ತುಮಕೂರು ಬಂದ್‌ ಗೆ ಕೆಲ ಸಂಘಟನೆಗಳ ವಿರೋಧ- ಶಾಂತಿ ಮಂತ್ರ ಜಪಿಸಿದ ಕಾಂಗ್ರೆಸ್

ಭಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆಗೆ ಆಕ್ರೋಶ ಹಿಂದು ಸಂಘಟನೆಗಳಿಂದ ತುಮಕೂರು ಬಂದ್

654

Get real time updates directly on you device, subscribe now.

ತುಮಕೂರು: ಭಜರಂಗ ದಳದ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವುದನ್ನು ಇಡೀ ಹಿಂದೂ ಸಮಾಜ ಖಂಡಿಸುತ್ತದೆ, ಉದ್ದೇಶ ಪೂರ್ವಕವಾಗಿ ನಡೆದ ಹಲ್ಲೆ ಖಂಡಿಸಿ ಅ.22 ರ ಶುಕ್ರವಾರ ತುಮಕೂರು ಬಂದ್‌ ಕರೆ ನೀಡಿದ್ದೇವೆ ಎಂದು ವಿಶ್ವ ಹಿಂದು ಪರಿಷತ್ ನ ತುಮಕೂರು ಜಿಲ್ಲಾಧ್ಯಕ್ಷ ಜಿ.ಕೆ.ಶ್ರೀನಿವಾಸ್‌ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಜರಂಗ ದಳದ ಕಾರ್ಯಕರ್ತರಾದ ಮಂಜು ಭಾರ್ಗವ್‌ ಮತ್ತು ಕಿರಣ್‌ ಮೇಲೆ ಉದ್ದೇಶ ಪೂರ್ವಕವಾಗಿ ಅನ್ಯ ಕೋಮಿನವರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ, ಹಲ್ಲೆಕೋರರನ್ನು ಪೊಲೀಸರು ಬಂಧಿಸಿದ್ದಾರೆ, ಆದರೆ ಹಲ್ಲೆ ಹಿಂದಿರುವವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಂಜು ಭಾರ್ಗವ್‌ ಮತ್ತು ಕಿರಣ್‌ ಹಿಂದುಗಳ ರಕ್ಷಣೆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು, ಅಲ್ಲದೆ ಗೋ ಸಾಗಣೆ ತಡೆದು ಗೋವುಗಳ ರಕ್ಷಣೆ ಮತ್ತು ಲವ್‌ ಜಿಹಾದ್ ಗೆ ಬ್ರೇಕ್‌ ಹಾಕಲು ಶ್ರಮಿಸಿ ಹಲವು ಹಿಂದು ಹೆಣ್ಣು ಮಕ್ಕಳನ್ನು ರಕ್ಷಿಸಿದ್ದಾರೆ, ಇದರಿಂದ ಇವರಿಗೆ ಹಲವು ಬೆದರಿಕೆ ಕರೆಗಳು ಬಂದಿವೆ, ಮೊನ್ನೆ ವೀಲಿಂಗ್‌ ನೆಪ ಮಾಡಿಕೊಂಡು ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಲಾಗಿದೆ ಎಂದು ತಿಳಿಸಿದರು.
ತುಮಕೂರು ಬಂದ್ ಗೆ ಎಲ್ಲಾ ಹಿಂದುಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ, ಆಟೋ ಚಾಲಕರು, ಅಂಗಡಿ ವ್ಯಾಪಾರಿಗಳು ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ, ಹೋಟೆಲ್‌ ಅಸೋಸಿಯೇಷನ್‌ ಕೂಡ ಬೆಂಬಲ ನೀಡಿದೆ, ನಾವು ಯಾವುದೇ ಬಸ್‌ ತಡೆಯಲ್ಲ, ಎಲ್ಲಾ ನಾಗರಿಕರು ಬಂದ್‌ ಯಶಸ್ವಿಗೊಳಿಸಲು ಸಹಕಾರ ನೀಡಬೇಕು ಎಂದು ಕೋರಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಮಾತನಾಡಿ, ಭಾರತ ದೇಶದಲ್ಲಿ ಹಿಂದುಗಳ ಮೇಲೆ ನಿರಂತರವಾಗಿ ಹಲ್ಲೆ ಮಾಡಲಾಗುತ್ತಿದೆ, ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ, ತುಮಕೂರಿನಲ್ಲಿ ಭಜರಂಗದಳದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಲಾಗಿದೆ, ಸಮಾಜ ಘಾತುಕ ಶಕ್ತಿಗಳನ್ನು ಹೊಸಕಿ ಹಾಕಬೇಕಿದೆ ಎಂದು ತಿಳಿಸಿದರು.
ವೀಲಿಂಗ್‌ ಮಾಡುವುದು ಅಪರಾಧ, ಇದು ಟೆರರಿಸಂಗೂ ಮಿಗಿಲಾದುದು, ವೀಲಿಂಗ್‌ ಮಾಡುವ ಮೂಲಕ ಅಮಾಯಕರ ಪ್ರಾಣಕ್ಕೆ ಕಂಟಕವಾಗುತ್ತಿದ್ದಾರೆ, ವೀಲಿಂಗ್‌ ಮಾಡುವವರನ್ನು ಗುಂಡಿಟ್ಟು ಹೊಡೆಯಬೇಕು, ಇಂಥ ಶಕ್ತಿಗಳ ನಿಗ್ರಹಕ್ಕಾಗಿ ತುಮಕೂರು ಬಂದ್‌ ಅನಿವಾರ್ಯ, ಬಂದ್ ಗೆ ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ಹಿಂದುಪರ ಸಂಘಟನೆಗಳ ಮುಖಂಡರಾದ ಚಂದ್ರಶೇಖರ್‌, ದಯಾನಂದ, ಪ್ರತಾಪ್‌, ರೇಣುಕಾ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

Get real time updates directly on you device, subscribe now.

Comments are closed.

error: Content is protected !!