ಗಣೇಶ ಹಬ್ಬಕ್ಕೆ ಅನುಮತಿ- ಮೂರ್ತಿ ತಯಾರಕರಲ್ಲಿ ಹರ್ಷ

134

Get real time updates directly on you device, subscribe now.

ತುಮಕೂರು: ಕೋವಿಡ್‌ ನಿಯಮಾವಳಿಗಳ ಅನ್ವಯ ಗೌರಿ ಗಣೇಶ ಆಚರಣೆಗೆ ಸರಕಾರ ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ಕುಂಬಾರರ ಸಂಘದ ರಾಜ್ಯ ಗೌರವಾಧ್ಯಕ್ಷ ಬಸವರಾಜು ತಿಳಿಸಿದ್ದಾರೆ.
ನಗರದ ಅಶೋಕ ರಸ್ತೆಯಲ್ಲಿ ಮಾರಾಟಕ್ಕೆಂದು ಇರಿಸಿರುವ ಗಣೇಶ ಮೂರ್ತಿಗಳ ಬಳಿ ಮಾತನಾಡಿದ ಅವರು, ಕಳೆದ ವರ್ಷ ಸರಕಾರ ಕೋವಿಡ್‌ ಹಿನ್ನೆಲೆಯಲ್ಲಿ ಕೇವಲ ಒಂದು ದಿನ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಿತ್ತು, ಇದರಿಂದ ತಯಾರಿಸಿದ ಸಾವಿರಾರು ಮೂರ್ತಿಗಳು ಮಾರಾಟವಾಗದೆ ಉಳಿದು ಕುಂಬಾರರು ಸಂಕಷ್ಟಕ್ಕೆ ಸಿಲುಕಿ ಪರದಾಡುವಂತಾಗಿದ್ದರು. ಗೌರಿ, ಗಣೇಶ ಹಬ್ಬವಿಲ್ಲದ ಕಾರಣ ಕುಂಬಾರರು ಮತ್ತು ಗಣೇಶ ಮೂರ್ತಿ ತಯಾರಿಸುವವರು ಬದುಕು ಬೀದಿಗೆ ಬಿದ್ದಿತ್ತು, ಆದರೆ ಈ ಬಾರಿ ಸರಕಾರ ಹಬ್ಬ ನಾಲ್ಕು ದಿನ ಇರುವ ಮೊದಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕೆಲ ಷರತ್ತು ವಿಧಿಸಿ ಅನುಮತಿ ನೀಡಿದೆ, ಇದು ನಿಜಕ್ಕು ಕುಂಬಾರ ಸಮುದಾಯಕ್ಕೆ ಮರಳುಗಾಡಿನಲ್ಲಿ ಸಿಹಿ ನೀರು ಸಿಕ್ಕಂತಾಗಿದೆ, ನಾವುಗಳಲ್ಲಿ ಎಲ್ಲಾ ಕೋವಿಡ್‌ ನಿಯಮಗಳನ್ನು ಪಾಲಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಕಾರ ನೀಡಲಾಗುವುದು ಎಂದರು.
ಸರಕಾರ ಮನೆಗಳಲ್ಲಿ 2 ಅಡಿಯ, ಸಾರ್ವಜನಿಕವಾಗಿ 4 ಅಡಿಯ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಿದೆ. ಸಾರ್ವಜನಿಕವಾಗಿ ಗಣೇಶ ಮೂರ್ತಿಗಳ ಜೊತೆಗೆ ಪ್ರತಿ ಮನೆಗಳೂ ಈ ಹಬ್ಬವನ್ನು ಗಣೇಶನ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ನಡೆಸಲಾಗುತ್ತದೆ.ಹಾಗಾಗಿ ಸಾರ್ವಜನಿಕರು ಮಾಸ್ಕ್ ಧರಿಸಿ, ಕೋವಿಡ್‌ ನಿಯಮಗಳನ್ನು ಪಾಲಿಸುವ ಮೂಲಕ ಅಶೋಕ ರಸ್ತೆಗೆ ಬಂದು, ಮೂರ್ತಿಗಳನ್ನು ಖರೀದಿಸಿ ಪ್ರತಿಷ್ಠಾಪಿಸಿ ವಿಸರ್ಜಿಸುವ ಮೂಲಕ ಹಿಂದೂ ಧರ್ಮದ ಪ್ರಕಾರ ಆಚರಿಸಿ, ಸಂಕಷ್ಟದಲ್ಲಿರುವ ಕುಂಬಾರರ ನೆರವಿಗೆ ಬರುವಂತೆ ಬಸವರಾಜು ಮನವಿ ಮಾಡಿದರು.
ಈ ವೇಳೆ ತುಮಕೂರು ಜಿಲ್ಲಾ ಕುಂಬಾರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ನವೀನ್‌, ನಿರ್ದೇಶಕ ಕಾಂತರಾಜು ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!