ನರೇಗಾ ಯೋಜನೆ ಬಗ್ಗೆ ರೈತರಿಗೆ ತಿಳಿಸಿ- ಅಧಿಕಾರಿಗಳಿಗೆ ಡಾ.ರಂಗನಾಥ್‌ ಸೂಚನೆ

ರೈತರು ಆಮಿಷಕ್ಕೆ ಬಲಿಯಾಗಿ ಜಮೀನು ಮಾರಬೇಡಿ

147

Get real time updates directly on you device, subscribe now.

ಕುಣಿಗಲ್‌: ಗ್ರಾಮಾಂತರ ಪ್ರದೇಶದ ಜನರು ಯಾವುದೇ ಕಾರಣಕ್ಕೂ ಆಮಿಷಕ್ಕೆ ಬಲಿಯಾಗಿ ತಮ್ಮ ಕೃಷಿ ಜಮೀನನ್ನು ಮಾರಾಟ ಮಾಡಬೇಡಿ ಎಂದು ಶಾಸಕ ಡಾ.ರಂಗನಾಥ್‌ ಗ್ರಾಮಸ್ಥರಿಗೆ ಕರೆ ನೀಡಿದರು.
ತಾಲೂಕಿನ ಎಡೆಯೂರು ಹೋಬಳಿಯ ನಡೆಮಾವಿನಪುರ ಕಾಡುಗೊಲ್ಲರಹಟ್ಟಿಯಲ್ಲಿ ಕಂದಾಯ ಇಲಾಖೆ ನಡಿಗೆ ಗ್ರಾಮದ ಕಡೆಗೆ ಶಾಸಕರ ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿ ನೀತಿಯಿಂದ ಇಂದು ಬಂಡವಾಳ ಶಾಹಿಗಳು ಸಹ ರೈತರ ಜಮೀನು ಖರೀದಿ ಮಾಡಬಹುದು, ಬಂಡವಾಳ ಶಾಹಿಗಳು ರೈತರ ಜಮೀನು ಖರೀದಿಸುತ್ತಾರೆ, ಹಣ ಪಡೆದ ರೈತ ಕೆಲವೆ ದಿನಗಳಲ್ಲಿ ಹಣ ಖಾಲಿಮಾಡಿಕೊಂಡು ಅತಂತ್ರನಾಗುತ್ತಾನೆ. ಹೀಗಾಗಿ ರೈತ ಮಹಿಳೆಯರು ಬುದ್ಧಿವಂತರಾಗಿ ಯಾವುದೇ ಕಾರಣಕ್ಕೂ ಕೃಷಿ ಜಮೀನು ಮಾರಾಟಕ್ಕೆ ಅವಕಾಶ ನೀಡಬೇಡಿ, ಇಂದಿನ ನಿಮ್ಮ ಕೃಷಿ ಜಮೀನು ನಿಮ್ಮ ಮುಂದಿನ ಪೀಳಿಗೆಯವರಿಗೆ ಸೇರಬೇಕಾದ ಆಸ್ತಿ, ಕೃಷಿ, ಕೃಷಿ ಉತ್ಪನ್ನಗಳಿಗೆ ನಾಳೆ ಬಹುಮುಖ್ಯ ಬೆಲೆ ಬರಲಿದೆ ಮರೆಯಬೇಡಿ ಎಂದರು.
