ಕಾಡುಗೊಲ್ಲ ನಿಗಮದ ಹೆಸರು ಬದಲಿಸಿದ್ರೆ ಸುಮ್ಮನಿರಲ್ಲ

304

Get real time updates directly on you device, subscribe now.

ಕುಣಿಗಲ್‌: ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದೆಂದು ಆಗ್ರಹಿಸಿ ತಾಲೂಕು ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಬುಧವಾರ ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ, ಚಿಕ್ಕಣ್ಣಹಟ್ಟಿ ಕ್ಷೇತ್ರದ ಧರ್ಮದರ್ಶಿ ಡಾ.ಸಿ.ಪಾಪಣ್ಣನವರ ನೇತೃತ್ವದಲ್ಲಿ ತಾಲೂಕು ಕಚೇರಿ ಆವರಣದಲ್ಲಿ ಸಂಘಟಿತರಾದ ಪದಾಧಿಕಾರಿಗಳು ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಡಾ.ಸಿ.ಪಾಪಣ್ಣ, ಸ್ವಾತಂತ್ರ ಬಂದು 75 ವರ್ಷ ಕಳೆದರೂ ಕಾಡುಗೊಲ್ಲರು ಇನ್ನು ಒಬಿಸಿ ಪಟ್ಟಿಗೆ ಸೇರಿಲ್ಲ, ಇದು ಜನಾಂಗಕ್ಕೆ ಮಾಡಿದ ಅನ್ಯಾಯವಾಗಿದೆ, ರಾಜ್ಯ ಸರ್ಕಾರ ಜನಾಂಗವನ್ನು ಕೇವಲ ಮತಬ್ಯಾಂಕ್‌ನಂತೆ ಬಳಕೆ ಮಾಡಿಕೊಂಡು ಚುನಾವಣೆ ಬಂದಾಗ ಒಂದೊಂದು ರೀತಿ ಹೇಳಿಕೆ ನೀಡಿ ನಂತರ ಅನುಷ್ಠಾನ ಮಾಡದಿರುವುದು ಖಂಡನೀಯ ಎಂದರು.
ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಯಾವುದೇ ಕಾರಣಕ್ಕೂ ಯಾವುದೇ ರೀತಿಯ ಪ್ರಭಾವಕ್ಕೆ ಮಣಿದು ಹೆಸರು ಬದಲಾವಣೆ ಮಾಡುವುದು ಸರಿಯಲ್ಲ, ಕೂಡಲೆ ನಿಗಮಕ್ಕೆ ಅಧ್ಯಕ್ಷರ ನೇಮಕ ಮಾಡಬೇಕು, ಕಾಡುಗೊಲ್ಲ ಜನಾಂಗ ವನ್ನು ಅಲೆಮಾರಿ- ಅರೆಅಲೆಮಾರಿ ಪಟ್ಟಿಗೆ ಸೇರಿಸಬೇಕು, ಕಾಡುಗೊಲ್ಲ ಜನಾಂಗಕ್ಕೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡುವಂತೆ ಎಲ್ಲಾ ಜಿಲ್ಲೆ, ತಾಲೂಕು ಆಡಳಿತಕ್ಕೆ ಸರ್ಕಾರ ಸೂಚನೆ ನೀಡಬೇಕು. ಕಾಡುಗೊಲ್ಲರ ಹಟ್ಟಿಗಳನ್ನು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಬೇಕು. ಕಾಡುಗೊಲ್ಲ ಜನಪದ ಕಲಾವಿದರಿಗೆ ಮಾಸಾಶನ ನೀಡಬೇಕೆಂದು ಆಗ್ರಹಿಸಿ ಉಪ ತಹಶೀಲ್ದಾರ್‌ ಗೋವಿಂದರಾಜು ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘದ ಪ್ರಮುಖ ಪದಾಧಿಕಾರಿಗಳಾದ ತಾಪಂ ಮಾಜಿ ಸದಸ್ಯ ಕೃಷ್ಣ, ಉಮೇಶ, ಸತೀಶ್‌, ಶಿವಣ್ಣ, ಈರಣ್ಣ, ಪಾಂಡುಕುಮಾರ, ಶಿವರಾಜ, ಕೃಷ್ಣ ಕುಮಾರ, ಅಶೋಕ್‌, ನರಸಿಂಹಮೂರ್ತಿ, ನಾಗೇಶ, ನಾಗರಾಜ್‌, ಪೂಜಾರ್‌ ಕೃಷ್ಣಪ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!