ಮೂವರು ಅಂತರ್‌ ಜಿಲ್ಲಾ ಕಳ್ಳರ ಬಂಧನ

357

Get real time updates directly on you device, subscribe now.

ಕೊರಟಗೆರೆ: 25 ಲಕ್ಷಕ್ಕೆ 10 ನಿಮಿಷದಲ್ಲಿ 35 ಲಕ್ಷ ಹಣ, 30 ಲಕ್ಷಕ್ಕೆ 20 ನಿಮಿಷದಲ್ಲಿ 50 ಲಕ್ಷ ನಗದು ದುಪ್ಪಟ್ಟು ಮಾಡಿಕೊಡುವ ಆಮೀಷವೊಡ್ಡಿ ಕೇಬಲ್‌ ಕಾರ್ಮಿಕನನ್ನು ಯಾಮಾರಿಸಿ 16 ಲಕ್ಷ, 40 ಸಾವಿರ ನಗದು ಹಣ ಪಡೆದು ಪರಾರಿಯಾಗಿದ್ದ 3 ಜನ ಅಂತರ್‌ ಜಿಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ, ಪಿಎಸೈ ನಾಗರಾಜು ಮತ್ತು ಎಎಸೈ ಯೊಗೀಶ್‌ ನೇತೃತ್ವದ ಪೊಲೀಸರ ತಂಡ ಯಶಸ್ವಿಯಾಗಿದ್ದಾರೆ.
ತುಮಕೂರು ನಗರ ಬ್ರಹ್ಮಸಂದ್ರ ಸಮೀಪದ ದೊಡ್ಡಪೇಟೆ ವಾಸಿಯಾದ ಕೇಬಲ್‌ ಕಾರ್ಮಿಕ ಅಶೋಕಕುಮಾರ್‌ ಎಂಬಾತ ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರಿನ ಅನ್ವಯ ತುಮಕೂರು ಎಸ್ಪಿ ರಾಹುಲ್‌ಕುಮಾರ್‌ ಮತ್ತು ಮಧುಗಿರಿ ಡಿವೈಎಸ್ಪಿ ರಾಮಕೃಷ್ಣ ಮಾರ್ಗದರ್ಶನದಲ್ಲಿ 3 ಜನ ಅಂತರ್‌ ಜಿಲ್ಲಾ ಖತರ್ನಾಕ್‌ ಕಳ್ಳರನ್ನು ಕೊರಟಗೆರೆ ಪೊಲೀಸರ ತಂಡ ಬಂಧಿಸಿ ಅವರಿಂದ 11 ಲಕ್ಷ 76 ಸಾವಿರ ನಗದು ಹಣ ವಶಕ್ಕೆ ಪಡೆದಿದ್ದಾರೆ.
ಹಾವೇರಿ ಜಿಲ್ಲೆ ಚಿಕ್ಕಕುರವತ್ತಿ ಗ್ರಾಮದ ನವೀನ್‌ಕುಮಾರ್‌(40), ತುಮಕೂರು ನಗರದ ಯಲ್ಲಾಪುರದ ವಾಸಿ ಗಂಗಾಧರ (43), ಪಾವಗಡ ತಾಲೂಕು ಅಚ್ಚಮ್ಮನಹಳ್ಳಿ ಗ್ರಾಮದ ರಾಮಕೃಷ್ಣ (56) ಬಂಧಿತ ಆರೋಪಿಗಳಾಗಿದ್ದಾರೆ. ಇನ್ನುಳಿದ ತುರುವೇಕೆರೆ ತಾಲೂಕು ಸಂಪಿಗೆ ಹೊಸಹಳ್ಳಿ ವಾಸಿ ಮುತ್ತುರಾಜು ಮತ್ತು ದೊಡ್ಡಬಳ್ಳಾಪುರ ವಾಸಿ ಗೋಪಿಯ ಬಂಧನಕ್ಕೆ ಕೊರಟಗೆರೆ ಪೊಲೀಸರ ತಂಡ ಬಲೆ ಬೀಸಿದೆ.
ದುಪ್ಪಟ್ಟು ಹಣ ಮಾಡುವ ದುರಾಸೆಯಿಂದ ಅಪರಿಚಿತ ದೂರವಾಣಿ ಕರೆಗೆ ಯಾಮಾರಿದ ಕೇಬಲ್‌ ಕಾರ್ಮಿಕ ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದ ಪಾರ್ಕಿಂಗ್‌ ಬಳಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಗಳಿಗೆ ತಮ್ಮ ಬಳಿಯಿದ್ದ ಹಣದ ಬ್ಯಾಗ್‌ ನೀಡಿದ್ದಾರೆ. ಬ್ಯಾಗಿನಲ್ಲಿದ್ದ ಹಣ ಎಣಿಸುವಾಗ ಅಷ್ಟೇ ಹಣವಿರುವ ಮತ್ತೊಂದು ಬ್ಯಾಗನ್ನು ನೀಡಿ ಅರ್ಧಗಂಟೆ ಬಿಟ್ಟು ಮತ್ತೆ ಶಿರಾ ನಗರಕ್ಕೆ ಬರುವಂತೆ ತಿಳಿಸಿ ಸ್ಥಳದಿಂದ ಪರಾರಿ ಆಗಿದ್ದಾರೆ.
ತಾವು ನೀಡಿದ ಹಣದ ಬ್ಯಾಗನ್ನು ಪರಿಶೀಲನೆ ನಡೆಸದೆ ಹಣದ ಆಸೆಗಾಗಿ ಮತ್ತೆ ಶಿರಾಗೆ ಬಂದ ದಂಪತಿ ಅರ್ಧ ಗಂಟೆ ಕಾದು ದೂರವಾಣಿ ಕರೆ ಮಾಡಿದರೆ ಅಪರಿಚಿತ ವ್ಯಕ್ತಿಗಳ ಮೊಬೈಲ್‌ ಸ್ವಿಚ್‌ಆಪ್‌ ಆಗಿವೆ. ಬ್ಯಾಗಿನಲ್ಲಿದ್ದ ಹಣ ನೋಡಿದರೆ ಹಣದ ಬದಲಾಗಿ ಕಂತೆ ರೂಪದ ವೈಟ್‌ ಪೇಪರ್‌ ಕಂಡಿವೆ. ಮೋಸದ ಅರಿವಾದ ಮೇಲೆ ತಕ್ಷಣ ಕೊರಟಗೆರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕಾರ್ಮಿಕನ ದೂರಿನನ್ವಯ ಪೊಲೀಸರು 3 ಜನ ಆರೋಪಿಗಳನ್ನು ಬಂಧಿಸಿ ಇನ್ನುಳಿದ ಆರೋಪಿಗಳ ಸೆರೆಗಾಗಿ ಬಲೆ ಬೀಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ, ಪಿಎಸೈ ನಾಗರಾಜು, ಎಎಸೈ ಯೊಗೀಶ್‌, ಸಿಬ್ಬಂದಿ ವೆಂಕಟೇಶ್‌, ಗಂಗಾಧರಪ್ಪ, ರಾಮಣ್ಣ, ಚನ್ನಮಲ್ಲಿಕಾರ್ಜುನ, ರಮೇಶಬಾಬು, ನಸ್ರುಲ್ಲಖಾನ್‌ ಮತ್ತು ಸಿಬ್ಬಂದಿ ವರ್ಗವನ್ನು ತುಮಕೂರು ಎಸ್ಪಿ ರಾಹುಲ್‌ಕುಮಾರ್‌ ಅಭಿನಂದಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!