ಪಾರ್ಶ್ವವಾಯು ಬಗ್ಗೆ ಎಚ್ಚರಿಕೆ ಅಗತ್ಯ: ಡಾ.ಪ್ರಮೋದ್

150

Get real time updates directly on you device, subscribe now.


ತುಮಕೂರು: ಮನುಷ್ಯನ ದೇಹದ ಇಂಜಿನ್ನಂತೆ ವರ್ತಿಸುವ ಮೆದುಳಿಗೆ ಸರಿಯಾಗಿ ರಕ್ತ ಚಲನೆ ಆಗುವುದಕ್ಕೆ ಅಡ್ಡಿ ಉಂಟಾದ ಸಂದರ್ಭದಲ್ಲಿ ಪಾರ್ಶ್ವವಾಯು ಉಂಟಾಗುತ್ತದೆ. ಈ ರೋಗದ ಗುಣಲಕ್ಷಣಗಳನ್ನು ಅರ್ಥ ಮಾಡಿಕೊಂಡು ಆರಂಭದಲ್ಲಿಯೇ ಗುರುತಿಸಿದರೆ ರೋಗದಿಂದ ಮೆದುಳಿನ ಮೇಲಾಗುವ ದುಷ್ಪರಿಣಾಮ ತಡೆಯಬಹುದಲ್ಲದೆ, ಸಾವಿನಿಂದಲೂ ವ್ಯಕ್ತಿಯನ್ನು ಬದುಕಿಸಬಹುದಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ನ್ಯೂರಾಲಜಿ ಮುಖ್ಯಸ್ಥ ಡಾ.ಪ್ರಮೋದ್ ಕೃಷ್ಣನ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರಿಗಾಗಿ ಪಾರ್ಶ್ವವಾಯು ರೋಗ, ಅದರ ಗುಣಲಕ್ಷಣ ಹಾಗೂ ಅದನ್ನು ತಡೆಗಟ್ಟುವಿಕೆ ಕುರಿತ ಕಾರ್ಯಗಾರದಲ್ಲಿ ಮಾತನಾಡಿ, ಹಾರ್ಟ್ ಅಟ್ಯಾಕ್ ಮತ್ತು ಪಾರ್ಶ್ವ ವಾಯು ಎರಡು ಕೂ ರಕ್ತನಾಳಗಳ ಹೆಪ್ಪುಗಟ್ಟುವಿಕೆಯಿಂದ ಉಂಟಾಗುತ್ತವೆ. ಹೃದಯಕ್ಕೆ ರಕ್ತ ಚಲನೆ ನಿಂತಾಗ ಹೃದಯಾಘಾತವಾದರೆ, ಮೆದುಳಿಗೆ ರಕ್ತ ಚಲನೆ ನಿಂತಾಗ ಮೆದುಳು ನಿಷ್ಕ್ರೀಯಗೊಳ್ಳುತ್ತದೆ, ವಯಸ್ಸು, ಅಧಿಕ ತೂಕ, ಬೊಜ್ಜು, ಜೀವನ ಶೈಲಿಯಲ್ಲಿನ ಬದಲಾವಣೆ, ಅಧಿಕ ರಕ್ತದೊತ್ತಡ, ಮಧುಮೇಹ, ನಿದ್ರಾಹೀನತೆ ಮತ್ತು ಕೌಟುಂಬಿಕ ಹಿನ್ನೆಲೆಗಳು ಪಾರ್ಶ್ವವಾಯು ಕಾಯಿಲೆಗೆ ಕಾರಣವಾಗಿವೆ ಎಂದು ಡಾ.ಪ್ರಮೋದ್ ಕೃಷ್ಣನ್ ತಿಳಿಸಿದರು.
ಪಾರ್ಶ್ವವಾಯುವಿನ ಆರಂಭಿಕ ಲಕ್ಷಣಗಳಾಗಿ ಕಳೆಗುಂದಿದ ಮುಖ, ಮಾತನಾಡಲು ಸಮಸ್ಯೆ, ಗ್ರಹಿಸುವಿಕೆ ಕುಂಠಿತ, ದೃಷ್ಟಿ ಮಂಜಾಗುವುದು, ಮಲ, ಮೂತ್ರ ನಿಯಂತ್ರಿಸಲು ಆಗದಿರುವುದು, ಕೆಲಸ ಮಾಡಲು ಸಮಸ್ಯೆ ಇವುಗಳು ಕಾಣಿಸಿಕೊಳ್ಳಲಿವೆ. ತಕ್ಷಣವೇ ತಜ್ಞ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆಗೆ ಒಳಪಟ್ಟರೆ ಈ ರೋಗದಿಂದ ಮೆದುಳಿದ ಮೇಲಾಗುವ ದುಷ್ಪರಿಣಾಮ ತಡೆಗಟ್ಟಬಹುದು. ಇಲ್ಲದಿದ್ದಲ್ಲಿ ಹಂತ ಹಂತವಾಗಿ ಮೆದುಳಿನ ಜೀವಕಣಗಳು ನಿಷ್ಕ್ರೀಯಗೊಳ್ಳುತ್ತಾ ಕೊನೆಗೆ ಒಂದು ದಿನ ಸಾವನ್ನಪ್ಪಬಹುದು. ಹಾಗಾಗಿ ಮೇಲಿನ ರೋಗ ಲಕ್ಷಣಗಳು ಕಾಣಿಸಿಕೊಂಡ 4 ಗಂಟೆಯ ಒಳಗೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದರೆ ರೋಗದಿಂದ ತೊಂದರೆ ತಪ್ಪಿಸಬಹುದ. ಇಲ್ಲದಿದ್ದಲ್ಲಿ ಜೀವಿತಾವಧಿ ಇನ್ನೊಬ್ಬರಿಗೆ ಬಾರವಾಗಿ ಬದುಕಬೇಕಾದ ಪರಿಸ್ಥಿತಿ ಬರಬಹುದು. ಹಾಗಾಗಿ ಜನರು ಎಚ್ಚೆತ್ತುಕೊಂಡು ತಜ್ಞರ ಸಲಹೆಯಂತೆ ನಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಒಂದು ಬಾರಿ ಮೆದುಳಿಗೆ ರಕ್ತ ಸಂಚಲನವಾಗುವುದು ನಿಂತರೆ ಪ್ರತಿ ನಿಮಿಷಕ್ಕೆ 20 ಲಕ್ಷದಂತೆ ಮೆದುಳಿನ ಜೀವಕಣಗಳು ಸಾವನ್ನಪ್ಪುತ್ತಾ ಹೋಗುತ್ತವೆ. ತಕ್ಷಣವೆ ಚಿಕಿತ್ಸೆ ದೊರೆತರೆ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಬಹುದಾಗಿದೆ. ಪಾರ್ಶ್ವವಾಯುವಿಗೆ ತುತ್ತಾದ ವ್ಯಕ್ತಿಯ ಮೆದುಳಿನ ಮೇಲಾದ ದುಷ್ಪರಿಣಾಮದ ಪ್ರಮಾಣ ಮತ್ತು ಆತನ ವಯಸ್ಸಿನ ಮೇಲೆ ರೋಗಿಯ ಚಿಕಿತ್ಸೆ ಅಡಗಿದೆ. ಹಾಗಾಗಿ ಜನರು ಈ ರೋಗದ ಬಗ್ಗೆ ನಿರ್ಲಕ್ಷ ಬೇಡ. ರೋಗದಿಂದ ಮೆದುಳಿಗೆ ಹೆಚ್ಚಿನ ಹಾನಿಯಾಗಿದ್ದರೆ, ವಯಸ್ಸಿರುವ ವ್ಯಕ್ತಿಯೂ ಸಾಯುವ ಸಾಧ್ಯತೆ ಇದೆ. ಕಡಿಮೆ ಹಾನಿಯಾಗಿರುವ ವ್ಯಕ್ತಿ 60 ವರ್ಷದವನಾಗಿದ್ದರೂ ಗುಣಮುಖನಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಸ್ವಯಂ ಚಿಕಿತ್ಸೆ, ನಾಟಿ ಚಿಕಿತ್ಸೆ ಕಡೆಗೆ ಹೋಗದೆ, ನೇರವಾಗಿ ಪಾರ್ಶ್ವವಾಯುವಿಗೆ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆಗಳಿಗೆ ದಾಖಲಾಗುವುದು ಒಳ್ಳೆಯದು ಎಂಬ ಸಲಹೆಯನ್ನು ಡಾ.ಪ್ರಮೋದ್ ಕೃಷ್ಣನ್ ನೀಡಿದರು.
ಕಾರ್ಯಾಗಾರದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್, ಮಣಿಪಾಲ್ ಆಸ್ಪತ್ರೆಯ ಪಿಆರ್ಓ ಶ್ರೀನಾಥ್ ಮತ್ತಿರರರು ಉಪಸ್ಥಿತರಿದ್ದರು. ಪತ್ರಕರ್ತರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!