ಯುವಕರಲ್ಲಿ ಕಲೆ, ದೇಸಿ ಸಂಸ್ಕೃತಿಯತ್ತ ಆಸಕ್ತಿ ಮೂಡಿಸಿ: ಡಾ.ವೀರಭದ್ರಯ್ಯ

ಒತ್ತಡ ದೂರ ಮಾಡಲು ಸಂಗೀತ ಮದ್ದು

356

Get real time updates directly on you device, subscribe now.

ತುಮಕೂರು: ಇಂದಿನ ಆಧುನಿಕ ಜೀವನ ಶೈಲಿಯಿಂದ ಉಂಟಾಗುವ ಮಾನಸಿಕ ಒತ್ತಡಗಳಿಂದ ಹೊರಗೆ ಬರಲು ಸಂಗೀತ ಉತ್ತಮ ಸಾಧನವಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಅಭಿಪ್ರಾಯಪಟ್ಟರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ವರ ಸಿಂಚನ ಸುಗಮ ಸಂಗೀತ ಜನಪದ ಕಲಾಸಂಸ್ಥೆ ಹಾಗೂ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಯುವ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಗೀತಕ್ಕೆ ಎಂಥ ನೋವನ್ನಾದರೂ ಕಡಿಮೆ ಮಾಡುವ ಅಪಾರವಾದ ಶಕ್ತಿಯಿದೆ. ಸಾಮಾಜಿಕ ಜಾಲತಾಣಗಳ ಬಳಕೆಯಿಂದ ದೈಹಿಕ ಚಟುವಟಿಕೆಗಳನ್ನೇ ಮರೆತಿರುವ ಇಂದಿನ ಯುವಕರಲ್ಲಿ ಕಲೆ ಮತ್ತು ದೇಸಿ ಸಂಸ್ಕೃತಿ ಬಗೆಗಿನ ಆಸಕ್ತಿ ಹೆಚ್ಚುವಂತೆ ಮಾಡುವುದು ಅಗತ್ಯವಾಗಿದೆ ಎಂದರು.
ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರತಿ ವರ್ಗಕ್ಕೂ ವಿಶೇಷವಾಗಿ ಯುವ ಸಮುದಾಯವನ್ನು ಕಲಾ ಕ್ಷೇತ್ರದೆಡೆಗೆ ಕರೆತರುವ ಸದುದ್ದೇಶದಿಂದ ಯುವ ಸೌರಭ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಅದರ ಸದುಪಯೋಗ ಪಡೆದುಕೊಂಡು ಕಲೆ ಪ್ರೋತ್ಸಾಹಿಸಬೇಕು ಎಂದರು.
ಜಿಲ್ಲಾಸ್ಪತ್ರೆಯ ಹಿರಿಯ ನೇತ್ರತಜ್ಞ ಡಾ.ದಿನೇಶ್‌ ಕುಮಾರ್‌ ಮಾತನಾಡಿ, ಆಧುನಿಕ ಜೀವನ ಶೈಲಿಗೆ ಮಾರು ಹೋಗಿರುವ ಯುವ ಪೀಳಿಗೆಯಲ್ಲಿ ಕಲೆ, ಸಾಹಿತ್ಯ, ಜಾನಪದ, ಸಂಗೀತದ ಮೂಲಕ ದೇಸಿ ಭಾವನೆ ಬಿತ್ತಲು ಇಂತಹ ಕಾರ್ಯಕ್ರಮಗಳಿಂದ ಸಾಧ್ಯವಾಗುತ್ತದೆ, ಜೀವನೋಪಾಯ ಹಾಗೂ ಜೀವನ ಕೌಶಲ್ಯ ಒಂದಕ್ಕೊಂದು ಪೂರಕವಾಗಿದ್ದು, ಜೀವನ ಶೈಲಿ ಉತ್ತಮವಾಗಿಸಿಕೊಳ್ಳಲು ನಮ್ಮಲ್ಲಿ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ವಿಶ್ವೇಶ್ವರ ಬಿ. ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ ಮಾನವನ ಜೀವನದ ಅವಿಭಾಜ್ಯ ಅಂಗವಾಗಿವೆ, ಕಲೆ ಮಾನವನ ಜೀವನವನ್ನು ವಿಕಸನದತ್ತ ಕೊಂಡೊಯ್ಯುವ ಸಾಧನವಾಗಿದೆ, ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ, ಮಾನಸಿಕವಾಗಿ ಸದೃಢರಾಗಲು ಸಂಗೀತ ಸಹಕಾರಿ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ, ವೃತ್ತಿ ಹಾಗೂ ಪ್ರವೃತ್ತಿಗಳೆರಡನ್ನು ಸರಿಯಾದ ಮಾರ್ಗದಲ್ಲಿ ರೂಢಿಸಿಕೊಂಡಲ್ಲಿ ಜೀವನದ ಸಾರ್ಥಕತೆ ಸಾಧ್ಯ ಎಂದು ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಹಾಗೂ ಪತ್ರಕರ್ತ ಉಗಮ ಶ್ರೀನಿವಾಸ್‌ ಮಾತನಾಡಿ, ಕೊರೊನಾ 2ನೇ ಅಲೆಯ ನಂತರ ಸಾಂಸ್ಕೃತಿಕ ಕ್ಷೇತ್ರ ಗರಿಗೆದರಿದೆ. ಜಿಲ್ಲೆಯು ಜಾನಪದ ಕಲೆ ಹಾಗೂ ಪೌರಾಣಿಕ ರಂಗಭೂಮಿಯಿಂದ ಎಲ್ಲರ ಗಮನ ಸೆಳೆದಿದೆ. ಡಾ.ಗುಬ್ಬಿ ವೀರಣ್ಣರ ಶ್ರಮದಿಂದ ಕೇವಲ ಮಾತುಗಳಲ್ಲಿ ಇದ್ದ ಆಧುನಿಕ ನಾಟಕ ಪ್ರಕಾರವು ಮುನ್ನೆಲೆಗೆ ಬಂದು ವಿಶೇಷ ಸ್ಥಾನಮಾನ ಗಿಟ್ಟಿಸಿಕೊಂಡಿದೆ ಎಂದರಲ್ಲದೆ ಬಯಲು ಸೀಮೆ ರಂಗಾಯಣವನ್ನು ಜಿಲ್ಲೆಯಲ್ಲಿ ಸ್ಥಾಪಿಸಲು ಪ್ರತಿಯೊಬ್ಬ ಕಲಾಸಕ್ತರು ಒಕ್ಕೋರಲಿನಿಂದ ಕೈಜೋಡಿಸಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಶ್ರೀನಿವಾಸ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕರಲ್ಲಿ ಅಡಗಿರುವ ಪ್ರತಿಭೆಯ ಮೇಲೆ ಬೆಳಕು ಚೆಲ್ಲಲು ಸರ್ಕಾರವು ಯುವ ಸೌರಭ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಯುವಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ನಂತರ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಮೋದ್‌, ಮನ್ವಿತ, ಸುಧೀರ್‌ ಹಾಗೂ ಪವನ್‌ ತಂಡವು ಪ್ರಸ್ತುತಪಡಿಸಿದ ವಾದ್ಯ ಸಂಗೀತದಲ್ಲಿ ಕರ್ನಾಟಕ ಸಂಗೀತದ ನವರಾಗ ಮಾಲಿಕೆ, ಹಿಂದೂಸ್ಥಾನಿ ಸಂಗೀತ ಶೈಲಿಯಲ್ಲಿ ವಚನ, ಸುಭದ್ರ ನಾಟಕದ ಪೌರಾಣಿಕ ರಂಗಗೀತೆ, ಚಲನಚಿತ್ರ ಗೀತೆಗಳನ್ನು ಪ್ರೇಕ್ಷಕರು ಕೇಳಿ ಆನಂದಿಸಿದರು.
ನಂತರ ಕಾವ್ಯ ಮತ್ತು ತಂಡದಿಂದ ಜನಪದ ಹಾಗೂ ಭಾವಗೀತೆ ಗಾಯನ, ನೀಲಾಲಯ ನೃತ್ಯ ಕೇಂದ್ರದಿಂದ ಭರತ ನಾಟ್ಯ ನೃತ್ಯ ರೂಪಕ, ಕೆಂಪಮ್ಮ ಮತ್ತು ತಂಡದಿಂದ ಮಹಿಳಾ ಕಂಸಾಳೆ, ತುರುವೇಕೆರೆ ಸತೀಶ್‌ ಮತ್ತು ತಂಡದಿಂದ ಪೂಜಾ ಕುಣಿತ ಹಾಗೂ ಕುದೂರಿನ ಗೋವಿಂದರಾಜು ಮತ್ತು ತಂಡದಿಂದ ಗೊಂಬೆ ಕುಣಿತ, ಜಿಲ್ಲಾಸ್ಪತ್ರೆಯ ಶುಶ್ರೂಷ ಶಾಲೆಯ ವಿದ್ಯಾರ್ಥಿಗಳಿಂದ ಸಮೂಹ ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೇಲ್ವಿಚಾರಕ ಡಿ.ವಿ.ಸುರೇಶ್‌ ಕುಮಾರ್, ತುಮಕೂರು ವಿವಿಯ ಲಕ್ಷ್ಮೀರಂಗಯ್ಯ ಹಾಗೂ ಜಿಲ್ಲಾಸ್ಪತ್ರೆ ಶುಶ್ರೂಷ ಶಾಲೆ ವಿದ್ಯಾರ್ಥಿಗಳು, ಕಲಾಸಕ್ತರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!