ಗೊಲ್ಲರಹಟ್ಟಿಗೆಳಿಗೆ ಅಗತ್ಯ ಸೌಲಭ್ಯ ಬೇಕಿದೆ: ರವೀಂದ್ರ ಶೆಟ್ಟಿ

377

Get real time updates directly on you device, subscribe now.

ತುಮಕೂರು: ಮಂಗಳವಾರ ತುಮಕೂರು ಜಿಲ್ಲೆಗೆ ಭೇಟಿ ನೀಡಿದ್ದ ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವೀಂದ್ರಶೆಟ್ಟಿ ಅವರು ವಿವಿಧ ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿ, ಸಮುದಾಯದ ಕುಂದು ಕೊರತೆ ಆಲಿಸಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ದೇವರಹಟ್ಟಿ, ಮಾರನಹಟ್ಟಿ, ಮೈಲನಹಟ್ಟಿ, ದೊಮ್ಮನಕುಪ್ಪೆ ಸೇರಿದಂತೆ ಹಲವು ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿದ್ದ ರವೀಂದ್ರ ಶೆಟ್ಟಿ, ಹಟ್ಟಿಗಳ ಮುಖಂಡರು, ಮಹಿಳೆಯರೊಂದಿಗೆ ಮಾತುಕತೆ ನಡೆಸಿ, ಅವರ ಸಮಸ್ಯೆ ಕೇಳಿದರು.
ಈ ವೇಳೆ ಮಾತನಾಡಿದ ರವೀಂದ್ರ ಶೆಟ್ಟಿ, ಸುಮಾರು 46 ಜಾತಿಗಳನ್ನು ಒಳಗೊಂಡಿರುವ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಜನರ ಸ್ಥಿತಿಗತಿ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಹಲವು ಸಂಗತಿಗಳನ್ನು ಅರಿಯುವ ನಿಟ್ಟಿನಲ್ಲಿ ರಾಜ್ಯ ಪ್ರವಾಸ ಕೈಗೊಂಡಿದ್ದು, ತುಮಕೂರು ಜಿಲ್ಲೆಯ ಕೆಲವು ಹಟ್ಟಿಗಳಿಗೆ ಮುಖಂಡರೊಂದಿಗೆ ಭೇಟಿ ನೀಡಿದ್ದೇನೆ, ಗೊಲ್ಲರಹಟ್ಟಿಗಳ ಸ್ಥಿತಿ ನೋಡಿದರೆ ನಿಜಕ್ಕೂ ಬೇಸರವೆನಿಸುತ್ತದೆ, ಹಲವಾರು ಮೂಲಭೂತ ಸೌಕರ್ಯಗಳ ಕೊರತೆಯನ್ನು ಗೊಲ್ಲರಹಟ್ಟಿಗಳು ಅನುಭವಿ ಸುತ್ತಿವೆ, ಸರಿಯಾದ ಮನೆಗಳಿಲ್ಲ, ಗ್ರಾಮದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಹಲವು ಕಡೆಗಳಲ್ಲಿ ಇಲ್ಲ, ಈ ಕುರಿತು ಸಮಗ್ರ ವರದಿ ತಯಾರಿ ಸರಕಾರಕ್ಕೆ ಸಲ್ಲಿಸುವ ಮೂಲಕ ನಿಗಮಕ್ಕೆ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುವುದಾಗಿ ತಿಳಿಸಿದರು.
ಗೊಲ್ಲ ಸಮುದಾಯ ಕುರಿ,ಮೇಕೆ ಹಾಗೂ ಪಶುಸಂಗೋಪನೆಯಲ್ಲಿ ತೊಡಗಿದ್ದು, ಅವರಿಗೆ ನಿಗಮದ ವತಿಯಿಂದ ಹೇಗೆ ಸಹಾಯ ಮಾಡಬಹುದು ಎಂಬ ನಿಟ್ಟಿನಲ್ಲಿ ಆಲೋಚನೆ ನಡೆದಿದೆ.ಅವರಿಗೆ ನಿಗಮದ ವತಿಯಿಂದ ಇರುವ ನೇರ ಸಾಲ, ಗಂಗಾ ಕಲ್ಯಾಣ,ಸ್ವ ಸಹಾಯ,ಸ್ವ ಉದ್ಯೋಗ ಮತ್ತು ಪಶುಭಾಗ್ಯ ಯೋಜನೆಗಳ ಮೂಲಕ ಹೇಗೆ ಸಹಕಾರ ನೀಡಬಹುದು ಎಂಬ ಚಿಂತನೆ ನಡಸಲಾಗಿದೆ. ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸುವಾಗ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಲಾಗುವುದು ಎಂದರು.
ಈ ವೇಳೆ ಟೂಡಾ ಸದಸ್ಯ ಜೆ.ಜಗದೀಶ್‌, ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಭಕ್ತ ಕುಚೇಲಪ್ಪ, ಕರ್ನಾಟಕ ಕಾಡುಗೊಲ್ಲರ ಯುವಸೇನೆಯ ರಾಜ್ಯ ಅಧ್ಯಕ್ಷ ಜಿ.ವಿ.ರಮೇಶ್‌, ಯುವ ಸೇನೆಯ ಪ್ರಚಾರ ಸಮಿತಿ ಅಧ್ಯಕ್ಷ ಆರ್‌.ಪ್ರಕಾಶ್‌, ಮೈಲನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಸ್‌.ಈರೇಗೌಡ, ದೇವರಹಟ್ಟಿಯ ಯುವ ಮುಖಂಡ ಉಮೇಶ್‌, ಹಿರಿಯರಾದ ಹೆಚ್‌.ಎಂ.ಟಿ.ಹನುಮಂತಯ್ಯ, ಬೀಡಾ ಬಾಬು, ಗಂಗಾಧರ್‌, ಸಿದ್ದಲಿಂಗಪ್ಪ, ಸತೀಶ್‌ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!