ರಾಜಕೀಯ ಚಾಣಾಕ್ಷ ದೊಡ್ಡಗೌಡರಿಗೆ ಇದೆಂಥಾ ಹಿನ್ನಡೆ?

ಎದುರಾಳಿ ಸೋಲಿಸಲು ಹೋಗಿ ತಮ್ಮ ಅಭ್ಯರ್ಥಿಯನ್ನೇ ಗೆಲ್ಲಿಸಲಿಲ್ಲ

202

Get real time updates directly on you device, subscribe now.


ಈಶ್ವರ್‌ ಎಂ
ತುಮಕೂರು: ತುಮಕೂರು ವಿಧಾನ ಪರಿಷತ್‌ ಚುನಾವಣೆ ಫಲಿತಾಂಶ ಬಂದು ಎರಡು ದಿನ ಕಳೆದಿದೆ, ಸೋತ ಅಭ್ಯರ್ಥಿಗಳು ಮತ್ತು ಅವರ ಪಕ್ಷದ ನಾಯಕರು ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತಿದ್ದಾರೆ, ಆದರೆ ಪಕ್ಷಗಳ ಕಾರ್ಯಕರ್ತರ ಅಭಿಪ್ರಾಯಗಳೇ ಬೇರೆ ಆಗಿವೆ, ಬಿಜೆಪಿ ಅಭ್ಯರ್ಥಿಯನ್ನು ಬಿಜೆಪಿ ನಾಯಕರೇ ಸೋಲಿಸಿದ್ರು ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಜೆಡಿಎಸ್‌ ಅಭ್ಯರ್ಥಿ ಅನಿಲ್ ಕುಮಾರ್‌ ಅವರ ಸೋಲಿನ ಕಾರಣಗಳು ಭಿನ್ನವಾಗೇನು ಇಲ್ಲ.

ಇಲ್ಲಿ ಪ್ರಮುಖವಾಗಿ ಜೆಡಿಎಸ್‌ ಎಂಎಲ್‌ಸಿ ಚುನಾವಣೆಯನ್ನು ಗೆಲ್ಲಲೇಬೇಕು ಎಂದು ಪ್ರತಿಷ್ಠೆಯಾಗಿ ಸ್ವೀಕರಿಸಲಾಗಿತ್ತು, ಜೆಡಿಎಸ್‌ ವರಿಷ್ಠರಾದ ದೇವೇಗೌಡರು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಪ್ರಚಾರ ನಡೆಸಿದರು, ಲೋಕಸಭೆ ಚುನಾವಣೆಯಲ್ಲಿ ತನ್ನ ಸೋಲಿಗೆ ಕಾರಣರಾದ ಕೆ.ಎನ್‌.ರಾಜಣ್ಣ ಅವರ ಮಗ, ಕಾಂಗ್ರೆಸ್‌ ಅಭ್ಯರ್ಥಿ ರಾಜೇಂದ್ರ ಅವರನ್ನು ಸೋಲಿಸಿಯೇ ತೀರಬೇಕು ಎಂಬಂತೆ ಹಠಕ್ಕೆ ಬಿದ್ದರು, ಹೋದಲ್ಲಿ ಬಂದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋಲಿಸಿ ಜೆಡಿಎಸ್‌ ಅಭ್ಯರ್ಥಿ ಅನಿಲ್ ರನ್ನು ಗೆಲ್ಲಿಸಿ ಎಂದು ಹೇಳುತ್ತಿದ್ದರು, ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸುವುದೊಂದೆ ದೊಡ್ಡಗೌಡರ ಮುಖ್ಯ ಗುರಿಯಾಗಿದ್ದು ಬಿಟ್ಟರೆ ತಮ್ಮ ಅಭ್ಯರ್ಥಿ ಗೆಲುವಿಗೆ ಬೇಕಾದ ತಂತ್ರಗಾರಿಕೆಯನ್ನೇ ರೂಪಿಸಲಿಲ್ಲ, ಮತದಾರರನ್ನು ತಲುಪುವ ಕೆಲಸ ಮಾಡಲೇ ಇಲ್ಲ, ಈ ಒಂದು ಅಂಶವೂ ಜೆಡಿಎಸ್‌ ಅಭ್ಯರ್ಥಿ ಸೋಲಿಗೆ ಕಾರಣವಾಯಿತು ಎಂಬುದು ಹಲವರ ವಿಶ್ಲೇಷಣೆ.
ಇನ್ನು ಜೆಡಿಎಸ್‌ ಅಭ್ಯರ್ಥಿ ಪರ ಕೆಲ ಜೆಡಿಎಸ್‌ ನಾಯಕರು ಸಮರ್ಪಕವಾಗಿ ಕೆಲಸ ಮಾಡಲಿಲ್ಲ, ಅಭ್ಯರ್ಥಿ ನಮಗೆ ಸ್ಪಂದಿಸುತ್ತಿಲ್ಲ, ಮತದಾರರನ್ನು ಸೆಳೆಯಲು ಬೇಕಾದ ಆರ್ಥಿಕ ನೆರವು ನೀಡುತ್ತಿಲ್ಲ ಎಂಬ ದೂರು ಹೇಳಿಕೊಂಡು ಕಾಲ ಕಳೆದಿದ್ದು ಬಿಟ್ಟರೆ ಪ್ರತಿ ತಾಲ್ಲೂಕಿನ ಜೆಡಿಎಸ್‌ ಮಾಜಿ ಶಾಸಕರು, ನಾಯಕರು ತಮ್ಮ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಲಿಲ್ಲ ಎಂಬ ಮಾತುಗಳು ಜೆಡಿಎಸ್‌ ವಲಯದಿಂದಲೇ ಕೇಳಿ ಬರುತ್ತಿವೆ.
ಜೆಡಿಎಸ್‌ ಬೆಂಬಲಿತ ಮತದಾರರೇ ಹೆಚ್ಚಿದ್ದರೂ ಆ ಮತಗಳನ್ನು ತಮ್ಮ ಪಕ್ಷದ ಅಭ್ಯರ್ಥಿಗೆ ಹಾಕಿಸಿಕೊಳ್ಳುವಲ್ಲಿ ಜೆಡಿಎಸ್‌ ನಾಯಕರು ವಿಫಲವಾಗಿದ್ದಾರೆ, ಅಭ್ಯರ್ಥಿ ಅನಿಲ್‌ ತಮ್ಮ ಬಂಧುಗಳನ್ನು ಕಟ್ಟಿಕೊಂಡು ಚುನಾವಣೆ ನಡೆಸಲು ಮುಂದಾಗಿದ್ದಾರೆ, ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು ಎಂದು ನಾಯಕರು ಮಾಡಿದ ಅಸಡ್ಡೆಯೂ ಜೆಡಿಎಸ್‌ ಸೋಲಿಗೆ ಒಂದು ಕಾರಣ ಎನ್ನಲಾಗಿದೆ.
ಇನ್ನು ಮಾಜಿ ಮುಖ್ಯಮಂತ್ರಿ ಒಂದೆಡರು ಬಾರಿ ಬಂದು ಹೋಗಿದ್ದು ಬಿಟ್ಟರೆ ಹೆಚ್ಚು ಪ್ರಚಾರ ಮಾಡಲಿಲ್ಲ, ಅಲ್ಲದೆ ಜೆಡಿಎಸ್‌ ಅಭ್ಯರ್ಥಿ ಗೆಲ್ಲಿಸಿಕೊಳ್ಳಿ ಎಂದು ಜಿಲ್ಲಾ ಜೆಡಿಎಸ್‌ ನಾಯಕರಿಗೆ ಖಡಕ್‌ ಸೂಚನೆ ನೀಡದೆ ಇರೋದು ಕೂಡ ಜೆಡಿಎಸ್‌ಗೆ ಹಿನ್ನಡೆಯಾಗಿದೆ, ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್‌ ಹಾಗೂ ಮಧುಗಿರಿ ಶಾಸಕ ವೀರಭದ್ರಯ್ಯ ಅವರ ಉತ್ತಮ ಪ್ರಯತ್ನದ ನಡುವೆಯೂ ಜೆಡಿಎಸ್‌ ಅಭ್ಯರ್ಥಿ ಮತ ಗಳಿಸುವಲ್ಲಿ ವಿಫರಾಗಿ ಬಿಟ್ಟರು.
ಇದೆಲ್ಲರ ಮಧ್ಯೆ ಚುನಾವಣೆಗೆ ಇನ್ನೆರಡು ದಿನವಿರುವಾಗ ಅಭ್ಯರ್ಥಿ ಚುನಾವಣೆ ಖರ್ಚಿಗಿಟ್ಟುಕೊಂಡಿದ್ದ ಕೋಟಿ ಕೋಟಿ ಹಣ ಕಾಣೆಯಾಯಿತು ಎಂಬ ಸುದ್ದಿ ದೊಡ್ಡ ಸದ್ದು ಮಾಡಿತು, ಹಣವಿಲ್ಲದೆ ಮತದಾರರನ್ನು ತಲುಪುವುದಾದರೂ ಹೇಗೆ ಎಂಬ ಪ್ರಶ್ನೆ ಎದುರಾಗಿ ಅಭ್ಯರ್ಥಿ ಕಂಗಾಲಾಗಿ ಕುಳಿತುಕೊಳ್ಳುವಂತಾಯಿತು, ಇದು ಕೂಡ ಅಭ್ಯರ್ಥಿಗೆ ಚುನಾವಣೆಯಲ್ಲಿ ಹಿನ್ನಡೆಯಾಗಲು ಕಾರಣವಾಯಿತು ಎಂಬ ಮಾತುಗಳು ಗುಟ್ಟಾಗಿ ಉಳಿಯಲ್ಲಿಲ್ಲ.
ಆರಂಭದಲ್ಲಿ ಉತ್ಸಾಹದಿಂದ ಇದ್ದ ಜೆಡಿಎಸ್‌ ಅಭ್ಯರ್ಥಿ ಅನಿಲ್‌ ಕುಮಾರ್‌ ಚುನಾವಣೆ ಎದುರಿಸುವ ವೇಳೆಗೆ ಹಲವು ಷಡ್ಯಂತ್ರಕ್ಕೆ ಸಿಕ್ಕಿ ಸೋಲು ಅನುಭವಿಸಿದ್ದಾರೆ, ಮುಂದೆ ಅವರು ಮತ್ತೊಂದು ಚುನಾವಣೆಯಲ್ಲಿ ಪುಟಿದೇಳುತ್ತಾರೆ, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಬಂದರು ಅಚ್ಚರಿ ಇಲ್ಲ ಎಂದು ಜೆಡಿಎಸ್‌ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.

Get real time updates directly on you device, subscribe now.

Comments are closed.

error: Content is protected !!