ತ್ಯಾಜ್ಯ ಸಂಸ್ಕರಣ ಘಟಕ ಸ್ಥಳಾಂತರಕ್ಕೆ ಒತ್ತಾಯ

265

Get real time updates directly on you device, subscribe now.

ಕುಣಿಗಲ್‌: ತಾಲೂಕಿನ ಅಂಚೆಪಾಳ್ಯ ಕೈಗಾರಿಕೆ ವಸಾಹತು ಪ್ರದೇಶದಲ್ಲಿರುವ ರಸಾಯನಿಕ ತ್ಯಾಜ್ಯ ಸಂಸ್ಕರಣ ಘಟಕ ಸಮರ್ಪಕವಾಗಿ, ವೈಜ್ಞಾನಿಕ ಕಾರ್ಯನಿರ್ವಹಣೆ ಮಾಡದ ಕಾರಣ ಘಟಕ ಮುಚ್ಚಿಸಬೇಕು, ಇಲ್ಲವಾದಲ್ಲಿ ಬೇರೆಡೆ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈಬಗ್ಗೆ ವಿವರ ನೀಡಿರುವ ಶಂಭುಗೌಡನಪಾಳ್ಯದ ಗ್ರಾಮದ ಮುಖಂಡ ಮಹಾದೇವ್‌, ಅಂಚೆಪಾಳ್ಯ ಕೈಗಾರಿಕಾ ವಸಹಾತು ಪ್ರದೇಶದಲ್ಲಿ ಅಪಾಯಕಾರಿ ರಸಾಯನಿಕ ತ್ಯಾಜ್ಯ ವಿಲೇವಾರಿ ಘಟಕ ಕಾರ್ಯ ನಿರ್ವಹಿಸುತ್ತಿದೆ. ಸದರಿ ಘಟಕದಲ್ಲಿ ಅಪಾಯಕಾರಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಬೇಕಿದೆ, ಆದರೆ ಈ ರೀತಿ ಕ್ರಮಕೈಗೊಳ್ಳದೆ ಬೇರೆ ಬೇರೆ ಕಡೆಗಳ ರಾಸಾಯನಿಕ ಕಾರ್ಖಾನೆಯಿಂದ ಸಂಸ್ಕರಿಸಲು ತಂದಂತಹ ರಾಸಾಯನಿಕ ತ್ಯಾಜ್ಯವನ್ನು ಘಟಕದಲ್ಲಿ ಎಲ್ಲೆಂದರಲ್ಲಿ ಸುರಿದಿರುವ ಕಾರಣ ಮಳೆ ಬಂದಲ್ಲಿ ಈ ರಾಸಾಯನಿಕ ತ್ಯಾಜ್ಯದೊಂದಿಗೆ ಮಳೆ ನೀರು ಮಿಶ್ರಣವಾಗಿ ನೇರವಾಗಿ ಸಮೀಪದಲ್ಲೆ ಇರುವ ಕೆರೆಕಟ್ಟೆ ಸೇರುತ್ತಿದೆ. ಇದರಿಂದಾಗಿ ಶಂಭುಗೌಡನಪಾಳ್ಯ, ಗೊಟ್ಟಿಕೆರೆ, ಸಿ.ಟಿ.ಪಾಳ್ಯ, ಅಂಚೆಪಾಳ್ಯ, ಚಿಕ್ಕಕಲ್ಯಾ, ಮುದುಗಿರಿ ಪಾಳ್ಯ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಗೆ ತೊಂದರೆಯಾಗುತ್ತಿದೆ. ಘಟಕದವರ ನಿರ್ಲಕ್ಷ್ಯದಿಂದ ಭೂ ಮಾಲಿನ್ಯ, ಜಲಮಾಲಿನ್ಯ ಮಳೆ ಬಂದಾಗ ಕೆಟ್ಟವಾಸನೆ ಹರಡುವ ಮೂಲಕ ವಾಯು ಮಾಲಿನ್ಯವಾಗಿ ಇಡಿ ಪರಿಸರ ನಾಶವಾಗುತ್ತಾ ಸುತ್ತಮುತ್ತಲ ರೈತರ ಜಮೀನಿನ ಬೆಳೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಕಂಡರೂ ಕಾಣದಂತೆ ಜಾಣ ಮೌನ ವಹಿಸಿದ್ದಾರೆ.
ಸ್ಥಳೀಯ ಯಲಿಯೂರು ಪಂಚಾಯಿತಿ ಗಮನಕ್ಕೆ ತಂದ ಮೇರೆಗೆ ಪಂಚಾಯಿತಿ ಅಧ್ಯಕ್ಷೆ ಶೈಲಜಾ, ಪಿಡಿಒ ಜಯಲಕ್ಷ್ಮೀ ಘಟಕದವರಿಗೆ ಎಚ್ಚರಿಕೆ ನೀಡಿದ್ದರೂ ದಿನಾಲೂ ಹಲವಾರು ವಾಹನಗಳು ಅಪಾಯಕಾರಿ ತ್ಯಾಜ್ಯ ತುಂಬಿಕೊಂಡು ಬರುತ್ತಲೆ ಇವೆ. ಸುತ್ತಮುತ್ತಲ ಗ್ರಾಮಗಳ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಸ್ಥಳೀಯ ಗ್ರಾಪಂ, ತಾಲೂಕು ಆಡಳಿತ ಸೂಕ್ತ ಕ್ರಮಕೈಗೊಂಡು ಮಾಲಿನ್ಯ ನಿಯಂತ್ರಿಸಬೇಕು, ಇಲ್ಲವಾದಲ್ಲಿ ಘಟಕವನ್ನು ಬೇರೆಡೆ ಸ್ಥಳಾಂತರಿಸಬೇಕು, ಇಲ್ಲವಾದಲ್ಲಿ ಸೋಮವಾರ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಹೆದ್ದಾರಿ ತಡೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ತಾಪಂ ಮಾಜಿ ಸದಸ್ಯ ಕೆಂಪೇಗೌಡ, ಪ್ರಮುಖರಾದ ಮಂಜುನಾಥ, ಲಿಂಗೇಗೌಡ, ಸಿದ್ದಗಂಗಯ್ಯ, ಮುರುಳಿ, ರೇವಣ್ಣ, ಶಿವಾನಂದ, ರಂಗ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!