ಸಿದ್ದಗಂಗಾ ಮಠದಲ್ಲಿ ಕನ್ನಡದ ಕಂಪು- ಕನ್ನಡ ಗೀತೆಗಳಿಗೆ ಧ್ವನಿಯಾದ ಸಾವಿರಾರು ವಿದ್ಯಾರ್ಥಿಗಳು

ಕನ್ನಡ ಉಸಿರಾಡುವ ಭಾಷೆಯಾಗಲಿ: ಸ್ವಾಮೀಜಿ

137

Get real time updates directly on you device, subscribe now.

ತುಮಕೂರು: ಕನ್ನಡ ಮನಸುಗಳನ್ನು ಒಟ್ಟುಗೂಡಿಸಲು ಮಠದಲ್ಲಿ ಗುರುವಾರ ಸಾವಿರಾರು ವಿದ್ಯಾರ್ಥಿಗಳ ಕಂಠದಿಂದ ಮೊಳಗಿದ ಒಕ್ಕೋರಲಿನ ಸುಮಧುರ ಕನ್ನಡ ಗೀತೆಗಳು ಕನ್ನಡಿಗರನ್ನಲ್ಲದೆ ಇತರೆ ಭಾಷಿಕರಲ್ಲೂ ಕನ್ನಡದ ಮೇಲೆ ಪ್ರೀತಿ ಮೂಡುವಂತೆ ಮಾಡಿತು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನ ಕಾರ್ಯಕ್ರಮದಡಿ ಶ್ರೀಸಿದ್ಧಲಿಂಗೇಶ್ವರ ವೇದ ಸಂಸ್ಕೃತಿ ಮಹಾಪಾಠ ಶಾಲಾ ಮುಂಭಾಗ ಇರುವ ಶ್ರೀಉದ್ದಾನೇಶ್ವರ ವೇದಿಕೆಯಲ್ಲಿ ಆಯೋಜಿಸಿದ್ದ ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ಶ್ರೀಮಠದ ಸುಮಾರು 8000 ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಶಿಕ್ಷಕ ವೃಂದ, ಸಿಬ್ಬಂದಿ, ಮಠದ ಭಕ್ತಾದಿಗಳು, ಅಧಿಕಾರಿಗಳು ಧ್ವನಿಗೂಡಿಸಿ ಡಾ.ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ಡಾ.ಕೆ.ಎಸ್‌.ನಿಸಾರ್‌ ಅಹಮ್ಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಸೇರಿದಂತೆ ಮೂರು ಗೀತೆಗಳನ್ನು ಹಾಡಿದರು.
ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಹಾಗೂ ಸ್ವರಸಿಂಚನ ಸುಗಮ ಸಂಗೀತ ಜಾನಪದ ಕಲಾ ಸಂಘದ ಗಾಯಕ ಮಲ್ಲಿಕಾರ್ಜುನ ಕೆಂಕೆರೆ ನೇತೃತ್ವದಲ್ಲಿ ಮೂಡಿ ಬಂದ ಗಾಯನ ಕಾರ್ಯಕ್ರಮ ಕನ್ನಡಿಗರಲ್ಲಿದ್ದ ಭಾಷಾಭಿಮಾನ ಇಮ್ಮಡಿಗೊಳಿಸಿತು. ಮಲ್ಲಿಕಾರ್ಜುನ ಕೆಂಕೆರೆ ಮತ್ತು ಸಂಗಡಿಗರು ಪ್ರಸ್ತುಪಡಿಸಿದ ಗೀತಗಾಯನಕ್ಕೆ ನೆರೆದಿದ್ದವರೆಲ್ಲ ಧ್ವನಿಗೂಡಿಸಿದರು.
ಪ್ರತಿ ಗೀತೆಗಳ ನಂತರ ವಿದ್ಯಾರ್ಥಿಗಳು ಸಿರಿಗನ್ನಡಂ ಗೆಲ್ಗೆ- ಸಿರಿಗನ್ನಡಂ ಬಾಳ್ಗೆ, ಕನ್ನಡಕ್ಕಾಗಿ ನಾವು, ಮಾತಾಡ್‌ ಮಾತಾಡ್‌ ಕನ್ನಡ ಘೋಷವಾಕ್ಯ ಕೂಗುವ ಮೂಲಕ ಕನ್ನಡ ಕಹಳೆ ಮೊಳಗಿಸಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅವರು ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ, ಕನ್ನಡದಲ್ಲೇ ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂದು ಪಣತೊಡುತ್ತೇನೆ. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ, ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆ ಉಳಿಸಲು ಕಟಿಬದ್ಧನಾಗಿರುತ್ತೇನೆ ಎಂದು ಸಂಕಲ್ಪ ಮಾಡುತ್ತೇನೆ ಎಂಬ ಪ್ರತಿಜ್ಞಾವಿಧಿ ಬೋಧಿಸಿದರು.
ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆಯನ್ನು ಮುನ್ನಡೆಸುವ ನಿಟ್ಟಿನಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನ್ನಡವು ರಾಜ್ಯದ ಜನಭಾಷೆಯಾಗಬೇಕು. ಕನ್ನಡವು ಸಾಮಾಜಿಕ, ಶೈಕ್ಷಣಿಕ, ಆಡಳಿತ ಸೇರಿದಂತೆ ಎಲ್ಲಾ ಕಡೆಯಿಂದ ಮುನ್ನುಡಿಗೆ ಬರಬೇಕೆಂಬ ಆಶಯದಿಂದ ಸರ್ಕಾರದಿಂದ ಇಂತಹ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಿದ್ಧಲಿಂಗ ಸ್ವಾಮೀಜಿ 66ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಧ್ವನಿಯನ್ನು ಎಲ್ಲೆಡೆ ಮೊಳಗಿಸಲು ರಾಜ್ಯಾದ್ಯಂತ ಹಮ್ಮಿಕೊಂಡಿರುವ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮದ ಪ್ರಯೋಗ ವಿನೂತನವಾಗಿದೆ. ಭಾರತೀಯರಾದ ನಾವೆಲ್ಲಾ ಪ್ರಾದೇಶಿಕತೆ ಉಳಿಸಿಕೊಂಡು ರಾಷ್ಟ್ರೀಯತೆ ಬೆಳೆಸಬೇಕು, ಈ ನಿಟ್ಟಿನಲ್ಲಿ ಪ್ರಾದೇಶಿಕ ಹಾಗೂ ಮಾತೃಭಾಷೆಯಾದ ಕನ್ನಡವನ್ನು ಜನ ಮಾನಸದಲ್ಲಿ ಶಾಶ್ವತಗೊಳಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಕರ್ನಾಟಕದಲ್ಲಿ ಆಡಳಿತ ಭಾಷೆ, ಆಡುವ ಭಾಷೆ ಕನ್ನಡವಾಗಬೇಕೆಂಬ ಬಹಳ ವರ್ಷಗಳ ಕನ್ನಡಿಗರ ಕೂಗಿಗೆ ಈ ಅಭಿಯಾನ ಉತ್ತರವಾಗಬೇಕು, ನಾವೆಲ್ಲರೂ ಕನ್ನಡದ ಮೇಲೆ ಪ್ರೀತಿ ಬೆಳೆಸಿಕೊಳ್ಳಬೇಕು, ಎಲ್ಲೇ ಇರಲಿ, ಯಾವುದೇ ಭಾಷೆ ಕಲಿಯಲಿ, ಉಸಿರಾಡುವ ಭಾಷೆ ಕನ್ನಡವಾಗಬೇಕು ಎಂದು ತಿಳಿಸಿದರಲ್ಲದೆ ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಕೆ ಮಾಡಿದರೆ ಭಾಷೆಗೆ ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದು ಕರೆ ನೀಡಿದರು.
ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ವಿದೇಶಿಗರಿಗೂ ಕನ್ನಡ ಭಾಷೆ, ಸಂಸ್ಕೃತಿ ಕಲಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರಲ್ಲದೆ ಈಗಿನಿಂದಲೇ ಮಕ್ಕಳ ಹೃದಯದಲ್ಲಿ ಕನ್ನಡ ಮಂತ್ರ ಬೀಜವನ್ನು ಬಿತ್ತಿದರೆ ಮುಂದೊಂದು ದಿನ ಹೆಮ್ಮರವಾಗಿ ಬೆಳದು ಭಾಷೆ ಬೆಳೆಯುತ್ತದೆ. ಈ ವಿಶೇಷ ಕಾರ್ಯಕ್ರಮ ಕನ್ನಡಿಗರನ್ನಷ್ಟೇ ಅಲ್ಲದೆ ಇತರೆ ಭಾಷಿಕರಿಗೂ ಕನ್ನಡ ಮಾತನಾಡಲು ಪ್ರೇರಣೆಯಾಗಬೇಕೆಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್‌ ಮಾತನಾಡಿ, ನಾಡು ನುಡಿಯ ಏಳಿಗೆಗಾಗಿ ಕನ್ನಡಕ್ಕಾಗಿ ನಾವು ಅಭಿಯಾನದ ಪ್ರಯುಕ್ತ ಆಯೋಜಿಸಲಾಗಿರುವ ಸುಮಧುರ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮವನ್ನು ರಾಜ್ಯೋತ್ಸವ ಸಂದರ್ಭದಲ್ಲಿ ಹಮ್ಮಿಕೊಂಡಿರುವುದು ವಿಶೇಷವಾಗಿದೆ. ಶ್ರೀ ಮಠದ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಕನ್ನಡ ಗೀತೆಗಳನ್ನು ಹಾಡುವ ಅವಕಾಶ ನನಗೆ ಮೈನವಿರೇಳಿಸಿದ ಅನುಭವ ನೀಡಿತು ಎಂದರು.
