ಹೈಕಮಾಂಡ್‌ ಯಾರಿಗೆ ಟಿಕೆಟ್‌ ನೀಡಿದ್ರೂ ನಮ್ಮದೆ ಗೆಲುವು: ಪರಂ

ಎಂ.ಎಲ್.ಸಿ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಗೆ ಗೆಲುವು

211

Get real time updates directly on you device, subscribe now.

ತುಮಕೂರು: ಮುಂಬರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ, ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಮುಖಂಡರಿಂದ ರಾಜ್ಯ ಉಸ್ತುವಾರಿಯಾಗಿರುವ ರಣಜಿತ್‌ ಸುರ್ಜೇವಾಲ ಅವರು ಮಾಹಿತಿ ಸಂಗ್ರಹಿಸಿದ್ದು, ಹೈಕಮಾಂಡ್‌ ಯಾರಿಗೆ ಟಿಕೆಟ್‌ ನೀಡಿದರೂ ಪಕ್ಷ ಗೆಲುವು ಸಾಧಿಸಲಿದೆ ಎಂದು ಹೇಳಿದರು.
ಜಿಲ್ಲೆಯಿಂದ ಚುನಾವಣೆಗೆ ಸ್ಪರ್ಧಿಸಲು ಯಲಚವಾಡಿ ನಾಗರಾಜು, ಇಂತಿಯಾಜ್‌, ಕೆಂಚಮಾರಯ್ಯ, ರಾಜೇಂದ್ರ ಮತ್ತು ಮಾಜಿ ಶಾಸಕ ಆರ್‌.ನಾರಾಯಣ್‌ ಅವರು ಅರ್ಜಿ ಸಲ್ಲಿಸಿದ್ದು ಶೀಘ್ರ ಹೈಕಮಾಂಡ್‌ ಆಯ್ಕೆ ಪಟ್ಟಿ ಪ್ರಕಟಿಸಲಿದೆ ಎಂದು ಹೇಳಿದರು.
ಕಾಂಗ್ರೆಸ್‌ ಪಕ್ಷದ ಆಡಳಿತ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಕ್ರಮ ಮತ್ತು ಪಕ್ಷದ ಕಾರ್ಯಕ್ರಮದ ಬಗ್ಗೆ ಜನರಿಗೆ ತಿಳಿಸಲು ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.
ಸ್ವತಂತ್ರ ನಂತರ ದೇಶಕ್ಕೆ ಕಾಂಗ್ರೆಸ್‌ ನೀಡಿರುವ ಕೊಡುಗೆ ಬಗ್ಗೆ ಜನರಿಗೆ ತಿಳಿಸುವುದು ಅನಿವಾರ್ಯವಾಗಿದೆ, ಬಿಜೆಪಿ ಜನರಿಗೆ ತಪ್ಪು ಮಾಹಿತಿ ನೀಡುವ ಅಭಿಯಾನ ಮಾಡುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದು, ಜನರಿಗೆ ಸತ್ಯ ತಿಳಿಸುವ ನಿಟ್ಟಿನಲ್ಲಿ ಜನಜಾಗೃತಿ ಅಭಿಯಾನ ನಡೆಯಲಿದೆ ಎಂದರು.
ನ.21 ರಂದು ರಾಜ್ಯದಲ್ಲೇ ಮೊದಲ ಬಾರಿಗೆ ಜನಜಾಗೃತಿ ಅಭಿಯಾನ ನಡೆಯಲಿದ್ದು, ಪ್ರತಿ ಬ್ಲಾಕ್‌ ಮತ್ತು ಗ್ರಾಮಕ್ಕೆ ಪಕ್ಷದ ಸಾಧನೆ ತಿಳಿಸುವ ನಿಟ್ಟಿನಲ್ಲಿ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಜನಜಾಗೃತಿ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ ಸೇರಿದಂತೆ ರಾಜ್ಯ, ಕೇಂದ್ರದ ಪಕ್ಷ ಕಾರ್ಯಕರ್ತರು ಭಾಗವಹಿಸಲಿದ್ದು, ನ.21 ರಂದು ಟೌನ್‌ ಹಾಲ್ ನಿಂದ ಗಾಜಿನ ಮನೆಯವರೆಗೆ ಪಕ್ಷದ ಮುಖಂಡರ ಪಾದಯಾತ್ರೆ ನಡೆಯಲಿದ್ದು, ನಂತರ ಗಾಜಿನಮನೆಯಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಕೇಂದ್ರ ನಾಯಕರು ಮಾತನಾಡಲಿದ್ದಾರೆ ಎಂದರು.
ರಾಜಕೀಯ ಪಕ್ಷ ಕಾರ್ಯಕ್ರಮ ಇದಾಗಿದ್ದು, ನೀತಿ ಸಂಹಿತೆ ಅಡ್ಡಿಬರುವುದಿಲ್ಲ, ಜಿಲ್ಲಾಡಳಿತ ನೀಡುವ ನಿಬಂಧನೆಗೆ ಒಳಗೆ ಸಭೆ ನಡೆಸುವುದಾಗಿ ಹೇಳಿದ ಅವರು ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ವಿಚಾರದಲ್ಲಿ ಪಕ್ಷವೇ ಮುಂದಿದ್ದು, ಬಿಜೆಪಿ ಪೈಪೋಟಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದರು.
ಮುಂದಿನ ವರ್ಷ ಸೆ.21 ರಂದು ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ಅದಕ್ಕಿಂತ ಮುಂಚೆಯೇ ಬ್ಲಾಕ್‌ ಕಾಂಗ್ರೆಸ್‌, ಜಿಲ್ಲಾ ಕಾಂಗ್ರೆಸ್‌, ಪ್ರದೇಶ ಕಾಂಗ್ರೆಸ್‌ ಚುನಾವಣೆ ನಡೆಯಲಿದ್ದು, ಅದಕ್ಕಿಂತ ಮುಂಚೆ ಪಕ್ಷದ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.
ಡಾ.ಜಿ.ಪರಮೇಶ್ವರ್‌, ಟಿ.ಬಿ.ಜಯಚಂದ್ರ, ಷಡಕ್ಷರಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ, ರಫೀಕ್‌ ಅಹ್ಮದ್‌, ಶಫಿ ಅಹಮದ್‌, ಮುರುಳೀಧರ ಹಾಲಪ್ಪ, ಹೊನ್ನಗಿರಿಗೌಡ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!