ಸರ್ಕಾರದ ಸವಲತ್ತುಗಳು ಗ್ರಾಮಾಂತರ ಪ್ರದೇಶದ ಜನತೆಯನ್ನು ಮುಟ್ಟಿಸಲು ಕೆಲ ಇಲಾಖೆಗಳು ವಿಫಲವಾಗಿರುವುದು ಖೇದಕರ, ಕೃಷಿ ಇಲಾಖೆ ಮತ್ತು ಗ್ರಾಮ ಪಂಚಾಯಿತಿಯ ಸಮರ್ಪಕ ಹೊಂದಾಣಿಕೆ ಇಲ್ಲದೆ ನರೇರಾ ಯೋಜನೆಯಡಿಯಲ್ಲಿ ಗ್ರಾಮದ ರೈತರಿಗೆ ಯೋಜನೆ ಸರಿಯಾಗಿ ತಲುಪಿಲ್ಲ, ಅಧಿಕಾರಿಗಳು ಸವಲತ್ತುಗಳ ಬಗ್ಗೆ ಅರಿವು ಮೂಡಿಸಲು ಶ್ರಮಿಸುತ್ತಿಲ್ಲ. ಈರೀತಿ ಆದರೆ ಯೋಜನೆ ಜನತೆಗೆ ತಲುವುದು ಹೇಗೆ, ಇನ್ನೊಂದು ವಾರದೊಳಗೆ ಗ್ರಾಮದ ಎಲ್ಲಾ ಮನೆಗೂ ಯೋಜನೆ ಅರಿವು ಮೂಡಿಸುವಂತೆ ಸೂಚಿಸಿದರು.
ಅರಣ್ಯ ಇಲಾಖಾಧಿಕಾರಿಗಳು ವಿನಾಕಾರಣ ಗ್ರಾಮಸ್ಥರಿಗೆ ತೊಂದರೆ ನೀಡದಂತೆ, ಅರಣ್ಯಪ್ರದೇಶದಲ್ಲಿ ಕೆರೆಹೂಳೆತ್ತುವುದು ಸೇರಿದಂತೆ ಅಂತರ್ಜಲ ಸಂರಕ್ಷಣೆಗೆ ನರೇಗಾ ಯೋಜನೆಯಡಿಯಲ್ಲಿ ಗ್ರಾಮಸ್ಥರು ಬಳಸಿಕೊಳ್ಳುವಂತೆ ಸೂಚಿಸಿದರು.
ಪಶು ಇಲಾಖಾ ವೈದ್ಯರು ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷ್ಯವಹಿಸುತ್ತಿದ್ದು ವೈದ್ಯ ನಾಗರಾಜ್‌ ಮೇಲೆ ಶಿಸ್ತು ಕ್ರಮಕ್ಕೆ ಸೂಚಿಸಿದರು. ವಿದ್ಯಾರ್ಥಿ ವೇತನದ ಬಗ್ಗೆ ಸರಿಯಾದ ಅರಿವು ಮೂಡಿಸುವಂತೆ ಸಮಾಜ ಕಲ್ಯಾಣ, ಬಿಸಿಎಂ ಇಲಾಖಾ ಸಿಬ್ಬಂದಿಗೆ ತಾಕೀತು ಮಾಡಿದರು. ಭೂಮಾಪನ ಸಮಸ್ಯೆಬಗ್ಗೆ ಸರ್ವೇ, ಕಂದಾಯ ಇಲಾಖಾಧಿಕಾರಿಗಳು ರೈತರಿಂದ ಹಣ ಪೀಕದೆ ನಿಯಮಾನುಸಾರ ಕೆಲಸ ಮಾಡಿ ಬಾಕಿ ಇರುವ 12 ಸಾವಿರ ಅರ್ಜಿಗಳನ್ನು ನಾಲ್ಕು ತಿಂಗಳೊಳಗೆ ಮುಗಿಸುವಂತೆ ಸೂಚಿಸಿದರು.
ಗ್ರಾಮದ ವ್ಯಾಪ್ತಿಯಲ್ಲಿ ಇನ್ನು 12 ಮಂದಿ ಕೊವಿಡ್‌ ಲಸಿಕೆ ಪಡೆಯಬೇಕಿದೆ. ಕೊವಿಡ್‌ ಲಸಿಕೆ ಬಗ್ಗೆ ಭಯಬೇಡ, ಗ್ರಾಮದಲ್ಲಿ ಎಲ್ಲರೂ ಲಸಿಕೆ ಹಾಕಿಸಿಕೊಂಡಾಗ ಮಾತ್ರ ಕೊರೊನ ಸೋಂಕಿನಿಂದ ಒಂದು ಹಂತಕ್ಕೆ ರಕ್ಷಣೆ ಪಡೆಯಬೇಕು. ಗ್ರಾಮಸ್ಥರು ಯಾರು ಲಸಿಕೆ ಹಾಕಿಸಿಕೊಂಡಿಲ್ಲವೊ ಅವರ ಮನವೊಲಿಸಿ ಲಸಿಕೆ ಹಾಕಿಸಿ, ಗ್ರಾಮದಲ್ಲಿ ಸಕ್ಕರೆ ಕಾಯಿಲೆ, ಬಿಪಿ ಕೆಲವರಿಗೆ ಇದೆ ಇದನ್ನು ಕಡೆಗಣಿಸಬೇಡಿ, ಕಾಲಕಾಲಕ್ಕೆ ಔಷಧ ಪಡೆದು ಆರೋಗ್ಯಕಾಪಾಡಿಕೊಳ್ಳಿ ಎಂದರು.
