ಕಾಂಗ್ರೆಸ್ ನಿಂದ ಆಸ್ಕರ್‌ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಕೆ

144

Get real time updates directly on you device, subscribe now.

ತುಮಕೂರು: ಸೋಮವಾರ ನಿಧನರಾದ ಹಿರಿಯ ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಸಂಸದ ಆಸ್ಕರ್‌ ಫರ್ನಾಂಡೀಸ್‌ ಅವರಿಗೆ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ ಅಧ್ಯಕ್ಷತೆಯಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.
ಜಿಲ್ಲಾ ಕಾಂಗ್ರೆಸ್‌ ನಾಯಕರು ಮೃತ ಹಿರಿಯ ನಾಯಕ ಆಸ್ಕರ್‌ ಫರ್ನಾಂಡೀಸ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ತಮ್ಮ ಗೌರವ ಸಲ್ಲಿಸಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ ಮಾತನಾಡಿ, 7 ಬಾರಿ ಸಂಸದರಾಗಿ, ಕೇಂದ್ರದ ಸಚಿವರಾಗಿ ಅಪಾರ ರಾಜಕೀಯ ಜ್ಞಾನ ಪಡೆದಿದ್ದ ಆಸ್ಕರ್‌ ಫರ್ನಾಂಡೀಸ್‌, ಅತ್ಯಂತ ಮೃದು ಸ್ವಭಾವದ ವ್ಯಕ್ತಿ, ಕಾಂಗ್ರೆಸ್‌ ಪಕ್ಷ ಮತ್ತು ಸರಕಾರದಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದ ಫರ್ನಾಂಡೀಸ್‌ ಅವರು, ತಾವು ಕೇಂದ್ರದ ಸಚಿವರಾಗಿದ್ದ ಕಾಲದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದ್ದರು. ಇಂತಹ ಹಿರಿಯ ರಾಜಕೀಯ ಮುತ್ಸದ್ಧಿಯನ್ನು ಕಳೆದುಕೊಂಡಿರುವುದು ಪಕ್ಷಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ, ಅವರ ಸಾವಿನ ದುಖಃ ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಹಿರಿಯ ಮುಖಂಡ ರೇವಣ್ಣ ಸಿದ್ದಯ್ಯ ಮಾತನಾಡಿ, ಕಾಂಗ್ರೆಸ್‌ ಪಕ್ಷದಲ್ಲಿ ಅವರ ನಡೆನುಡಿ ಇತರರಿಗೆ ಮಾದರಿಯಾಗಿತ್ತು, ಸಂದಿಗ್ಧ ಸಂದರ್ಭದಲ್ಲಿ ಸೂಕ್ತ ಸಲಹೆ, ಸೂಚನೆ ನೀಡುವ ಮೂಲಕ ಪಕ್ಷದ ಬೆಳವಣಿಗೆಗೆ ಸಹಕರಿಸಿದ್ದ ಇವರು ಅತ್ಯಂತ ಸರಳ ಜೀವಿಯಾಗಿದ್ದು, ಕ್ರೈಸ್ತ ಧರ್ಮದಲ್ಲಿ ಹುಟ್ಟಿದ್ದರೂ ಇತರೆ ಧರ್ಮಗಳು ಮತ್ತು ದೇವರುಗಳ ಬಗ್ಗೆ ಆಪಾರ ಗೌರವ ಹೊಂದಿದ್ದರು. ಕಾರ್ಯಕರ್ತರು, ಮುಖಂಡರು ಎಂಬ ಭೇದ ಭಾವವಿಲ್ಲದೆ ಎಲ್ಲರೊಂದಿಗೆ ಬೆರೆಯುವ ಮೂಲಕ ಜನಾನುರಾಗಿಯಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಆಟೋ ರಾಜು, ಮೆಹಬೂಬ್‌ ಪಾಷ, ಎನ್‌ಎಸ್‌ಯುಐನ ಜಿಲ್ಲಾಧ್ಯಕ್ಷ ಸುಮುಖ ಕೊಂಡವಾಡಿ, ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ವಿಜಯಕುಮಾರ್‌, ಮರಿಚನ್ನಮ್ಮ, ಗೀತಾ, ಸರಸ್ವತಿ, ಜಾರ್ಜ್‌, ಷಾಹುದ್ದೀನ್‌, ಶಿವಪ್ರಸಾದ್‌, ಮುಬೀನಾ, ಅಜೀತ್‌, ಇದಾಯತ್‌ ಮತ್ತಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!