ರಾಷ್ಟ್ರಭಕ್ತಿ ಮೂಡಿಸಲು ದೇಶಭಕ್ತಿ ಗೀತೆ ಗಾಯನ

370

Get real time updates directly on you device, subscribe now.

ತುಮಕೂರು: ಸಂಸ್ಕೃತಿ ಕಟ್ಟುವ ಮೂಲಕ ರಾಷ್ಟ್ರ ಭಕ್ತಿ ಮೂಡಿಸುವ ನಿಟ್ಟಿನಲ್ಲಿ ಆನ್ ಲೈನ್‌ ಮೂಲಕ ದೇಶಭಕ್ತಿ ಗೀತೆ ಗಾಯನ ಮತ್ತು ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾನ ಮನಸ್ಕರು ಸೇರಿ ಇಂದಿನ ಯುವ ಜನರಲ್ಲಿ ಮರೆಯಾಗುತ್ತಿರುವ ಐಕ್ಯತೆ, ರಾಷ್ಟ್ರ ಪ್ರೇಮವನ್ನು ಪುನರ್‌ ಸ್ಥಾಪಿಸುವ ನಿಟ್ಟಿನಲ್ಲಿ ಈ ಬೃಹತ್ ಅಭಿಯಾನ ಆಯೋಜಿಸಿದ್ದು, 2021ರ ಆಗಸ್ಟ್ 15 ರಂದು ವಿವಿಧ ಗಣ್ಯರು, ಮಠಾಧೀಶರು ಉದ್ಘಾಟಿಸಿ ಶುಭ ಹಾರೈಸಿದ್ದಾರೆ. ನಮ್ಮ ಸಂವಿಧಾನ, ಸಂಸ್ಕೃತಿ, ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಸ್ಪರ್ಧೆ, ಸಮರ್ಪಣೆ ಮತ್ತು ಸಂವಾದ ಎಂಬ ಮೂರು ವಿಷಯ ಆಯ್ಕೆ ಮಾಡಿಕೊಂಡು ಅಭಿಯಾನ ಆರಂಭಿಸಲಾಗಿದೆ ಎಂದರು.
ರಾಷ್ಟ್ರಭಕ್ತಿ ಗೀತೆ ಗಾಯನ ಮತ್ತು ನೃತ್ಯ ಸ್ಪರ್ಧೆಯ ಸಂಚಾಲಕ ರವಿ ಹೊಯ್ಸಳ ಮಾತನಾಡಿ, ಇಂದಿನ ಮಕ್ಕಳಲ್ಲಿ ರಾಷ್ಟ್ರಗೀತೆಯ ಬಗ್ಗೆ ಅರಿವು ಇಲ್ಲ, ಸ್ವಾತಂತ್ರದ ಹಿಂದಿನ ತ್ಯಾಗ, ಬಲಿದಾನಗಳ ಪರಿಚಯವೇ ಇಲ್ಲದಂತಾಗಿದೆ. ದೇಶದಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಆಂದೋಲನ ಆಯೋಜಿಸಿದ್ದು, ಇದುವರೆಗೂ ದೇಶ, ವಿದೇಶಗಳ 97 ಸ್ಥಳಗಳಿಂದ ಸುಮಾರು 7500ಕ್ಕೂ ಹೆಚ್ಚು ಜನರು ಈ ಆನ್ ಲೈನ್‌ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ತಮ್ಮ ಹೆಸರು ನೋಂದಾಯಿಸಿ ಭಾರತದ ರಾಷ್ಟ್ರಗೀತೆ ಹಾಡಿ ನಮಗೆ ಪೋಸ್ಟ್ ಮಾಡಿದ್ದಾರೆ. ಪಾಕಿಸ್ತಾನ, ಕತಾರ್‌, ಯುಎಇ ನಂತಹ ರಾಷ್ಟ್ರಗಳಿಂದಲೂ ಸ್ಪರ್ಧೆಗೆ ನೋಂದಾಯಿಸಿದ್ದಾರೆ. 25 ರಿಂದ 44 ವರ್ಷದವರು ಹೆಚ್ಚಿನ ರೀತಿಯಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ದೇಶಭಕ್ತಿ ಗೀತೆ ಗಾಯನ ಮತ್ತು ನೃತ್ಯ ಸ್ಪರ್ಧೆ ಜಿಲ್ಲಾ ಸಮಿತಿ ಅಧ್ಯಕ್ಷ ಎಸ್‌.ಪಿ.