ಕಾರ್ಯಕ್ರಮ ಮುನ್ನದಿನ ಶುಕ್ರವಾರ ರಾತ್ರಿ ತಹಶೀಲ್ದಾರ್‌ ಅವರೊಂದಿಗೆ ಗ್ರಾಮ ವಾಸ್ತವ್ಯನಡೆಸಿದ ಶಾಸಕರಿಗೆ ಕಾಡುಗೊಲ್ಲರ ಸಂಪ್ರದಾಯದಂತೆ ಕರಿಕಂಬಳಿ ಹೊದಿಸಿ, ಪೇಟಕಟ್ಟಿ, ಕೋಲುನೀಡಿ ಕೋಲಾಟದ ಮೂಲಕ ಗ್ರಾಮಸ್ಥರು ಬರಮಾಡಿಕೊಂಡರು. ಶಾಸಕರು, ಗ್ರಾಮದ ಹಿರಿಯರ ಜೊತೆ ಕಾಡುಗೊಲ್ಲ ಸಂಪ್ರದಾಯದ ಬಗ್ಗೆ ಮಾಹಿತಿ ಪಡೆದರು. ಗ್ರಾಮಕ್ಕೆ ಸ್ಮಶಾನಕ್ಕೆ ಜಾಗ, ಗ್ರಾಮದ ಭೂರಹಿತರಿಗೆ ಭೂಮಿ ಮಂಜೂರು ಮಾಡಿಸಿಕೊಡುವ ಬೇಡಿಕೆ ಬಂದಿದ್ದು ಶೀಘ್ರವೆ ಬಗೆಹರಿಸುವ ಭರವಸೆ ನೀಡಿದರು.
ತಹಶೀಲ್ದಾರ್‌ ಮಹಾಬಲೇಶ್ವರ್‌, ಕಂದಾಯ ಇಲಾಖೆಯ ಸೇವೆಗಳಿಗೆ ಸಂಬಂಧಿಸಿದಂತೆ 40 ಅರ್ಜಿ ಸ್ವೀಕೃತವಾಗಿದ್ದು ಸುಮಾರು 20 ಅರ್ಜಿಗಳನ್ನು ಸ್ಥಳದಲ್ಲೆ ವಿಲೆ ಮಾಡಲಾಗಿದೆ. 16 ಮಾಸಾಶಸನ ನೀಡಿಲಾಗಿದೆ, ಬಾಕಿ ಇರುವ ಅರ್ಜಿಗಳನ್ನು ಶೀಘ್ರದಲ್ಲೆ ವಿಲೆಮಾಡಲಾಗುವುದು ಎಂದರು.
ನಡೇಮಾವಿನಪುರ ಗ್ರಾಪಂ ಅಧ್ಯಕ್ಷೆ ಯಶೋಧ, ಸದಸ್ಯರಾದ ಜಯದೀಪ್‌, ಗಂಗಾಧರಯ್ಯ, ಪ್ರಮುಖರಾದ ರಂಗಣ್ಣಗೌಡ, ಲೋಹಿತ್‌, ಗೋವಿಂದರಾಜು, ಚಿಕ್ಕರಾಮಯ್ಯ, ಶಿವಲಿಂಗಯ್ಯ, ನಾಗರಾಜು, ನಾಗಣ್ಣ, ಪುರಸಭೆ ಅಧ್ಯಕ್ಷ ನಾಗೇಂದ್ರ ಹಾಗೂ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!