ಡಿಸೆಂಬರ್‌ ವೇಳೆಗೆ ಹಾಗಲವಾಡಿ ಕೆರೆಗೆ ಹೇಮೆ ನೀರು

226

Get real time updates directly on you device, subscribe now.

ನಿಟ್ಟೂರು: ದಶಕಗಳಿಂದ ನೀರು ಕಾಣದೆ ಇರುವಂತಹ ಹಾಗಲವಾಡಿ ಗ್ರಾಮದ ಕೆರೆಗೆ ಇದೇ ನವೆಂಬರ್‌ ಅಂತ್ಯದ ವೇಳೆಗೆ ಕಾಮಗಾರಿ ಸಂಪೂರ್ಣ ಮುಗಿಸಿ ಡಿಸೆಂಬರ್‌ ವೇಳೆಗೆ ಹೇಮಾವತಿ ನೀರು ಹರಿಸಲಾಗುತ್ತದೆ ಎಂದು ಕಾವೇರಿ ನಿಗಮದ ಎಂಡಿ ಜಯಪ್ರಕಾಶ್‌ ಭರವಸೆ ನೀಡಿದರು.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಹರದಗೆರೆ ಗ್ರಾಮದಿಂದ ಹಿಡಿದು ಹಾಗಲವಾಡಿ ವರೆಗೆ ಹೇಮಾವತಿ ನಾಲೆಗಳನ್ನು ಹಾಗೂ ನಾನಿ ಹಾಗಲವಾಡಿ ಹರದಗೆರೆ ಕೆರೆ ವೀಕ್ಷಣೆ ಮಾಡಿ ಮಾತನಾಡಿ, ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ನಿರ್ದೇಶನದಂತೆ ಕಲಾಪ ನಡೆಯುತ್ತಿದ್ದರೂ ಅದನ್ನು ಬದಿಗಿಟ್ಟು ಹಾಗಲವಾಡಿ ಕೆರೆಗೆ ನೀರು ಹರಿಸಲೇಬೇಕು ಎಂದು ತೀರ್ಮಾನಿಸಿ ಖುದ್ದು ನಾನೇ ನಮ್ಮ ಅಧಿಕಾರಿಗಳ ಜೊತೆಯಲ್ಲಿ ಬಂದಿದ್ದು, ಇಲ್ಲಿರುವ ಎಲ್ಲಾ ಸಮಸ್ಯೆಗಳನ್ನು ರೈತರ ಮೂಲಕ ಕೇಳಿಕೊಂಡಿದ್ದೇನೆ, ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಹಾಗಲವಾಡಿ ಕೆರೆಗೆ ನೀರು ಹರಿಸುವ ಯೋಜನೆ ಮಾಡಲಾಗುತ್ತದೆ ಎಂದರು.
ಹಾಗಲವಾಡಿ ಕೆರೆಗೆ ನೀರು ಹರಿಸುವ ಮಾರ್ಗ ಮಧ್ಯದಲ್ಲಿ ಕೆಲವು ರೈತರಿಗೆ ಪರಿಹಾರ ನೀಡಿಲ್ಲ ಎನ್ನುವ ವಿಚಾರ ತಿಳಿದಿದ್ದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ಮಾಡಿ ಶೀಘ್ರದಲ್ಲಿಯೇ ಅವರಿಗೆ ಪರಿಹಾರದ ವ್ಯವಸ್ಥೆ ಮಾಡಲಾಗುತ್ತದೆ, ಈಗಾಗಲೇ ರೈತರಿಗೆ ಅಂತಿಮವಾಗಿ ಪರಿಹಾರದ ಅವಾರ್ಡ್‌ ನೋಟಿಸ್‌ ನೀಡಿ ಅವರಿಂದ ಜಾಗ ಬಿಡಿಸಿಕೊಂಡು ಹಾಗಲವಾಡಿ ಕೆರೆಗೆ ನೀರು ಹರಿಸಲಾಗುತ್ತದೆ ಎಂದರು.
