ಶಿರಾ: ಪ್ರಸ್ತುತ ಶಿರಾ ನಗರ ಸಭೆಯ ಆಡಳಿತದ ಚುಕ್ಕಾಣಿ ಹಿಡಿಯಲು ನಡೆಯುತ್ತಿರುವ ಚುನಾವಣೆಯನ್ನು ಬಿಜೆಪಿ ಪಕ್ಷ ಪ್ರತಿಷ್ಠೆಯಾಗಿ ಪರಿಗಣಿಸಿದೆ ಎಂದು ರಾಜ್ಯ ತೆಂಗಿನ ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ ತಿಳಿಸಿದರು.
ಇಲ್ಲಿನ ಬುಕ್ಕಾಪಟ್ಟಣ ರಸ್ತೆಯಲ್ಲಿರುವ ಸೇವಾ ಸದನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಗರಸಭೆಯ 31 ವಾರ್ಡ್ ಗಳ ಪೈಕಿ 24ರಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಅದರಲ್ಲಿ 15ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವ ಮೂಲಕ ಮೊದಲ ಬಾರಿಗೆ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದರು.
ಕಳೆದ ಲೋಕಸಭಾ ಚುನಾವಣೆ ಮತ್ತು ಶಾಸಕ ಸ್ಥಾನಕ್ಕೆ ನಡೆದ ಉಪ ಚುನಾವಣೆಗಳಲ್ಲಿ ನಗರದ ಜನತೆ ಬಿಜೆಪಿಯನ್ನು ಅಪೂರ್ವವಾಗಿ ಬೆಂಬಲಿಸಿದ್ದು, ಈಗಲೂ ಜನತೆ ಬಿಜೆಪಿಯ ಪರವಾಗಿ ಮತಚಲಾಯಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಚುನಾವಣೆ ನಡೆದಿದ್ದು 9 ವರ್ಷಗಳ ಹಿಂದೆ, ಮೂರು ವರ್ಷಗಳಿಂದ ಆಡಳಿತ ಮಂಡಳಿ ಇಲ್ಲದೆ ಶಿರಾ ನಗರ ಅಭಿವೃದ್ಧಿ ಕುಂಠಿತಗೊಂಡಿದೆ. ನಗರದ ಅಭಿವೃದ್ಧಿಗಾಗಿ ಜನರು ಬಿಜೆಪಿ ಬೆಂಬಲಿಸಬೇಕು ಎಂದು ಕೋರಿದರು.
ನಮ್ಮ ಸರ್ಕಾರ ನೀರಿನ ಬೇಡಿಕೆ ಈಡೇರಿಸಿದ ನಂತರ ವಿರೋಧಿಗಳಿಗೆ ಚುನಾವಣೆ ಎದುರಿಸಲು ಯಾವುದೇ ಅಸ್ತ್ರಗಳು ಸಿಗುತ್ತಿಲ್ಲ. ಅದಕ್ಕಾಗಿ ಹತಾಶಗೊಂಡ ವಿರೋ ಪಕ್ಷಗಳು ಶಾಸಕರನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಲು ಯತ್ನಿಸುತ್ತೇವೆ, ಸಾಮಾಜಿಕ ಜಾಲತಾಣಗಳಲ್ಲಿ ಭೂಕಬಳಿಕೆ ವಿಚಾರವಾಗಿ ವಿರೋಧ ಪಕ್ಷಗಳು ಹಾಕುತ್ತಿರುವ ಪೋಸ್ಟ್ ಗಳ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಶಾಸಕರು ಕ್ಲೀನ್ ಚಿಟ್ ಪಡೆದಿದ್ದಾರೆ. ನ್ಯಾಯಾಲಯದಲ್ಲೇ ಕ್ಲೀನ್ ಚಿಟ್ ಪಡೆದ ಶಾಸಕರ ವಿರುದ್ಧ ಅಪಪ್ರಚಾರ ಮಾಡುತ್ತಿರುವ ವಿರೋಧಪಕ್ಷಗಳು ತಮ್ಮ ನೈತಿಕ ಅಧಃಪತನ ಪ್ರದರ್ಶಿಸುತ್ತಿವೆ ಎಂದು ವ್ಯಂಗ್ಯವಾಡಿದರು.
ಪ್ರಸ್ತುತ ನಗರಸಭೆ ಚುನಾವಣೆ ಉಸ್ತುವಾರಿ ವಹಿಸಿರುವ ಗುಬ್ಬಿ ದಿಲೀಪ್ ಮಾತನಾಡಿ ಬಿಜೆಪಿ ಪಕ್ಷ ಎಲ್ಲ ವರ್ಗದ ಜನರನ್ನು ಗುರುತಿಸಿ ಟಿಕೆಟ್ ಹಂಚಿಕೆ ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದೆ. ಶಿರಾ ನಗರಸಭೆಯ ಅಧಿಕಾರದ ಗದ್ದುಗೆ ಇರುವುದೇ ಬಿಜೆಪಿಯ ಗುರಿ ಎಂದರು.
ಸಹಉಸ್ತುವಾರಿ ಪ್ರಭಾಕರ್, ಕೃಷ್ಣಮೂರ್ತಿ, ಪಕ್ಷದ ಮಾಜಿ ನಗರಾಧ್ಯಕ್ಷ ಲಕ್ಷ್ಮೀನಾರಾಯಣ, ಲತಾ ಕೃಷ್ಣ, ಪದ್ಮ, ನೇರಲಗುಡ್ಡ ಶಿವಕುಮಾರ್, ಡಿಶ್ ಜಗ್ಗಣ್ಣ, ಸತೀಶ್ ಮೊದಲಾದವರು ಇದ್ದರು.
ಶಿರಾ ನಗರಸಭೆ ಆಡಳಿತ ಬಿಜೆಪಿ ತೆಕ್ಕೆಗೆ- ಬಿಕೆಎಂ ವಿಶ್ವಾಸ
Get real time updates directly on you device, subscribe now.
Prev Post
Next Post
Comments are closed.