ಚಿದಾನಂದ್‌ ಮಾತನಾಡಿ, ಸಂಸ್ಕೃತಿ ಮತ್ತು ಹಕ್ಕು ಕರ್ತವ್ಯಗಳ ಬಗ್ಗೆ ವರ್ಷ ಪೂರ್ತಿ ನಡೆಸಲು ಜಿಲ್ಲಾ ಸಮಿತಿ ನಿರ್ಧರಿಸಿದ್ದು, ಇದುವರೆಗೆ 97 ದೇಶಗಳ 7618 ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಸಂವಾದ ಮುಖ್ಯವಾಗಿದ್ದು, ಜಿಲ್ಲಾ ಮಟ್ಟದಲ್ಲಿಯೂ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಜ.26 ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ದೇಶಭಕ್ತಿ ಗೀತಗಾಯನ ಮತ್ತು ನೃತ್ಯ ಸ್ಪರ್ಧೆ ಏಕಕಾಲದಲ್ಲಿ ಮಾಡಲಾಗುವುದು, ಇದರಲ್ಲಿ 5 ವರ್ಷದಿಂದ 75 ವರ್ಷದವರೆಗಿನ ಎಲ್ಲರು ಪಾಲ್ಗೊಳ್ಳಬಹುದಾಗಿದೆ. ಜಯ ಭಾರತ ಜನನಿಯ ತನುಜಾತೆ, ತಾಯಿ ಶಾರದೆ ಲೋಕಪೂಜಿತೆ, ಕಲಿಸು ಗುರುವೇ ಕಲಿಸು, ಪುಣ್ಯಕೋಟಿ ಹಾಡು,
ಜಯುತು ಜಯತು ಸತ್ಯ ಮೇವ ಜಯತು, ದೇಶ ದೇಶ ದೇಶ ನನ್ನದು, ಕಾಯೋ ಶ್ರೀಗೌರಿಶ, ಮೈಸೂರು ಸಂಸ್ಥಾನದ ನಾಡಗೀತೆ, ವಂದೇ ಮಾತರಂ, ರಾಷ್ಟ್ರಗೀತೆಗಳನ್ನು ಸಂಸ್ಥೆ ಆಯ್ಕೆ ಮಾಡಿದ್ದು, ಇವುಗಳನ್ನು ಕಲಿತು ಹಾಡುವ ಮೂಲಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದೆಂದರು.
ದೇಶಭಕ್ತಿ ಗೀತಗಾಯನ ಮತ್ತು ನೃತ್ಯ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶಭಕ್ತಿ.ಡಾಟ್‌.ಕಾಂ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ, ವ್ಯವಸ್ಥೆಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ನೋಂದಾಯಿಸಿಕೊಂಡವರು ಜ.26 ರ ಸಮರ್ಪಣಾ ದಿನದಲ್ಲಿ ಭಾಗವಹಿಸಿ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಭಾಗವಹಿಸುವ ಎಲ್ಲರಿಗೂ ಪ್ರಶಂಶನಾ ಪತ್ರದ ಜೊತೆಗೆ, ನೆನಪಿನ ಕಾಣಿಕೆ ನೀಡಲಾಗುವುದು ಎಂದು ದೇಶಭಕ್ತಿ ಗೀತ ಗಾಯನ ಮತ್ತು ನೃತ್ಯ ಸ್ಪರ್ಧೆಯ ರಾಜ್ಯ ಕಾರ್ಯದರ್ಶಿ ಹಚ್‌.ಜಿ.ಚಂದ್ರಶೇಖರ್‌ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೋಶಾಧ್ಯಕ್ಷ ಆರ್‌.ಎಲ್‌.ರಮೇಶ್ ಬಾಬು ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!