ಕುಂಬಾರ ಸಮಾಜ ಅಭಿವೃದ್ಧಿಯತ್ತ ಸಾಗಲಿ

124

Get real time updates directly on you device, subscribe now.

ತುಮಕೂರು: ನಗರದ ಬಿ.ಹೆಚ್‌.ರಸ್ತೆಯಲ್ಲಿರುವ ಶ್ರೀ ಕುಂಬಾರರ ಸಂಘದ ಆವರಣದಲ್ಲಿ ಶ್ರೀ ಕುಂಬಾರರ ಸಂಘ, ಶ್ರೀ ಕುಭೇಶ್ವರಿ ಮಹಿಳಾ ಸಂಘ, ಶ್ರೀ ಕುಂಭೇಶ್ವರ ವಿವಿದೋದ್ಧೇಶ ಸಂಘಗಳ ಸಹಯೋಗದಲ್ಲಿ ಸಂಸ್ಮರಣೆ ಮತ್ತು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ ಚೌಡಶೆಟ್ಟರು ಮಾತನಾಡಿ, ಮಳೆಯಲ್ಲಿಯೂ ಇಷ್ಟೊಂದು ಜನ ಬಾಗಿಯಾಗಿರುವುದನ್ನ ಕಂಡರೆ ಕುಂಬಾರರಲ್ಲಿ ಒಗ್ಗಟಿದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ, ನಮ್ಮ ಜನಾಂಗದ ಮಕ್ಕಳನ್ನು ಮತ್ತು ವ್ಯಕ್ತಿಗಳ ಪ್ರತಿಭೆ ಗುರುತಿಸುವ ಮೂಲಕ ಅವರಿಗೆ ಇಂತಹ ಕಾರ್ಯಕ್ರಮಗಳಲ್ಲಿ ಸನ್ಮಾನಿಸುವ ಮೂಲಕ ಅವರು ಜೀವನದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಲು ಪ್ರೋತ್ಸಾಹಿಸ ಬೇಕು ಎಂದರು.
ಕೆಲ ವರ್ಷಗಳ ಹಿಂದೆ ನಮ್ಮ ಸಂಘಟನೆ ಇಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿರಲಿಲ್ಲ, ಈಗ ಅಭಿವೃದ್ಧಿಯಾಗಿರುವುದು ಹೆಮ್ಮೆಯ ವಿಚಾರ, 2010ರಲ್ಲಿ ಕುಂಬಾರರ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಆಗಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮನವಿ ಮಾಡಿದಾಗ ಅವರು ಒಪ್ಪಿಗೆ ನೀಡಿ ಆದೇಶ ನೀಡಿದರು, ಆ ಮಂಡಳಿಗೆ 21 ಕೋಟಿ ಮಂಡಳಿಗೆ ನೀಡಲಾಯಿತು, ಆ ಹಣವನ್ನ ರಾಜ್ಯದ ನಮ್ಮ ಸಂಘದ ಅಭಿವೃದ್ಧಿಗೆ, ಬಡವರಿಗೆ ಬಳಕೆ ಮಾಡಲಾಯಿತು. ಈಗಿರುವ ಅಭಿವೃದ್ಧಿ ಮಂಡಳಿಗೆ ನಿರ್ದೇಶಕರನ್ನು ನೇಮಿಸುವ ಅಧಿಕಾರ ಸರ್ಕಾರಕ್ಕಿದ್ದು, ನಿರ್ದೇಶಕರನ್ನು ನೇಮಕ ಮಾಡಿದರೆ ಸರ್ಕಾರ ನೀಡಿದಂತಹ ಹಣದ ಬಗ್ಗೆ ಗಮನ ವಹಿಸಬಹುದು, ಇಲ್ಲವಾದರೆ ಏನಾಗುತ್ತದೆ ಎಂಬುದು ತಿಳಿಯುವುದಿಲ್ಲ, ಇದರ ಜೊತೆಗೆ ಸರ್ಕಾರ ಒಂದು ನಿಗಮ ಮಂಡಳಿ ಸ್ಥಾಪಿಸಬೇಕು, ಅದನ್ನು ನಾವೆಲ್ಲರೂ ಹೋರಾಟ ಮಾಡುವ ಮೂಲಕ ಸರ್ಕಾರಕ್ಕೆ ನಮ್ಮ ಮನವಿ ಸಲ್ಲಿಸಬೇಕಿದೆ ಎಂದರು.
ರಾಜ್ಯದಲ್ಲಿನ ನಮ್ಮ ಸಮಾಜದ ಜನರಿಗೆ ಸರ್ಕಾರ ಯೋಜನೆಯನ್ನು ತಲುಪಿಸುವ ಕಾರ್ಯ ನಾವೇ ಮಾಡಬೇಕಿದೆ, ನಮ್ಮ ಸಮಾಜದ ಮುಖಂಡರು ಕುಂಬಾರರ ಅಭಿವೃದ್ಧಿ ಮಂಡಳಿಗೆ ಸರ್ಕಾರದ ಗಮನ ತಂದು ಅನುದಾನ ತರುವಲ್ಲಿ ವಿಫಲರಾಗಿದ್ದಾರೆ, ರಾಜಕೀಯ ಮುಖಂಡರಿಗೆ ಮತ್ತು ರಾಜಕೀಯ ಪಕ್ಷಗಳಿಗೆ ನಮ್ಮಲ್ಲಿಯೂ ವೋಟ್‌ ಬ್ಯಾಂಕ್‌ ಇದೆ ಎಂಬುದನ್ನು ತೊರಿಸಬೇಕಿದೆ ಎಂದು ತಿಳಿಸಿದರು.
ಶ್ರೀ ರೇಣುಕಾಂಬ ಚಾರಿಟಬಲ್‌ ಟ್ರಸ್ಟ್ ನ ಅಧ್ಯಕ್ಷ ಗಂಗಯಲ್ಲಯ್ಯ ಮಾತನಾಡಿ, ನಮ್ಮ ಜನಾಂಗ ಹಿಂದುಳಿದಿದೆ, ನಾನು ನಿವೃತ್ತಿಯಾದಾಗಿನಿಂದ ಸರ್ಕಾರದಿಂದ ಬರುತ್ತಿರುವ ನಿವೃತ್ತಿ ವೇತನವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ದಾಸೋಹಕ್ಕೆ ವಿನಿಯೋಗಿಸಲಾಗುತ್ತದೆ, ಅದೇ ರೀತಿಯಲ್ಲಿ ನಮ್ಮ ಸಮಾಜದ ಭಾಂದವರಾದ ನೀವು ಎಷ್ಟೇ ಬಡವರಾಗಿದ್ದರೂ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಒತ್ತು ನೀಡುವ ಮೂಲಕ ಅವರನ್ನು ಸುಶಿಕ್ಷಿತರನ್ನಾಗಿಸಿ, ಅವರು ಅಕ್ಷರ ಕಲಿತರೇ ಸಮಾಜದಲ್ಲಿ ಬಾಳುವ ಮಾರ್ಗ ಪಡೆಯುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಕುಂಬಾರರ ಸಂಘದ ಅಧ್ಯಕ್ಷ ಎನ್‌.ಶ್ರೀನಿವಾಸ್‌, ಅಖಿಲ ಭಾರತ ಪ್ರಜಾಪತಿ ಮಹಾ ಸಂಘದ ಉಪಾಧ್ಯಾಕ್ಷ ಟಿ.ಎಸ್‌.ನಟರಾಜು, ಶ್ರೀಕುಂಬಾರರ ಸಂಘದ ಉಪಾಧ್ಯಕ್ಷ ಗುರುಮೂರ್ತಿ, ಶ್ರೀಕುಂಬಾರರ ಸಂಘದ ಟಿ.ಎಲ್‌.ನಾಗರಾಜು ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!