ಸರ್ಕಾರ ಕೂಡಲೇ ಕೊವಿಡ್‌ ಪರಿಹಾರ ನೀಡಲಿ

163

Get real time updates directly on you device, subscribe now.


ಕುಣಿಗಲ್‌: ಕೊವಿಡ್‌ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಕೆಲ ದಾಖಲೆಗಳ ಕೊರತೆಯಿಂದ ಪರಿಹಾರ ವಿತರಣೆ ವಿಳಂಬ ಮಾಡುತ್ತಿರುವುದು ಸರಿಯಲ್ಲ, ಈ ನಿಟ್ಟಿನಲ್ಲಿ ಇರುವ ತೊಡಕು ಬಗೆಹರಿಸಲು ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಶಾಸಕ ಡಾ.ರಂಗನಾಥ್ ಹೇಳಿದರು.
ಶನಿವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ವಿವಿಧ ಯೋಜನೆಯ ಫಲಾನುಭವಿಗಳಿಗೆ ಪರಿಹಾರದ ಚೆಕ್‌ ವಿತರಿಸಿ ಮಾತನಾಡಿ, ಕೊವಿಡ್‌ ಸೋಂಕು ಉಲ್ಬಣಗೊಂಡ ಸಮಯದಲ್ಲಿ ಸರ್ಕಾರ ಸಮರ್ಪಕ ಕ್ರಮ ಕೈಗೊಳ್ಳಲಿಲ್ಲ, ಕೊವಿಡ್‌ನಿಂದ ಮೃತಪಟ್ಟವರ ದಾಖಲೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಿಲ್ಲ, ಪ್ರತಿಪಕ್ಷಗಳ ಸತತ ಹೋರಾಟದ ಪರಿಣಾಮ ವಿಳಂಬವಾಗಿ ಪರಿಹಾರ ವಿತರಣೆ ಮಾಡುತ್ತಿದೆ, ಕೊವಿಡ್‌ನಿಂದ ಮೃತಪಟ್ಟವರ ಕುಟುಂಬಗಳು ಪರಿಹಾರದ ನೆರವು ಪಡೆಯಲು ಸಾಕಷ್ಟು ದಾಖಲೆ ಕೇಳಲಾಗುತ್ತಿದೆ, ಇವುಗಳಲ್ಲಿ ಕೆಲವನ್ನು ಒದಗಿಸಲು ಕುಟುಂಬದವರು ಪರದಾಡುವಂತಾಗಿದೆ, ಈ ನಿಟ್ಟಿನಲ್ಲಿ ಸರ್ಕಾರ ಮಾರ್ಗಸೂಚಿಗಳ ಸರಳಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡಹೇರಲಾಗುವುದು ಎಂದರು.
ಪರಿಹಾರ ಧನದ ಚೆಕ್‌ ಪಡೆದ ಫಲಾನುಭವಿಗಳು ಅನುದಾನ ಪೋಲು ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು, ಸಾಧ್ಯವಾದಷ್ಟು ಮಟ್ಟಿಗೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇಡುವಂತೆ ಸಲಹೆ ನೀಡಿದರು, ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ ಬಹುತೇಕ ಕಡೆಗಳಲ್ಲಿ ಮನೆಗಳು ಹಾನಿಯಾಗಿದ್ದು ಮನೆ ಹಾನಿಯಾದವರು ಸೂಕ್ತ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬೇಕು, ಅಧಿಕಾರಿಗಳು ಸಹ ಯೋಜನೆಯ ಬಗ್ಗೆ ಮಾಹಿತಿ ಇಲ್ಲದ ಜನತೆಗೆ ಸೂಕ್ತ ಮಾಹಿತಿ ನೀಡಿ ಸರ್ಕಾರದ ಸವಲತ್ತುಗಳ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಕೊವಿಡ್‌ ಸೋಂಕಿನಿಂದ ಮರಣ ಹೊಂದಿದವರ ವಾರಸುದಾರರಿಗೆ ಮೂವತ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ಹಾಗೂ ಮನೆ ಹಾನಿಗೊಂಡ 58 ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಲೀಕರಿಗೆ ಪರಿಹಾರ ಧನದ ಚೆಕ್‌ ವಿತರಿಸಿದರು. ತಹಶೀಲ್ದಾರ್‌ ಮಹಾಬಲೇಶ್ವರ್‌ ಸೇರಿದಂತೆ ಕಂದಾಯ ಇಲಾಖೆಯ ವಿವಿಧ ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!