ಹಾಗಲವಾಡಿ ಕೆರೆಗೆ ನೀರು ಹರಿಸುವ ನಾಲೆಗಳಲ್ಲಿ ಸೀಪೇಜ್‌ ಹರಿದು ಬೇರೆ ತೋಟ ಹೊಲಗಳಿಗೆ ಹರಿಯುತ್ತಿರುವುದು ಸಹ ಕಂಡು ಬರುತ್ತಿದ್ದು, ಅದನ್ನು ಕೂಡಲೇ ಗುಣಮಟ್ಟದಿಂದ ಸಿಮೆಂಟ್‌ ಮಾಡಿ ಎಲ್ಲಿಯೂ ಕೂಡ ನೀರು ಅನಗತ್ಯವಾಗಿ ವ್ಯರ್ಥವಾಗದಂತೆ ಸಲೀಸಾಗಿ ನೀರು ಕೆರೆಗೆ ಸೇರಬೇಕು ಎಂಬುದನ್ನು ಸಹ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ,
ಹೇಮಾವತಿ ನಾಲೆ ತೆಗೆಯುವ ಸಂದರ್ಭದಲ್ಲಿ ಬ್ಲಾಸ್ಟಿಂಗ್‌ ಮಾಡಿದಂತಹ ಸಂದರ್ಭದಲ್ಲಿ ಕೆಲವು ಮನೆಗಳಿಗೆ ಹಾನಿಯಾಗಿದೆ, ಅವುಗಳಿಗೂ ಪರಿಹಾರವನ್ನು ಕೂಡಲೇ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಲವು ಭಾಗದಲ್ಲಿ ತುಂಬಾ ಆಳವಾಗಿ ನಾಲೆ ತೋಡಿರುವುದರಿಂದ ಮಣ್ಣು ಕುಸಿಯುವ ಅಂಶವಿರುವುದರಿಂದ ಆ ಭಾಗದಲ್ಲಿ ಪೈಪ್‌ಲೈನ್‌ ಮೂಲಕವೇ ನೀರು ಹರಿಸುವಂತಹ ಯೋಜನೆ ಮಾಡಲು ಕೂಡ ಅಧಿಕಾರಿಗಳಿಗೆ ಸೂಚಿಸಿದರು.
ಬಿಜೆಪಿ ಮುಖಂಡ ಎಸ್‌.ಡಿ.ದಿಲೀಪ್‌ ಕುಮಾರ್‌ ಮಾತನಾಡಿ, ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಯವರ ಪರಿಶ್ರಮದಿಂದಾಗಿ ಹಾಗೂ ಅವರ ಆಲೋಚನೆಗಳಿಂದಾಗಿ ಹಾಗಲವಾಡಿ ಕೆರೆಗೆ ನೀರು ಹರಿಸಲು ಎಲ್ಲಾ ರೀತಿಯ ಸಿದ್ಧತೆ ಆಗಿವೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಮಸ್ಯೆಯಾಗಿದ್ದು ಈಗ ಖುದ್ದು ಸಚಿವರೆ ನಿಗಮದ ಎಂಡಿ ಅವರನ್ನು ಸ್ಥಳಕ್ಕೆ ಕಳುಹಿಸಿ ಇಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದಾರೆ ಮತ್ತು ಬೋಗಸಂದ್ರ ಗ್ರಾಮದಿಂದ ಹಾಗಲವಾಡಿ ಕೆರೆವರೆಗೂ ನಾಲೆಗಳಿಗೆ ಗುಣಮಟ್ಟದ ಸಿಮೆಂಟ್‌ ಲೈನಿಂಗ್‌ ಮಾಡಿದಾಗ ನೀರು ಪೋಲಾಗುವುದನ್ನು ತಡೆದು ಬರುವಂತಹ ಎಲ್ಲಾ ನೀರು ಸಹ ಕೆರೆಗೆ ತಲುಪುವುದರಿಂದ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಸದಸ್ಯ ಪ್ರಕಾಶ್‌, ಮೆಡಿಕಲ್‌ ಬಾಬು, ವಿಶ್ವನಾಥ್‌, ದಯಾನಂದ, ವಿಜಯ ಕುಮಾರ್‌, ಉದಯ, ಚಿದಾನಂದ, ಕೃಷ್ಣ ಶೆಟ್ಟಿ, ಇಇ ಮೋಹನ್‌, ಸಿ.ಈ ಮಹೇಶ್‌, ವಿಶೇಷ ಭೂಸ್ವಾಧೀನ ಅಧಿಕಾರಿ ಯಶೋಧಮ್ಮ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!