ ಸೇರಿದಂತೆ ಹಲವು ಅಧಿಕಾರಿ, ನೌಕರರು ಇದ್ದರು.

Get real time updates directly on you device, subscribe now.

Comments are closed.

error: Content is protected !!