ಆಸ್ಪತ್ರೆಯಲ್ಲೂ ಹಣ ಪೀಕ್ತಾರೆ । ತಾಲ್ಲೂಕು ಕಚೇರಿಯಲ್ಲಿ ಪ್ರತಿದಿನವೂ ಅದೇ ಗೋಳು

ಎಸಿಬಿ ನಿರೀಕ್ಷಕರಿಗೆ ಸಾರ್ವಜನಿಕರಿಂದ ದೂರು

164

Get real time updates directly on you device, subscribe now.

ಕುಣಿಗಲ್‌: ಸರ್ಕಾರಿ ಅಧಿಕಾರಿಗಳು ಜನರ ಕೆಲಸ ಮಾಡಲು ಅನಗತ್ಯ ವಿಳಂಬ ಮಾಡುವುದು, ದಲ್ಲಾಳಿಗಳು ಹಣದ ಬೇಡಿಕೆ ಇಟ್ಟಲ್ಲಿ ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ನೀಡಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಸಿಬಿ ನಿರೀಕ್ಷಕ ವಿರೇಂದ್ರ ಹೇಳಿದರು.
ಮಂಗಳವಾರ, ಪಟ್ಟಣದ ತಾಪಂ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸಭೆಯಲ್ಲಿ ಅರ್ಜಿ ಸ್ವೀಕರಿಸಿ ಮಾತನಾಡಿ, ಕೆಲವರು ಸರ್ಕಾರಿ ಕಚೇರಿಯಲ್ಲೂ ಕೆಲಸ ಮಾಡಿಸಿಕೊಡುವುದಕ್ಕೆ ಅಕ್ರಮವಾಗಿ ಹಣ ಪಡೆಯುತ್ತಿದ್ದಾರೆ ಇದು ಕಾನೂನು ಬಾಹಿರ ಇಂತಹವು ಯಾವುದೇ ಇದ್ದರೂ ನೇರವಾಗಿ ತುಮಕೂರು ಭ್ರಷ್ಟಾಚಾರ ನಿಗ್ರಹದಳ ಕಚೇರಿಗೆ ಕರೆ ಮಾಡಿ ದೂರು ನೀಡಿದಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ ಹಾಜರಿದ್ದ ಎಲ್ಲರಿಗೂ ಎಸಿಬಿ ವಿಳಾಸದ ಕರಪತ್ರ ವಿತರಿಸಲಾಯಿತು.
ಸಭೆಯಲ್ಲಿ ಅಮೃತೂರಿನ ಕೃಷ್ಣಶೆಟ್ಟಿ ಎಂಬುವರು, ತಾಲೂಕು ಕಚೇರಿಯಲ್ಲಿ ಹಳೆಪಹಣಿ ನೀಡಲು ಹಣಕಟ್ಟಿಸಿಕೊಳ್ಳುತ್ತಾರೆ. ನಂತರ ನಕಲುಪ್ರತಿಗೆ ಹೊರಗಡೆ ಜೆರಾಕ್ಸ್ ಅಂಗಡಿಗೆ ತರುತ್ತಾರೆ. ಜೆರಾಕ್ಸ್ ಅಂಗಡಿಯಲ್ಲೂ ನಮ್ಮಿಂದಲೆ ಹಣ ಪಡೆಯುತ್ತಾರೆ. ಸರ್ಕಾರಿ ಕಡತ, ದಾಖಲೆಗಳನ್ನೆಲ್ಲಾ ಹೊರಗೆ ತಂದು ಜೆರಾಕ್ಸ್ ಮಾಡಿಸುವ ಮೂಲಕ ಸರ್ಕಾರಿ ಹಳೆ ಕಡತ ಹಾಳು ಮಾಡುತ್ತಾರೆ. ಅರ್ಜಿ ಹಾಕಿದರೂ ಹಣನೀಡಬೇಕು, ನಕಲು ಹಾಕಿಸಲು ಹಣಪಡೆಯಬೇಕು ದಯಮಾಡಿ ಸಮಸ್ಯೆ ಬಗೆಹರಿಸಬೇಕೆಂದರು. ಎಸಿಬಿ ನಿರೀಕ್ಷಕರು, ತಹಶೀಲ್ದಾರ್‌ ಗಮನಕ್ಕೆ ತನ್ನಿ, ಸರ್ಕಾರಿ ದಾಖಲೆ ತಹಶೀಲ್ದಾರ್‌ ಕಚೇರಿಯಲ್ಲಿ ಜೆರಾಕ್ಸ್ ಮಾಡಿಸಲು ಕ್ರಮಕೈಗೊಳ್ಳುವಂತೆ ಸೂಚಿಸುತ್ತೇವೆ. ಸೇವೆಗೆ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಹಣಕೇಳಿದಲ್ಲಿ ಎಸಿಬಿಗೆ ದೂರುನೀಡುವಂತೆ ಸೂಚಿಸಿದರು.
ಮರಿಯಪ್ಪ ಎಂಬುವವರು ಹೇರೂರು ಗ್ರಾಪಂನಲ್ಲಿ 2010-11ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸದೆ ಅನುದಾನ ನೀಡಲಾಗಿದೆ ಎಂದು ದೂರಿದರೆ, ಲಕ್ಷ್ಮೀನರಸಿಂಹರಾಜು ನಗರಯೋಜನಾ ಇಲಾಖೆಯ ಕಿರಿಯಅಭಿಯಂತರ, ರಾಜ್ಯಹೆದ್ದಾರಿ ಪಕ್ಕದಲ್ಲಿ ಕಟ್ಟಡ ಪರವನಗಿ ನೀಡಲು ಹೆದ್ದಾರಿ ನಿಯಮಪಾಲಿಸಿಲ್ಲ ಎಂದೂ, ಬೀರಗಾನಹಳ್ಳಿಯ ವೆಂಕಟೇಶ್‌ ಎಂಬುವರು ಬೀರಗಾನಹಳ್ಳಿಯಲ್ಲಿ ಸ್ಮಶಾನ ಒತ್ತುವರಿ ಮಾಡಿದ್ದಾರೆಂದು. ರಂಗಸ್ವಾಮಿ ಎಂಬುವರು ತಿಪ್ಪನಾಯಕನಹಳ್ಳಿಯಲ್ಲಿ ತೋಟಿ ಇನಾಮತಿ ಜಮೀನನ್ನು ನಿಯಮ ಉಲ್ಲಂಘಿಸಿ ಖಾತೆಮಾಡಲಾಗಿದೆ ಎಂಬುದು ಸೇರಿದಂತೆ ಇತರರು ದೂರುನೀಡಿದರು ಸಭೆಯಲ್ಲಿ ಒಟ್ಟಾರೆ 12ದೂರು ದಾಖಲಾಗಿದ್ದು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ದೂರು ದಾಖಲಾದವು. ಸಭೆಯಲ್ಲಿ ಹಾಜರಿದ್ದ ಸಾರ್ವಜನಿಕರು ಪಟ್ಟಣದ ಸರ್ಕಾರಿ ಅಸ್ಪತ್ರೆಯಲ್ಲಿ ಪ್ರತಿಯೊಂದಕ್ಕೂ ಹಣನೀಡಬೇಕು, ಮಧ್ಯಾಹ್ನದ ಮೇಲೆ ಯಾವುದೇ ವೈದ್ಯರಿರುವುದಿಲ್ಲ ಹಾಗೂ ಉಪನೊಂದಣಾಧಿಕಾರಿ ಕಚೇರಿಯಲ್ಲಿ ದಲ್ಲಾಳಿಗಳದ್ದೆ ದರ್ಬಾರು ಇಲ್ಲಿಗೆ ಅನಿರೀಕ್ಷಿತ ಧಾಳಿ ಮಾಡಿ ಭ್ರಷ್ಟಾಚಾರ ನಿಯಂತ್ರಿಸಬೇಕೆಂದು ಒತ್ತಾಯಿಸಿದರು.

Get real time updates directly on you device, subscribe now.

Comments are closed.

error: Content is protected !!