ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ವಿರುದ್ಧ ಕ್ರಮಕ್ಕೆ ಆಗ್ರಹ

242

Get real time updates directly on you device, subscribe now.

ಮಧುಗಿರಿ: ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 6 ವರ್ಷಗಳಿಂದ ವಾರ್ಷಿಕ ಮತ್ತು ಮಾಸಿಕ ಸಭೆಗಳನ್ನು ನಡೆಸದೆ ಇರುವುದು ಮತ್ತು ಕಾರ್ಯದರ್ಶಿ ಹಣ ದುರುಪಯೋಗ ಪಡಿಸಿಕೊಂಡಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಮುಂದೆ ಹಾಲು ಉತ್ಪಾದಕರು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ದೊಡ್ಡೇರಿ ಹೋಬಳಿ ಕಾರ್ಪೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಳೆದ 5 ರಿಂದ 6 ವರ್ಷಗಳಿಂದ ವಾರ್ಷಿಕ ಮಹಾಸಭೆ ನಡೆಸಿಲ್ಲ ಮತ್ತು ಸಹಕಾರ ಸಂಘದ ಬೈಲ ನಿಯಮದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರನ್ನು ಸದಸ್ಯರನ್ನಾಗಿ ತೆಗೆದುಕೊಂಡಿಲ್ಲ, ಹಾಲಿ ಕಾರ್ಯ ನಿರ್ವಹಿಸುತ್ತಿದ್ದ, ಕಾರ್ಯದರ್ಶಿ ಯಾವುದೇ ಲೆಕ್ಕ ಪತ್ರ ನೀಡದೆ ಇದ್ದರು, ಕಾನೂನು ಬಾಹಿರವಾಗಿ ನೇಮಿಸಿಕೊಳ್ಳಲಾಗಿದೆ. ಉನ್ನತ ಶಿಕ್ಷಣ ಪಡೆದ ಮಳೆಯೊಬ್ಬರು ಕಾರ್ಯದರ್ಶಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು, ಪ್ರೌಢಶಿಕ್ಷಣ ಪಡೆದ ವ್ಯಕ್ತಿಯೊಬ್ಬರನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ.
ಹಾಲಿ ಕಾರ್ಯದರ್ಶಿ 5 ಲಕ್ಷದ 80 ಸಾವಿರ ಹಣ ದುರುಪಯೋಗ ಪಡೆಸಿಕೊಂಡಿರುವುದು ಅಧಿಕಾರಿಗಳ ತನಿಖೆಯಿಂದ ತಿಳಿದು ಬಂದಿದ್ದು, ಸಂಬಂಧಪಟ್ಟ ಕಾರ್ಯದರ್ಶಿಗಳಿಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಹಕಾರ ಸಂಘಗಳ ಉಪನಿಬಂಧಕರಿಗೆ ಮತ್ತು ಸಹಕಾರ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
ಸಹಕಾರ ಸಂಘಗಳ ನಿಯಮದಂತೆ ವಾರ್ಷಿಕ ಮಹಾಸಭೆ ನಡೆಸದೆ ಇದ್ದರೆ, ಸಂಬಂಧಪಟ್ಟ ಕಾರ್ಯದರ್ಶಿಗೆ ದಂಡ ಹಾಕುವ ನಿಯಮವಿದೆ. ಆದರೆ ಹಾಲು ಒಕ್ಕೂಟದ ಅಧಿಕಾರಿಗಳ ಅಸಡ್ಡೇ ಮತ್ತು ನಿರ್ಲಕ್ಷ ಮನೋಭಾವದಿಂದ ಕಾರ್ಯದರ್ಶಿಯ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ ಎಂದು ದೂರಿದ್ದಾರೆ.
ಪ್ರತಿಭಟನೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಸಿ.ದೇವಣ್ಣ, ರಾಮಚಂದ್ರಪ್ಪ, ಗೋವಿಂದರಾಜು, ಹಾಲು ಉತ್ಪಾದಕ ತಿಪ್ಪೇಸ್ವಾಮಿ, ನಿಂಗಪ್ಪ, ರಂಗನಾಥಪ್ಪ, ಶಿವಣ್ಣ, ಹರೀಶ್‌, ನಾಗರಾಜು, ಹನುಮಂತರಾಯಪ್ಪ, ಜಯರಾಮಪ್ಪ, ಚಿಕ್ಕಣ್ಣ, ನಾಗರಾಜು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!