ವಿವಿಧ ಇಲಾಖೆಯಿಂದ ಭರ್ತಿ 12 ಲಕ್ಷ ಖಾಸಗಿ ವ್ಯಕ್ತಿ ಬ್ಯಾಂಕ್‌ ಖಾತೆಗೆ ಜಮೆ

ಹಣ ವರ್ಗಾವಣೆಯಲ್ಲಿ ಯಾರ ಕೈವಾಡ?

329

Get real time updates directly on you device, subscribe now.

ಕುಣಿಗಲ್‌: ಸಂಬಂಧ ಪಡದ ಖಾಸಗಿ ವ್ಯಕ್ತಿಯ ಖಾತೆಗೆ ವಿವಿಧ ಇಲಾಖೆಗಳು ಇಲಾಖೆಯ ಲಕ್ಷಾಂತರ ರೂಪಾಯಿ ಅನುದಾನ ವರ್ಗಾವಣೆ ಮಾಡಿ, ನಂತರ ಇಲಾಖೆ ದುಡ್ಡು ಮರಳಿ ಪಡೆಯಲು, ಅಧಿಕಾರಿಗಳು ಹಾಗೂ ಸಿಬ್ಬಂದಿ ಪಡಬಾರದ ಪಾಡು ಪಡುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದಲ್ಲಿ ಕೆಲಸ ಮಾಡುತ್ತಿರುವ ಮೂಲ ಮಂಡ್ಯದವರಾದ ಕೀರ್ತಿ ಎಂಬುವರ ಕೆನರಾ ಬ್ಯಾಂಕಿನಲ್ಲಿರುವ ಖಾತೆಗೆ ಕಳೆದ ಕೆಲವಾರು ದಿನಗಳಿಂದ ತಾಲೂಕು ಸೇರಿದಂತೆ ರಾಜ್ಯದ ವಿವಿಧೆಡೆಗಳ ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಬಿಸಿಎಂ ಇಲಾಖೆಯಿಂದ ಸುಮಾರು ಹನ್ನೆರಡು ಲಕ್ಷ ರೂ. ಜಮಾವಣೆಯಾಗಿದೆ. ಮೊದಲಿಗೆ ಹಣ ಜಮೆಯಾದಾಗ ಸುಮ್ಮನಾಗಿದ್ದ ಕೀರ್ತಿ, ನಂತರ ಹೆಚ್ಚಿನ ಮೊತ್ತ ಜಮಾವಣೆಯಾಗುತ್ತಿದ್ದಂತೆ ಬ್ಯಾಂಕ್‌ ವ್ಯವಸ್ಥಾಪಕರ ಗಮನಕ್ಕೆ ತಂದು ಹಣವನ್ನು ತಮ್ಮ ಖಾತೆಯಲ್ಲೆ ಬಿಟ್ಟರು. ಅದರೆ, ಮಾರ್ಚ್ ನಲ್ಲಿ ಮೇಲೆ ಕಾಣಿಸಿದ ಇಲಾಖೆಯವರು ಚಿಕ್ಕಬಳ್ಳಾಪುರದ ಖಾಸಗಿ ಅಂಗಡಿಯೊಂದಕ್ಕೆ ಅಹಾರ ಸಾಮಾಗ್ರಿ ಸೇರಿದಂತೆ ಇತರೆ ಸಾಮಾಗ್ರಿ ಸರಬರಾಜು ಮಾಡಿದ ಬಾಬ್ತು ಖಜಾನೆ-2 ಮೂಲಕ ನೀಡಬೇಕಿದ್ದು, ಹಣ ಜಮೆಯಾಗದೆ ಇರುವಾಗ ನೋಡಿಕೊಂಡಾಗ ಚಿಕ್ಕಬಳ್ಳಾಪುರದ ಸರಬರಾಜುದಾರರ ಬದಲಾಗಿ ಬೇರೊಬ್ಬರ ಖಾತೆಗೆ ಹಣ ಜಮೆಯಾಗಿರುವುದು ಕಂಡು ಬಂದಿದೆ.
ಈ ಮಧ್ಯೆ ಸದರಿ ವ್ಯಕ್ತಿಯನ್ನು ಸಂಪರ್ಕಿಸಿರುವ ಇಲಾಖೆ ಅಧಿಕಾರಿಗಳು, ಹಣ ವಾಪಸ್‌ ನೀಡುವಂತೆ ದುಂಬಾಲು ಬಿದ್ದಿದ್ದಲ್ಲದೆ ಪೊಲೀಸರನ್ನು ಬಳಸಿಕೊಂಡು ಬೆದರಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಅದರೆ, ಗ್ರಾಹಕ ಕೀರ್ತಿ, ತನ್ನ ಖಾತೆಯಲ್ಲಿ ಇರುವ ಹಣವನ್ನು ಯಾವ ಖಾತೆಯಿಂದ ಬಂದಿತ್ತೋ ಅದೆ ಖಾತೆಗೆ ಹಿಂತಿರುಗಿಸುವಂತೆ ಸಂಬಂಧಪಟ್ಟ ಬ್ಯಾಂಕಿನವರಿಗೆ ಪತ್ರ ಬರೆದು ಕೈತೊಳೆದುಕೊಂಡಿದ್ದಾರೆ.
ಕುಣಿಗಲ್ ನ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ಮಂಡ್ಯ ಬ್ಯಾಂಕ್‌ ವ್ಯವಸ್ಥಾಪಕರಿಗೆ ಪತ್ರ ಬರೆದು ಕೀರ್ತಿ ಅವರ ಬ್ಯಾಂಕ್‌ ಖಾತೆಯ ವಿವರ ನೀಡುವಂತೆ, ಅವರ ಖಾತೆ ಇನ್‌ ಆಕ್ಟೀವ್‌ ಗೊಳಿಸುವಂತೆ ಕೋರಿದ್ದಾರೆ. ಆದರೆ, ವಿವಿಧ ಇಲಾಖೆಯವರು ಜಮೆ ಮಾಡಿರುವ 12 ಲಕ್ಷ ರೂ. ಮೊತ್ತ ಹೇಗೆ ಖಾಸಗಿ ವ್ಯಕ್ತಿಯ ಖಾತೆಗೆ ಜಮೆ ಆಗಿದೆ? ಈ ರೀತಿ ಜಮೆಯಾಗುವ ಹಿಂದಿನ ಉದ್ದೇಶ ಏನಿತ್ತು.. ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಇಲಾಖೆ ಹಿರಿಯ ಅಧಿಕಾರಿಗಳ ಸಮಗ್ರ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.

Get real time updates directly on you device, subscribe now.

Comments are closed.

error: Content is protected !!