ಮಾತೃಭಾಷೆಯಿಂದ ಮಕ್ಕಳ ಮನೋವಿಕಾಸ ಸಾಧ್ಯವೆಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ, ಇಂತಹ ಕಾರ್ಯಕ್ರಮಗಳಿಂದ ಎಲ್ಲರಲ್ಲೂ ಭಾಷಾಭಿಮಾನ ಮೂಡಲು ಸಾಧ್ಯವಾಗುತ್ತದೆ, ಸುಮಾರು 2000 ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಕನ್ನಡ ಭಾಷೆ ಶ್ರೀಮಂತ ಭಾಷೆ, ಇತರ ಭಾಷೆಗಿಂತ ಹೃದಯ ಮುಟ್ಟುವ ಶಕ್ತಿ ಕನ್ನಡಕ್ಕಿದ್ದು, ಪ್ರತಿಯೊಬ್ಬರೂ ಕನ್ನಡ ಮಾತನಾಡಬೇಕು. ನೂರು ಭಾಷೆ ಕಲಿತರೂ ಆಡುವ ಭಾಷೆ ಮಾತ್ರ ಕನ್ನಡವಾಗಬೇಕೆಂದು ಅಭಿಪ್ರಾಯಪಟ್ಟರಲ್ಲದೆ ಈ ಅಭಿಯಾನವು ನಾಡಿನ ಜನರಲ್ಲಿ ಬಹುದೊಡ್ಡ ಬದಲಾವಣೆ ತರಲಿದೆ ಎಂದು ಆಶಿಸಿದರು.
ಜಾಗತಿಕ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ, ವಿದೇಶದಲ್ಲಿ ನೆಲೆಸಿರುವ ಕನ್ನಡಿಗರೂ ಸಹ ತಮ್ಮ ಸುತ್ತಮುತ್ತಲಿನ ಮಕ್ಕಳಿಗೆ ಕನ್ನಡ ಕಲಿಸುತ್ತಿರುವ ನಿದರ್ಶನಗಳಿವೆ, ಬ್ಯಾಂಕಿಂಗ್‌ ಮತ್ತು ರೈಲ್ವೆ ಇಲಾಖೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡಬೇಕೆಂದರು.
ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಹಾಪೂರ್‌ವಾಡ್‌, ಉಪವಿಭಾಗಾಧಿಕಾರಿ ಅಜಯ್‌, ಡಿಡಿಪಿಐ ಸಿ.ನಂಜಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್‌, ಸಾವಿರಾರು ವಿದ್ಯಾರ್ಥಿಗಳು, ಅಧಿಕಾರಿಗಳು, ಶಿಕ್ಷಕರು, ಮಠದ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದೇ ರೀತಿ ನಗರದ ಸರ್ಕಾರಿ ಎಂಪ್ರೆಸ್‌ ಕಾಲೇಜು, ಜಿಲ್ಲಾ ಆಸ್ಪತ್ರೆ ಸಭಾಂಗಣ, ತುಮಕೂರು ವಿಶ್ವವಿದ್ಯಾಲಯದ ಸಭಾಂಗಣ, ಟೌನ್‌ ಹಾಲ್‌ ವೃತ್ತದ ಬಳಿಯ ಸಿದ್ದಗಂಗಾ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಆಸ್ಪತ್ರೆ ಮುಂಭಾಗದ ಸಿದ್ದಗಂಗಾ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಪ್ರಥಮ ದರ್ಜೆ ಮಹಿಳಾ ಕಾಲೇಜು, ಟೌನ್‌ ಹಾಲ್‌ ವೃತ್ತದ ಬಳಿಯ ಸೇಂಟ್‌ ಮೇರಿಸ್‌ ಆಂಗ್ಲ ಶಾಲೆ, ಕ್ಯಾತ್ಸಂದ್ರ ಬಳಿಯ ಶ್ರೀಚೈತನ್ಯ ಟೆಕ್ನೋ ಶಾಲೆ, ಬಿ.ಹೆಚ್‌.ರಸ್ತೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ರೈಲ್ವೆ ಸ್ಟೇಷನ್‌ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರೌಢಶಾಲಾ ಮೈದಾನದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸಪ್ತಗಿರಿ ಬಡಾವಣೆಯಲ್ಲಿನ ಸಪ್ತಗಿರಿ ಪದವಿ ಪೂರ್ವ ಕಾಲೇಜು ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ, ಕಾಲೇಜು, ಗಡಿ ಪ್ರದೇಶಗಳಲ್ಲಿ, ಸರ್ಕಾರಿ ಕಚೇರಿಗಳ ಮುಂಭಾಗ ಸಾಮೂಹಿಕ ಗೀತ ಗಾಯನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

Get real time updates directly on you device, subscribe now.

Comments are closed.

error: Content is protected !!